ಬೈಂದೂರು, ಜುಲೈ 12, 2025: ಬೈಂದೂರು ಠಾಣೆಯಲ್ಲಿ ನಡೆದ ದನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ ಕೈಪ್ ಸಾಸ್ತಾನ ಮತ್ತು ಕಾಪುವಿನ ಉಚ್ಚಿಲದ ಮೊಹಮ್ಮದ ಸುಹೇಲ್ ಖಾದರ ಬಂಧಿತ ಆರೋಪಿಗಳು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 4 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ 3 ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿ ಎಸ್. ಸುಧಾಕರ್ ನಾಯಕ್ ಮತ್ತು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತಾ ತೇಜ್ ಅವರ ನೇತೃತ್ವದಲ್ಲಿ ವಿಶೇಷ ಕಾಯಾಛರಣೆ ನಡೆಸಲಾಯಿತು.
ಪ್ರಕರಣದ ತನಿಖೆಗೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಪಿಎಸ್ಐ ತಿಮ್ಮೇಶ್ ಬಿ.ಎನ್., ಪಿಎಸ್ಐ ನವೀನ್ ಬೋರಾಕರ್ (ಬೈಂದೂರು ಠಾಣೆ), ಪಿಎಸ್ಐ ವಿನಯ್ (ಕೊಲ್ಲೂರು ಠಾಣೆ), ಮತ್ತು ಪಿಎಸ್ಐ ಬಸವರಾಜ್ (ಗಂಗೊಳ್ಳಿ ಠಾಣೆ) ಅವರು ಈ ತಂಡಗಳ ನೇತೃತ್ವ ವಹಿಸಿದ್ದರು. ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಮೋಹನ್, ಸುರೇಶ್, ಚೇತನ್, ಜಯರಾಮ್, ಸತೀಶ್, ಚಿದಾನಂದ, ಮಲ್ಲಪ್ಪ ದೇಸಾಯಿ, ಶ್ರೀಧರ್ ಪಾಟೀಲ್ ಮತ್ತು ಪರಯ್ಯ ಮಾತಾಪತಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
Leave a Reply