ಕೋಟ: ಕಳ್ಳತನ ಆರೋಪಿಯ ಬಂಧನ, ಸ್ವತ್ತು ವಶ

ಕೋಟ, ಜೂನ್ 30, 2025: ಶಿರಿಯಾರ ಗ್ರಾಮದ ಶೀರ್ಣ ಕ್ರಾಸ್‌ ಬಳಿಯ ನಂದಿಕೇಶ್ವರ ಫಾಸ್ಟ್‌ ಫುಡ್‌ ಅಂಗಡಿಯ ಮಾಲೀಕ ಚೇತನ್‌ ದೇವಾಡಿಗ ಎಂಬವರು ತಮ್ಮ ಅಂಗಡಿಯಲ್ಲಿ ದಿನಾಂಕ 14.05.2025 ರಂದು ರಾತ್ರಿ 9:30 ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ 8:30 ಗಂಟೆಗೆ ಅಂಗಡಿಗೆ ಬಂದಾಗ, ಕಳ್ಳರು ಹಿಂಬದಿಯ ಶೀಟನ್ನು ಕತ್ತರಿಸಿ ಒಳಗಿನ ಸ್ವತ್ತುಗಳನ್ನು ಕಳವು ಮಾಡಿಕೊಂಡಿರುವುದು ಕಂಡುಬಂದಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅ.ಕೃ. 97/25, ಕಲಂ 305, 331(4) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿದೆ.

ಪೊಲೀಸ್‌ ಉಪಾಧೀಕ್ಷಕ ಶ್ರೀ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀ ಗೋಪಿಕೃಷ್ಣ ರವರ ಮಾರ್ಗದರ್ಶನದಲ್ಲಿ, ಕೋಟಾ ಪೊಲೀಸ್‌ ಠಾಣೆಯ ಪೊಲೀಸ್‌ ಉಪ-ನಿರೀಕ್ಷಕ ರಾಘವೇಂದ್ರ ಸಿ., ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಸುಧಾಪ್ರಭು, ಪಿಎಸ್‌ಐ (ತನಿಖೆ) ಹಾಗೂ ಸಿಬ್ಬಂದಿಗಳಾದ ಕೃಷ್ಣ ಶೇರೆಗಾರ, ವಿಜಯೇಂದ್ರ, ಮತ್ತು ದುಂಡಪ್ಪ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆರೋಪಿ ರಾಕೇಶ್‌ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು 70,000 ರೂ. ಮೌಲ್ಯದ ಕಳವುಗೊಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಶ್ರೀ ಹರಿರಾಮ ಶಂಕರ್‌, ಐಪಿಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್‌ ಮತ್ತು ಶ್ರೀ ಪರಮೇಶ್ವರ ಹೆಗಡೆ ರವರು ಅಭಿನಂದಿಸಿದ್ದಾರೆ.

Comments

Leave a Reply

Your email address will not be published. Required fields are marked *