ಗಂಗೊಳ್ಳಿ: ಯುವ ಮೀನುಗಾರ ಸಮುದ್ರದಲ್ಲಿ ಕಾಣೆ

ಗಂಗೊಳ್ಳಿ, ಜೂನ್ 04, 2025: ಮಂಗಳೂರಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

ಪಿರ್ಯಾದಿದಾರರಾದ ಸಹಾಸ್‌ (25, ಮಂಗಳೂರು) ಇವರು ಮಂಗಳೂರಿನ ಬಂದರಿನಲ್ಲಿ IND-KA-01-MM-4219 ನೊಂದಣಿ ಸಂಖ್ಯೆಯ ‘ವಿಶ್ವನಾಗ್’ ಎಂಬ ಹೆಸರಿನ ಬೋಟ್‌ನ ಮಾಲೀಕರಾಗಿದ್ದು, ಈ ಬೋಟ್‌ನಲ್ಲಿ ಸುಮಾರು 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನಾಂಕ 20-05-2025 ರಂದು ಮಧ್ಯಾಹ್ನ 12:00 ಗಂಟೆಗೆ ಬೋಟ್‌ ಮೀನುಗಾರಿಕೆಗಾಗಿ ಮಂಗಳೂರಿನ ಬಂದರಿನಿಂದ ಹೊರಟಿತ್ತು.

ದಿನಾಂಕ 25-05-2025 ರಂದು ಬೆಳಿಗ್ಗೆ 11:45 ಗಂಟೆಗೆ ಬೋಟ್‌ನ ಚಾಲಕ ತಿರುಪತಿ ಅವರು ಪಿರ್ಯಾದಿದಾರರಿಗೆ ಕರೆ ಮಾಡಿ, ಸಮುದ್ರದಲ್ಲಿ ವಿಪರೀತ ಗಾಳಿಯಿಂದಾಗಿ ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಗಂಗೊಳ್ಳಿ ಬಂದರಿನ ಕಡೆಗೆ ವಾಪಸ್‌ ಬರುವಾಗ ಬೋಟ್‌ನ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸಿಕೊಂಡು ಮುಂದುವರಿಯುತ್ತಿರುವಾಗ, ರಾತ್ರಿ 10:30 ಗಂಟೆ ಸುಮಾರಿಗೆ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವಯಾಲ್‌ ರವಿ ಕುಮಾರ್‌ (21) ಎಂಬ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾನೆ.

ಈ ಘಟನೆಯ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2025, ಕಲಂ: ಗಂಡಸು ಕಾಣೆ ಎಂಬಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

Comments

Leave a Reply

Your email address will not be published. Required fields are marked *