ರೈಲು ಅಪಘಾತ: ಮೃತನ ಕುಟುಂಬಕ್ಕೆ ₹8 ಲಕ್ಷ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ‘ರೈಲ್ವೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲು ಪ್ರಯಾಣದ ಟಿಕೆಟ್‌ ಇರಲಿಲ್ಲ ಎಂಬ ಕಾರಣಕ್ಕೆ ಆತನ ಕುಟುಂಬಕ್ಕೆ ಪರಿಹಾರ ನೀಡಲಾಗದು’ ಎಂಬ ವಾದವನ್ನು ತಳ್ಳಿ ಹಾಕಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳಿಗೆ ₹8 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಈ ಕುರಿತಂತೆ ವಿಜಯನಗರದ ಮೃತ ಅಮೀನ್‌ ಸಾಬ್‌ ಪತ್ನಿ ಫಜಲುನ್ನಬಿ (47) ಮತ್ತು ಆಕೆಯ ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ‍ಪುರಸ್ಕರಿಸಿದೆ.

‘ಘಟನೆ ನಡೆದ ತಕ್ಷಣ ವ್ಯಕ್ತಿ ಮೃತಪಟ್ಟಿದ್ದಾರೆ. ಕೂಡಲೇ ಅವರ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಹುಶಃ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಟಿಕೆಟ್ ಕಳೆದು ಹೋಗಿರಬಹುದು. ಹೀಗಾಗಿ, ಜೇಬಿನಲ್ಲಿ ಟಿಕೆಟ್‌ ಇರಲಿಲ್ಲ ಎಂಬ ಕಾರಣಕ್ಕೆ ಮೃತ ವ್ಯಕ್ತಿಯ ಕುಟುಂಬ ಪರಿಹಾರಕ್ಕೆ ಅರ್ಹ ಅಲ್ಲ’ ಎಂಬ ರೈಲ್ವೆ ಕ್ಲೇಮು ನ್ಯಾಯಮಂಡಳಿ ಆದೇಶವನ್ನು ನ್ಯಾಯಪೀಠ ತಳ್ಳಿ ಹಾಕಿದೆ.

‘ಮರಣೋತ್ತರ ಪರೀಕ್ಷಾ ವರದಿಗಳು ಮೃತ ವ್ಯಕ್ತಿ ರೈಲು ಅಪಘಾತದಲ್ಲಿಯೇ ಮೃತಪಟ್ಟಿರುವುದನ್ನು ಖಚಿತಪಡಿಸುತ್ತವೆ. ಆದ್ದರಿಂದ, ಮೃತರ ಕುಟುಂಬದ ಮೇಲ್ಮನವಿಯನ್ನು ಮಾನ್ಯ ಮಾಡಲಾಗುತ್ತಿದ್ದು ವಾರ್ಷಿಕ 8ರ ಬಡ್ಡಿ ದರದೊಂದಿಗೆ ₹8 ಲಕ್ಷ ಮೊತ್ತವನ್ನು ಕುಟುಂಬದ ಸದಸ್ಯರಿಗೆ ಪಾವತಿಸಬೇಕು’ ಎಂದು ಆದೇಶಿಸಿದೆ.

ಪ್ರಕರಣವೇನು?:

ಅಮೀನ್‌ ಸಾಬ್ ಮುಲ್ಲಾ 2015ರ ಏಪ್ರಿಲ್ 6ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ಮಹಾರಾಷ್ಟ್ರದ ಲಿಂಬಾಲಾ ಗ್ರಾಮಕ್ಕೆ ತೆರಳಲು ಟಿಕೆಟ್ ಖರೀದಿಸಿ ರೈಲನ್ನು ಏರಿದ್ದರು. ಆದರೆ, ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಕೆಳಗಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಮೃತನ ಕುಟುಂಬ ಪರಿಹಾರ ನೀಡುವಂತೆ ಕೋರಿ ರೈಲ್ವೆ ಕ್ಲೈಮ್‌ ನ್ಯಾಯಮಂಡಳಿ ಮೊರೆ ಹೋಗಿದ್ದರು. ನ್ಯಾಯಮಂಡಳಿ, ‘ಅಪಘಾತದಲ್ಲಿ ಅಮೀನ್‌ ಸಾಬ್ ಮುಲ್ಲಾ ಮೃತಪಟ್ಟಿರುವ ಬಗ್ಗೆ ರೈಲ್ವೆ ಇಲಾಖೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಮತ್ತು ಮೃತ ಪ್ರಯಾಣಿಕನ ಜೇಬಿನಲ್ಲಿ ಟಿಕೆಟ್ ದೊರೆತಿಲ್ಲ. ಹಾಗಾಗಿ, ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ನಿರಾಕರಿಸಿತ್ತು.  

Comments

Leave a Reply

Your email address will not be published. Required fields are marked *