ಡೆಲಿವರಿ ಬಾಯ್​ನಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ರವಾನೆ: ಹುಬ್ಬಳ್ಳಿಯಲ್ಲಿ ಆರೋಪಿ ಬಂಧನ

ಹುಬ್ಬಳ್ಳಿ(ಧಾರವಾಡ): “ಮಹಿಳೆಯರ ನಂಬರ್​​ ಪಡೆದು ಅವರಿಗೆ ಅಸಭ್ಯ ಮೆಸ್ಸೇಜ್​​ ಮಾಡುತ್ತಿದ್ದ ಕೊರಿಯರ್​​ ಡೆಲಿವರಿ ಬಾಯ್​ನನ್ನು ಬಂಧಿಸಲಾಗಿದೆ” ಎಂದು ಹು-ಧಾ ಪೊಲೀಸ್​ ಕಮಿಷನರ್​​ ಎನ್​. ಶಶಿಕುಮಾರ್​ ಹೇಳಿದರು.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಮಹಿಳೆಯರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ರಮೇಶ ರೆಡ್ಡಿ ಎಂಬಾತನನ್ನು ಗೋಕುಲ್​ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಇಬ್ಬರು ಮಹಿಳೆಯರಿಗೆ ಮೆಸ್ಸೇಜ್​ ಮಾಡಿ ಕಿರಿಕಿರಿ ಮಾಡಿರುವುದು ತನಿಖೆಯಲ್ಲಿ ‌ಕಂಡುಬಂದಿದೆ. ಈ ಕುರಿತಂತೆ ಎರಡು ಪ್ರತ್ಯೇಕ ‌ಪ್ರಕರಣ ದಾಖಲು ಮಾಡಿಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲಾಗಿದೆ” ಎಂದರು.

“ಕೊರಿಯರ್ ಡೆಲಿವರಿ ಮಾಡುವವರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅದರಲ್ಲಿ ‌ಒಂದು ಪರ್ಸೆಂಟ್ ಈ ತರಹ ಕೆಲಸ ಮಾಡುತ್ತಾರೆ. ಇದರಿಂದ ಇಡೀ ಕೊರಿಯರ್ ವೃತ್ತಿ ‌ನಂಬಿಕೊಂಡವರಿಗೆ ಕೆಟ್ಟ ಅಭಿಪ್ರಾಯ ಬರುತ್ತದೆ.‌ ಹೀಗಾಗಿ ಕಂಪನಿಯವರು ಕೆಲಸಕ್ಕೆ ತಗೆದುಕೊಳ್ಳುವವರ ಬಗ್ಗೆ ಗಮನ ಇಡಬೇಕು. ಒಂಟಿ‌ ಮಹಿಳೆಯರು, ಹಿರಿಯ ನಾಗರಿಕರು, ಹೆಣ್ಣು ಮಕ್ಕಳು ಡೆಲಿವರಿ ತಗೆದುಕೊಳ್ಳುತ್ತಾರೆ. ಒಬ್ಬರು ಈ ರೀತಿ ಮಾಡಿದರೆ, ಒಳ್ಳೆ ಕೆಲಸ ಮಾಡುವವರಿಗೆ ಕೆಟ್ಟ ಹೆಸರು ಬರುತ್ತದೆ. ಡೆಲಿವರಿ ಕೊಡುವವರು ಅನುಮಾನಾಸ್ಪದವಾಗಿ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು” ಎಂದು ಮನವಿ ಮಾಡಿದರು.

ರಮೇಶ್​ ರೆಡ್ಡಿ ಎಂಬ ಯುವಕ ಕೊರಿಯರ್​ ಡೆಲಿವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಇಂಥಹದ್ದೇ ಅಂತ ಕಂಪನಿ ಯಾವುದು ಇಲ್ಲ. ಹೆಚ್ಚುವರಿ ಡೆಲಿವರಿ ಮಾಡಲು ಇದ್ದಾಗ ಇವನನ್ನು ಸಂಪರ್ಕಿಸಿ, ಇವಾನ ಮುಖಾಂತರ ಡೆಲಿವರಿ ಮಾಡಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಡೆಲಿವರಿ ಮಾಡಿದಾಗ ಹೆಣ್ಣುಮಕ್ಕಳು ವಸ್ತುಗಳನ್ನು ಸ್ವೀಕರಿಸುತ್ತಿದ್ದಾಗ, ಅವರ ನಂಬರ್​ ತೆಗೆದುಕೊಂಡು ಅವರಿಗೆ ಹಾಯ್​ ಬೇಬಿ, ಹೌ ಆರ್​ ಯು, ಐ ವಾಂಟ್​ ಟು ಮೀಟ್​ ಯು ಅನ್ನುವ ರೀತಿಯಲ್ಲಿ ಮೆಸ್ಸೇಜ್​ ಹಾಕುವ ಮುಖಾಂತರ ಹೆಣ್ಣು ಮಕ್ಕಳಿಗೆ ಕಿರಿಕಿರಿ ಮಾಡುತ್ತಿದ್ದ ಎನ್ನುವಂತದ್ದು ನಮ್ಮ ಗಮನಕ್ಕೆ ಕಂಡುಬಂತು. ನಾವು ಪರಿಶೀಲನೆ ಮಾಡಿದಂತಹ ಸಂದರ್ಭದಲ್ಲಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಇದೇ ರೀತಿ ತೊಂದರೆ ಕೊಟ್ಟಿರುವಂತದ್ದು ಕಂಡುಬಂತು. ಹೀಗಾಗಿ ಪ್ರತ್ಯೇಕ ಪ್ರಕರಣವನ್ನು ದಾಖಲು ಮಾಡಿಕೊಂಡು ಸಂಬಂಧಪಟ್ಟ ರಮೇಶ್​ ರೆಡ್ಡಿ ಎಂಬ ವ್ಯಕ್ತಿ ವಿರುದ್ಧ ನಾವು ಅಗತ್ಯ ಕ್ರಮವನ್ನು ಕೈಗೊಂಡಿದ್ದೇವೆ- ಎನ್​. ಶಶಿಕುಮಾರ್​, ಹು-ಧಾ ಪೊಲೀಸ್​ ಕಮಿಷನರ್.

Comments

Leave a Reply

Your email address will not be published. Required fields are marked *