ಶಂಕರನಾರಾಯಣ, ಮೇ 30, 2025: ಉಡುಪಿ ಜಿಲ್ಲೆಯ ಶಂಕರನಾರಾಯಣದ ಸಿದ್ದಾಪುರ ಗ್ರಾಮದ ಕೆಳಪೇಟೆಯಲ್ಲಿ ಅಕ್ರಮವಾಗಿ ದನಗಳನ್ನು ಕಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಗೋವಧೆಯ ಉದ್ದೇಶದಿಂದ ಕಳ್ಳತನದ ದನಗಳನ್ನು ಕಟ್ಟಿಹಾಕಿದ್ದ ಇಬ್ಬರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಮೇ 29, 2025ರ ಸಂಜೆ ನಡೆದಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ (ತನಿಖೆ) ಶಂಭುಲಿಂಗಯ್ಯ ಎಮ್.ಇ. ಅವರಿಗೆ ಸಿದ್ದಾಪುರ ಗ್ರಾಮದ ಕೆಳಪೇಟೆಯಲ್ಲಿ ಅಕ್ರಮ ಗೋವಧೆಗಾಗಿ ದನಗಳನ್ನು ಕಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿ ನಸು ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣದ ಗಂಡು ದನ-1, ಬಿಳಿ ಬಣ್ಣದ ಗಂಡು ದನ-1, ಕಪ್ಪು ಮತ್ತು ಬಿಳಿ ಮಿಶ್ರಿತ ಗಂಡು ದನ-1, ಹಾಗೂ ಇನ್ನೊಂದು ನಸು ಕೆಂಪು ಮತ್ತು ಬಿಳಿ ಮಿಶ್ರಿತ ಗಂಡು ದನ-1 ಒಟ್ಟು ನಾಲ್ಕು ದನಗಳನ್ನು ಕಂಡುಕೊಂಡಿದ್ದಾರೆ. ಈ ದನಗಳನ್ನು ಯಾವುದೇ ಪರವಾನಗಿ ಇಲ್ಲದೆ ಕಳ್ಳತನ ಮಾಡಿಕೊಂಡು ಬಂದು, ಮೇವು ಮತ್ತು ನೀರು ನೀಡದೆ ಹಿಂಸಾತ್ಮಕವಾಗಿ ಮರಕ್ಕೆ ಕಟ್ಟಿಹಾಕಲಾಗಿತ್ತು.
ಆರೋಪಿಗಳಾದ ರವಿಚಂದ್ರನ್ ಮತ್ತು ಆತನ ಅಣ್ಣ ನಾಗರಾಜ್ ಈ ದನಗಳನ್ನು ವಧೆ ಮಾಡಿ, ಮಾಂಸವನ್ನು ಗಿರಾಕಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಕಟ್ಟಿಹಾಕಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 54/2025ರ ಅಡಿಯಲ್ಲಿ ಕರ್ನಾಟಕ ಗೋವಧೆ ನಿಷೇಧ ಕಾಯ್ದೆಯ ಕಲಂ 4, 5, 7, 12, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 11(1)(ಡಿ), ಹಾಗೂ BNS ಕಲಂ 112, 303(2) ರಂತೆ ಪ್ರಕರಣ ದಾಖಲಾಗಿದೆ.
Leave a Reply