ಗಂಗೊಳ್ಳಿ, ಮೇ 19: ಮರವಂತೆ ಗ್ರಾಮದ ನೋಂದಾಯಿತ ಹಣಕಾಸು ಸಂಸ್ಥೆಯಾದ ಮರವಂತೆ ಮೀನುಗಾರರ ಸಹಕಾರ ಸಂಘದಲ್ಲಿ 12,42,175 ರೂಪಾಯಿ ವಂಚನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಗಂಗಾಧರ (31), ಜನವರಿ 1, 2020ರಿಂದ ಈ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 2013-14 ರಿಂದ 2018-19ರವರೆಗೆ ಈ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಶಾಂತಿ ಎಂ., ಸಂಘಕ್ಕೆ ಮೋಸ ಮಾಡುವ ಮತ್ತು ನಷ್ಟ ಉಂಟುಮಾಡುವ ಉದ್ದೇಶದಿಂದ 12,42,175 ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯವು ಪ್ರಶಾಂತಿ ಅವರಿಗೆ ಹಣವನ್ನು ಮರುಪಾವತಿಸುವಂತೆ ತೀರ್ಪು ನೀಡಿದ್ದರೂ, ಅವರು ಹಣವನ್ನು ವಾಪಸ್ ನೀಡದೆ ಸಂಘಕ್ಕೆ ವಂಚನೆ ಮಾಡಿದ್ದಾರೆ ಎಂದು ಗಂಗಾಧರ ದೂರು ಸಲ್ಲಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2025, ಕಲಂ 408, 417, 418 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
Leave a Reply