Category: Dakshina Kannada

  • ಕೊಳತ್ತಮಜಲು ಮಸೀದಿಯ ಆವರಣದಲ್ಲಿ ಅಬ್ದುಲ್ ರಹ್ಮಾನ್‌ರ ಅಂತ್ಯಕ್ರಿಯೆ

    ಮಂಗಳೂರು, 28 ಮೇ,2025: ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಅವರ ಅಂತಿಮ ಸಂಸ್ಕಾರವು ಬುಧವಾರ ಕುರಿಯಾಳ ಗ್ರಾಮದ ಇರಾಕೋಡಿಯ ಮಸೀದಿ ಆವರಣದಲ್ಲಿ ನೆರವೇರಿತು.

    ನೂರಾರು ಜನರು ಸೇರಿ ಅಂತಿಮ ದರ್ಶನ ಪಡೆದರು. ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಪ್ರಾರಂಭಿಕ ವಿಧಿಗಳು ಮುಗಿದ ಬಳಿಕ, ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಮನೆಯವರ ಕಣ್ಣೀರಿನ ಆಕ್ರಂದನ ಮನಕಲಕಿತು. ತದನಂತರ ಅಬ್ದುಲ್ ರಹ್ಮಾನ್ ಅವರ ತಂದೆ, ತಾಯಿ, ಸಹೋದರಿ, ಪತ್ನಿ ಮತ್ತು ಸಂಬಂಧಿಕರೊಂದಿಗೆ ಸಾವಿರಾರು ಜನರು ಅಂತಿಮ ದರ್ಶನ ಮಾಡಿದರು.

  • ಉಡುಪಿ: ಕಾರು ಅಫಘಾತ ಫೋಟೊಗ್ರಾಫರ್ ಸಾವು

    ಉಡುಪಿ, ಮೇ 28, 2025: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಮಗುಚಿ ಬಿದ್ದ ಘಟನೆಯಲ್ಲಿ ಫೋಟೋಗ್ರಾಫರ್ ಸೂರ್ಯ ನಾರಾಯಣ (48) ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.

    ಸೂರ್ಯ ನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೋಗ್ರಾಫಿಗಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

    ಸೂರ್ಯ ನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಸ್ವಂತ ಫೋಟೋಗ್ರಾಫಿ ಸ್ಟೂಡಿಯೋ ಆರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಅವರನ್ನು ‘ವರ್ ಸೂರ್ಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.

  • ಮಂಗಳೂರು: ಅಮಾಯಕ ಮುಸ್ಲಿಂ ಯುವಕನ ಹತ್ಯೆಗೆ ಸರಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ: ಅನ್ವರ್ ಸಾದತ್ ಎಸ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಹಾಗೂ ಕೀರ್ತಿ, ಫಾಝಿಲ್ ಹಂತಕ ಸುಹಾಸ್ ಶೆಟ್ಟಿ ಎಂಬಾತನ ಹತ್ಯೆಯ ಪ್ರತಿಕಾರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿಗಳಾಗಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಬಂಟ್ವಾಳದ ಕೊಳತ್ತಮಜಲು ಎಂಬಲ್ಲಿ ಇಬ್ಬರು ಯುವಕರ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ.

    ಅದರಲ್ಲಿ ಓರ್ವ ಮೃತಪಟ್ಟಿದ್ದು, ಓರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ಸಂಘಪರಿವಾರದ ಜೊತೆ ಶಾಮೀಲಾಗಿರುವುದೇ ಈ ಎಲ್ಲಾ ಘಟನೆಗಳಿಗೆ ಕಾರಣ. ಮೇ ಒಂದರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಒಂದು ತಿಂಗಳ ಒಳಗೆ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ತಲ್ವಾರ್ ದಾಳಿ ಆಗಿದೆ.

    ಬಜರಂಗದಳದ ನಾಯಕರಾದ ಭರತ್ ಕುಮ್ಡೇಲ್, ಶರಣ್ ಪಂಪ್ವೆಲ್, ನರಸಿಂಹ ಮಾಣಿ, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸಹಿತ ಹಲವರು ಸುಹಾಸ್ ಶೆಟ್ಟಿ ಹತ್ಯೆಗೆ ನಾವು ಪ್ರತಿಕಾರ ತೀರಿಸುತ್ತೇವೆ ಎಂದು ಹೇಳಿದರೂ ಸಹ ಪೊಲೀಸ್ ಇಲಾಖೆ ಕೇವಲ ಎಫ್ಐಆರ್ ದಾಖಲಿಸಿ ಮೌನವಾಗಿದ್ದಾರೆ.

    ಮುಂದುವರಿದು ಬಜ್ಪೆಯಲ್ಲಿ ಮೇ 25ರಂದು ಶ್ರದ್ಧಾಂಜಲಿ ಸಭೆಯ ಹೆಸರಲ್ಲಿ ಪ್ರತಿಕಾರದ ಹತ್ಯೆಗೆ ಸಂಚು ರೂಪಿಸಲು ಪೋಲಿಸ್ ಇಲಾಖೆ ಅನುಮತಿ ನೀಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಪ್ರತಿಕಾರದ ಬಗ್ಗೆ ಸಂದೇಶಗಳು ಬರುತ್ತಿದ್ದರೂ ಸಹ ಪೋಲಿಸ್ ಇಲಾಖೆ ಹತ್ಯೆ ನಡೆಯುವವರೆಗೂ ಮೌನ ಸಮ್ಮತಿ ನೀಡಿದೆ.

    ಸುಹಾಸ್ ಶೆಟ್ಟಿ ಹತ್ಯೆಯ ನಂತರ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ Anty communal Force ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿ ಹೋಗಿದ್ದಾರೆ. ನಂತರದ ದಿನಗಳಲ್ಲಿ ಸಂಘಪರಿವಾರದ ಅಟ್ಟಹಾಸ ಹೆಚ್ಚಾದರೂ ಸಹ ಗೃಹ ಇಲಾಖೆ ಸಂಪೂರ್ಣವಾಗಿ ಮೌನವಾಗಿರುವುದೇ ಈ ಹತ್ಯೆಗೆ ಕಾರಣ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಆರೋಪಿಸಿದ್ದಾರೆ.

  • ಕೊಳ್ತಮಜಲು ರಹೀಂ ಹತ್ಯೆ ಪ್ರಕರಣ: ದೀಪಕ್, ಸುಮಿತ್ಆಚಾರ್ ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲು

    ಬಂಟ್ವಾಳ: ತಾಲೂಕಿನ ಕೊಳತ್ತಮಜಲು ಬಳಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ‌ ಸಂಬಂಧ ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ‌ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಬ್ದುಲ್ ರಹಿಮಾನ್ ಮತ್ತು ಕಲಂದ‌ರ್ ಶಾಫಿ ಅವರು ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯ ಪರಿಚಯಸ್ಥರಾದ ದೀಪಕ್, ಧನುಪೂಜೆ ಭೋಜ ಆಚಾರ್ ಪುತ್ರ ಸುಮಿತ್ ಮತ್ತು 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ವಾ ತಿವಿದು, ಕಡಿದರು, ಆಗ ಪಕ್ಕದಲ್ಲಿದ್ದ ನಾನು ತಡೆಯಲು ಹೋದಾಗ ಚೂರಿಯಿಂದ, ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರ್ ನಿಂದ ಕಡಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಗೈದವರ ಪೈಕಿ ಇಬ್ಬರು ಪರಿಚಯಸ್ಥರು ಎಂದು ಹಲ್ಲೆಗೊಳಗಾಗಿ ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕಲಂದ‌ರ್ ಶಾಫಿ ಮಾಹಿತಿ ನೀಡಿದ್ದಾರೆ ಎಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಹಮ್ಮದ್ ನಿಸಾ‌ರ್ ಎಂಬವರು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

    ಮೃತ ಅಬ್ದುಲ್ ರಹಿಮಾನ್ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದು ತೀವ್ರವಾಗಿ ಗಾಯಗೊಂಡ ಕಲಂದರ್ ಶಾಫಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಊರಿನ ಜನರೊಂದಿಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ.

    ದುಷ್ಕರ್ಮಿಗಳ ಗುಂಪು ಕೋಮು ಭಾವನೆಯಿಂದ ಅಥವಾ ಇನ್ನಾವುದೋ ಕಾರಣಕ್ಕೆ ಅಬ್ದುಲ್ ರಹಿಮಾನ್ ಅವರನ್ನು ಕೊಲೆಗೈದು, ಕಲಂದರ್ ಶಾಫಿ ಅವರನ್ನು ತೀವ್ರವಾಗಿ ಗಾಯಗೊಳಿಸಿ ಕೊಲೆ ಪ್ರಯತ್ನ ಮಾಡಿದ್ದಾರೆ. ಈ ಕೃತ್ಯದಲ್ಲಿ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ದೂರುದಾರ ನಿಸಾರ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

  • ಮಂಗಳೂರು: ಕದ್ರಿ ಪೊಲೀಸರಿಂದ ಶರಣ್ ಪಂಪ್‌ವೆಲ್ ಅರೆಸ್ಟ್‌, ಜಾಮೀನು

    ಮಂಗಳೂರು, 27 ಮೇ, 2025: ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಮಂಗಳೂರು ಬಂದ್‌ಗೆ ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್‌ವೆಲ್ ನನ್ನು ಕದ್ರಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಬಂಧನದ ಸುದ್ದಿ ಹರಡುತ್ತಿದ್ದಂತೆ, ವಿವಿಧ ಸಂಘಟನೆಗಳ ಕಾರ್ಯಕರ್ತರು ಕದ್ರಿ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದರು. ಪೊಲೀಸರ ಕ್ರಮವನ್ನು ಕಾರ್ಯಕರ್ತರು ಖಂಡಿಸಿದರು. ಡಿಸಿಪಿ ರವಿಶಂಕರ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಜನಸಮೂಹವನ್ನು ಠಾಣೆಯ ಆವರಣದಿಂದ ಚದುರಿಸಿದರು.

    ನಂತರ ಶರಣ್ ಪಂಪ್‌ವೆಲ್‌ನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಅಪ್ಡೇಟ್:

    ಬಂಧನದ ಬಳಿಕ ಶರಣ್ ಪಂಪ್‌ವೆಲ್ ಅವರನ್ನು ಮಂಗಳೂರಿನ ಬೋಂದೆಲ್‌ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಪೊಲೀಸರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಶರಣ್ ಪಂಪ್‌ವೆಲ್‌ಗೆ ಜಾಮೀನು ನೀಡಿ ಆದೇಶಿಸಿದರು.

  • ಬಂಟ್ವಾಳ ಕೊಲೆ ಪ್ರಕರಣ: ದಕ್ಷಿಣ ಕನ್ನಡದ 5 ತಾಲೂಕುಗಳಲ್ಲಿ ಮೇ 27 ರಿಂದ 30 ರವರೆಗೆ ನಿಷೇಧಾಜ್ಞೆ ಜಾರಿ

    ಮಂಗಳೂರು, 27 ಮೇ, 2025: ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಹೀಂ ಎಂಬ ವ್ಯಕ್ತಿಯ ಹತ್ಯೆಯ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದ ವರದಿಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಅವರು ಮೇ 27 ರಂದು ಆದೇಶ ಹೊರಡಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಮೇ 27 ರಂದು ಸಂಜೆ 6.00 ಗಂಟೆಯಿಂದ ಮೇ 30 ರಂದು ಸಂಜೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.

    ಈ ಅವಧಿಯಲ್ಲಿ ಈ ಕೆಳಗಿನ ನಿರ್ಬಂಧಗಳು ಜಾರಿ

    • ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ.
    • ಕೋಲುಗಳು, ಕತ್ತಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ದೊಣ್ಣೆಗಳು ಅಥವಾ ದೈಹಿಕ ಹಾನಿಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
    • ಪಟಾಕಿಗಳನ್ನು ಸಿಡಿಸುವುದು ಮತ್ತು ಸ್ಫೋಟಕ ಅಥವಾ ನಾಶಕಾರಿ ವಸ್ತುಗಳನ್ನು ಹೊಂದಿರುವುದು ನಿಷೇಧಿಸಲಾಗಿದೆ.
    • ಪ್ರತಿಭಟನೆಗಳು, ವಿಜಯೋತ್ಸವ ಆಚರಣೆಗಳು, ಸಾರ್ವಜನಿಕ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು, ಬಂದ್‌ಗಳು, ರಸ್ತೆ ತಡೆಗಳು ಮತ್ತು ರಾಜಕೀಯ/ಸಾರ್ವಜನಿಕ ಸಭೆಗಳನ್ನು ಅನುಮತಿಸಲಾಗುವುದಿಲ್ಲ.
    • ಕಲ್ಲುಗಳು, ಸ್ಪೋಟಕಗಳು ಅಥವಾ ಅವುಗಳನ್ನು ಎಸೆಯುವ ಸಾಮರ್ಥ್ಯವಿರುವ ಯಾವುದೇ ಸಾಧನವನ್ನು ಸಂಗ್ರಹಿಸುವುದು ಅಥವಾ ಹೊಂದಿರುವುದು ನಿಷೇಧಿಸಲಾಗಿದೆ.
    • ಮಾನವ ದೇಹಗಳು, ಪ್ರತಿಮೆಗಳು ಅಥವಾ ವ್ಯಕ್ತಿಗಳ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

    ಕೋಮು ಸಾಮರಸ್ಯ, ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಸಭ್ಯತೆಗೆ ಭಂಗ ತರುವಂತಹ ಘೋಷಣೆಗಳು, ಸನ್ನೆಗಳು ಅಥವಾ ಚಿತ್ರಗಳನ್ನು ಕೂಗುವುದು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ನಡವಳಿಕೆಯನ್ನು ಪ್ರಚೋದಿಸುವ ಕರಪತ್ರಗಳು ಅಥವಾ ಪೋಸ್ಟರ್‌ಗಳ ವಿತರಣೆಯನ್ನು ಸಹ ನಿಷೇಧಿಸಲಾಗಿದೆ.

    ಸರ್ಕಾರಿ ಕಾರ್ಯಕ್ರಮಗಳು ಅಥವಾ ಅಧಿಕೃತ ಅನುಮತಿಯ ಮೇರೆಗೆ ಆಯೋಜಿಸಲಾದ ಕಾರ್ಯಕ್ರಮಗಳಿಗೆ ಅಥವಾ ಕರ್ತವ್ಯದಲ್ಲಿರುವಾಗ ಶಸ್ತ್ರಾಸ್ತ್ರಗಳು ಅಥವಾ ಸಂವಹನ ಸಾಧನಗಳನ್ನು ಹೊಂದಿರುವ ಪೊಲೀಸ್ ಸಿಬ್ಬಂದಿ ಮತ್ತು ಬ್ಯಾಂಕ್ ಭದ್ರತಾ ಸಿಬ್ಬಂದಿಗೆ ಈ ಆದೇಶ ಅನ್ವಯಿಸುವುದಿಲ್ಲ.

    ಪೂರ್ವ ನಿಗದಿತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆದೇಶದಿಂದ ವಿನಾಯಿತಿ ಪಡೆದಿವೆ.

    ಅಂತ್ಯಕ್ರಿಯೆಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಅಂತ್ಯಕ್ರಿಯೆ ಅಥವಾ ಸಮಾಧಿ ಮಾಡುವ ಸ್ಥಳದಲ್ಲಿ ಕಟ್ಟುನಿಟ್ಟಾಗಿ ಅನುಮತಿಸಲಾಗುತ್ತದೆ.

    ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಮೇ 27 ರಂದು ಅವರ ಸಹಿ ಮತ್ತು ಅಧಿಕೃತ ಮುದ್ರೆಯೊಂದಿಗೆ ಆದೇಶವನ್ನು ಹೊರಡಿಸಲಾಗಿದೆ.

  • ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆ, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ.. ನಾಳೆ ಬಂದ್ ಗೆ ಕರೆ ಸಾಧ್ಯತೆ?

    ಬಂಟ್ವಾಳ :ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆನಡೆದಿದ್ದು, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ನಾಳೆ ಮುಸ್ಲಿಂ ಸಂಘಟನೆ ಗಳು ಬಂದ್ ಗೆ ಕರೆ ನೀಡುವ ಸಾಧ್ಯತೆಇದೆ ಎನ್ನಲಾಗುತಿದೆ

    ಘಟನೆ ನಡೆದ ತಕ್ಷಣ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿಯ ಆರೋಗ್ಯ ವಿಚಾರಿಸಲು ಬಂದ ಮುಸ್ಲಿಂ ಮುಖಂಡರನ್ನು ಯುವಕರು ಅಡ್ಡ ಗಟ್ಟಿ ತರಾಟೆಗೆ ತೆಗೆದ ಪ್ರಸಂಗ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದು ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ ಮೊನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಜಿಲ್ಲಾ ಆಡಳಿತ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು ಸಮುದಾಯಕ್ಕೆ ನಿಮ್ಮ ನಾಯಕತ್ವದ ಅವಶ್ಯಕತೆ ಇಲ್ಲ ಎಂದು ಈ ಸಂದರ್ಭದಲ್ಲಿ ಗುಡುಗಿದರು.

  • ಮಂಗಳೂರಿನ ಕೊಳತ್ತಮಜಲುವಿನಲ್ಲಿ ಯುವಕನ ಕೊಲೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡನೆ

    ಮಂಗಳೂರು, 27 ಮೇ 2025: ಬಂಟ್ವಾಳದ ಕೊಳತ್ತಮಜಲು ಸಮೀಪದಲ್ಲಿ ಯುವಕ ಅಬ್ದುಲ್ ರಹಿಮಾನ್‌ನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆಯ ಹಿನ್ನೆಲೆಯಲ್ಲಿ ಸಚಿವರು DG & IGP ಮತ್ತು ಕಾನೂನು ಸುವ್ಯವಸ್ಥೆ ADGP ಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಜೊತೆಗೆ, ಮಂಗಳೂರು ಜಿಲ್ಲಾಧಿಕಾರಿ ಮತ್ತು ಎಸ್‌ಪಿಯವರೊಂದಿಗೆ ಚರ್ಚಿಸಿದ ಸಚಿವರು, ಮಂಗಳೂರಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.

  • ಕರ್ನಾಟಕ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆ: CET/NEET ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ

    ಬೆಂಗಳೂರು, ಮೇ 27, 2025: ಕರ್ನಾಟಕ ರಾಜ್ಯ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆಯಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

    ಯೋಗ್ಯತಾ ಅಂಶಗಳು:

    • ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
    • ವಿದ್ಯಾರ್ಥಿಯು CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರಬೇಕು.
    • ಕ್ರೈಸ್ತರನ್ನು ಹೊರತುಪಡಿಸಿ, ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.

    ಸಾಲದ ಮೊತ್ತ (ಗರಿಷ್ಠ ಮಿತಿ):

    ಕೋರ್ಸ್ಗರಿಷ್ಠ ಸಾಲದ ಮೊತ್ತ (ರೂ)
    MBBS, MD, MS₹5,00,000
    BDS, MDS₹1,00,000
    BAMS, BHMS, BNYS, BUMS₹50,000
    BE, B.Tech, M.Tech, B.Arch, M.Arch₹50,000
    MBA, MCA, LLB₹50,000
    B.Sc. (Agriculture, Horticulture, etc.)₹50,000
    Pharmacy (B.Pharma, M.Pharma, D.Pharma, Pharma.D)₹50,000

    ಅಗತ್ಯ ದಾಖಲೆಗಳು:

    1. ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
    2. ಆದಾಯ ಪ್ರಮಾಣಪತ್ರ
    3. ಆಧಾರ್ ಕಾರ್ಡ್ ಪ್ರತಿ
    4. CET ಪ್ರವೇಶ ಪತ್ರ
    5. NEET ಪ್ರವೇಶ ಪತ್ರ
    6. SSLC/10ನೇ ತರಗತಿಯ ಅಂಕಪಟ್ಟಿ
    7. PUC/ಡಿಪ್ಲೋಮಾ ಅಂಕಪಟ್ಟಿ
    8. ಇಂಡೆಮ್ನಿಟೀ ಬಾಂಡ್ (Indemnity Bond)
    9. ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
    10. ಪೋಷಕರ ಸ್ವಯಂ ಘೋಷಣೆ ಪತ್ರ

    ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31, 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

    • ☎️ 6363604332 – NNO Mangalore Community Centre
    • ☎️ 7259204123 – NNO Kundapura Community Centre
    • ☎️ 9945167801 – NNO Karkala Community Centre
    • ನಮ್ಮ ನಾಡ ಒಕ್ಕೂಟ ಕಾರ್ಕಳ ಪ್ರಕಟಣೆ
  • ಹರೀಶ್‌ ಪೂಂಜಾ ಅವರನ್ನು ಶಾಸಕತ್ವದಿಂದ ತೆಗೆಯಬೇಕು: ಮುನೀರ್‌ ಕಾಟಿಪಳ್ಳ ಆಗ್ರಹ

    ಬೆಳ್ತಂಗಡಿ, ಮೇ 27, 2025: ಶಾಸಕ ಹರೀಶ್‌ ಪೂಂಜಾ ಅವರು ತಮ್ಮ ದ್ವೇಷ ಭಾಷಣವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಸವಾಲು ಹಾಕಿದ್ದಾರೆ. ಬೆಳ್ತಂಗಡಿಯ ಜಮಿಯತುಲ್‌ ಫಲಾಹ್‌ ಸಭಾ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಶಾಸಕ ಹರೀಶ್‌ ಪೂಂಜಾ ಮೈಕ್‌ ಸಿಕ್ಕಾಗ ದ್ವೇಷ ಭಾಷಣ ಮಾಡಿ, ನಂತರ ನ್ಯಾಯಾಲಯದಲ್ಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಅವರಿಗೆ ಧೈರ್ಯವಿದ್ದರೆ, ತಮ್ಮ ಭಾಷಣವನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡು ಸಮರ್ಥಿಸಿಕೊಳ್ಳಬೇಕು ಎಂದರು. ಸೋಮವಾರ ತೆಕ್ಕಾರುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕರು ಭಾರತೀಯ ಪ್ರಜೆಗಳನ್ನು ಕೀಳಾಗಿ ನಿಂದಿಸಿ, ದೇಶದ ಜನರನ್ನು ಅವಮಾನಿಸಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಶಾಸಕತ್ವದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು.

    ಸಾಮಾಜಿಕ ಚಿಂತಕ ಹಾಗೂ ಕಾಂಗ್ರೆಸ್‌ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹೆಚ್ಚಿನ ಕಾರ್ಯಕರ್ತರಿಗೆ ಹಿಂದೂ ಧರ್ಮದ ನಿಜವಾದ ಅರ್ಥವೇ ತಿಳಿದಿಲ್ಲ. ಮೊದಲು ಅವರಿಗೆ ಹಿಂದೂ ಧರ್ಮದ ಕುರಿತು ತಿಳಿವಳಿಕೆ ನೀಡಬೇಕು. ಇಲ್ಲವಾದರೆ, ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನು ಮಾತನಾಡಬೇಕೆಂಬ ಕನಿಷ್ಠ ಜ್ಞಾನವಿಲ್ಲದೆ, ತಮ್ಮನ್ನು ತಾವೇ ಹೊಗಳಿಕೊಂಡು ಹಿಂದೂ ಧರ್ಮದ ಮಾನ-ಮರ್ಯಾದೆಗೆ ಧಕ್ಕೆ ತರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಸಭೆಗಳಲ್ಲಿ ಇಂತಹ ರಾಜಕೀಯ ದ್ವೇಷದ ಭಾಷಣಗಳನ್ನು ಮಾಡುವವರ ವಿರುದ್ಧ ಧ್ವನಿಯೆತ್ತಿ ಖಂಡಿಸಬೇಕು. ಆಗ ಮಾತ್ರ ಹಿಂದೂ ಧರ್ಮವನ್ನು ರಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು.

    ಸಭೆಯಲ್ಲಿ ಸಮಾನಮನಸ್ಕ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಗೌಡ, ಸಮದ್‌ ತೆಕ್ಕಾರು, ಸದಾಶಿವ ಶೆಟ್ಟಿ, ಜನಾರ್ಧನ ಆಚಾರ್ಯ, ಫಾರೂಕ್‌, ರಿಯಾಜ್‌, ಅಭಿಷೇಕ್‌, ಕಿರಣಪ್ರಭಾ, ಜಯಶ್ರೀ, ಪುಷ್ಪಾ, ಅಶ್ವಿತ, ರಾಮಚಂದ್ರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ಶ್ಯಾಮರಾಜ್‌ ಪಟ್ರಮೆ ವಂದನೆ ಸಲ್ಲಿಸಿದರು.