ಗಂಗೊಳ್ಳಿ, ಜುಲೈ 5, 2025: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೇನಾಪುರ ರೈಲ್ವೆ ನಿಲ್ದಾಣದ ಸಮೀಪದ ಗುಡ್ಡೆ ಅಂಗಡಿ ರೈಲ್ವೆ ಮೇಲ್ ಸೇತುವೆಯ ಕೆಳಬಾಗದಲ್ಲಿ 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನ ಜರ್ಜರಿತ ಶವವು ಶನಿವಾರ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಗಂಗೊಳ್ಳಿ 24×7 ಆಂಬುಲೆನ್ಸ್ ನಿರ್ವಾಹಕ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ, ಸ್ವಯಂಸೇವಕ ವಿಕಾಸ್ ಮೊಗವೀರ ನಾಯಕವಾಡಿ, ಸ್ಥಳೀಯ ಯುವಕರಾದ ಭರತ ಗಾಣಿಗ, ಪಂಕಜ ದೇವಾಡಿಗ, ಪೊಲೀಸ್ ಇಲಾಖೆಯ ಎಎಸ್ಐ ಆನಂದ, ಹೆಡ್ ಕಾನ್ಸ್ಟೇಬಲ್ ಶಾಂತರಾಮ್ ಶೆಟ್ಟಿ ಮತ್ತು ಶರಣಪ್ಪ ಕೂಡಲ ಸೇರಿದಂತೆ ಹಲವರು ಶವವನ್ನು ಘಟನಾ ಸ್ಥಳದಿಂದ ಆಂಬುಲೆನ್ಸ್ಗೆ ಸಾಗಿಸಲು ಸಹಾಯ ಮಾಡಿದ್ದಾರೆ.
ಶವವು ಗುರುತು ಹಿಡಿಯಲಾರದಷ್ಟು ಜರ್ಜರಿತವಾಗಿದ್ದು, ಯಾವುದೇ ಹೆಸರು, ವಿಳಾಸ ಅಥವಾ ಕುರುಹುಗಳು ದೊರೆಯದ ಕಾರಣ, ಮೃತನ ಪಾರ್ಥಿವ ಶರೀರವನ್ನು ವಾರಸುದಾರರ ಪತ್ತೆಗಾಗಿ ಕುಂದಾಪುರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಮೃತನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.
Leave a Reply