Category: State

  • ‘ಸರ್​​ಪ್ರೈಸ್ ರೀತಿಯ ಚೆಕ್​ ಬೇಡ’: ಅವೈಜ್ಞಾನಿಕ ತಪಾಸಣೆ ತಡೆಗೆ ಬೆಂಗಳೂರು ಪೊಲೀಸರು ಕೈಗೊಂಡ ಕ್ರಮಗಳೇನು?

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಎಲ್ಲೆಂದರಲ್ಲಿ ನಿಂತು ಅವೈಜ್ಞಾನಿಕವಾಗಿ ತಪಾಸಣೆ ಮಾಡದಂತೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.

    ಜನಾಕ್ರೋಶಕ್ಕೆ ಕಾರಣವಾದ ಮಂಡ್ಯದ ಘಟನೆ: ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಸವಾರರನ್ನು ಸಂಚಾರ ಪೊಲೀಸರು ತಡೆದಿದ್ದ ವೇಳೆ ಸವಾರನ ಜೊತೆಗಿದ್ದ ಮೂರು ವರ್ಷದ ಮಗು ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಮಂಡ್ಯದಲ್ಲಿ ನಡೆದಿತ್ತು. ಅವೈಜ್ಞಾನಿಕ ತಪಾಸಣೆ ನಡೆಸಿದ್ದ ಬಗ್ಗೆ ಸಂಚಾರ ಪೊಲೀಸರ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

    ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ನಗರ ಸಂಚಾರ ವಿಭಾಗವು ವಾಹನ ಸವಾರರಿಗೆ ತೊಂದರೆಯಾಗದ ರೀತಿ ಹಾಗೂ ತೆರೆಮರೆಯಲ್ಲಿ ನಿಂತು ದಿಢೀರ್ ವಾಹನಗಳನ್ನು ಅಡ್ಡಗಟ್ಟದಂತೆ ಸಂಚಾರ ಪೊಲೀಸರಿಗೆ ಮೌಖಿಕವಾಗಿ ತಾಕೀತು ಮಾಡಿದೆ.

    ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ, ಸವಾರರಿಗೆ ದಂಡ ವಿಧಿಸುವ ಜೊತೆಗೆ ಟ್ರಾಫಿಕ್ ಟ್ರಾಫಿಕ್ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದು ಟ್ರಾಫಿಕ್ ಪೊಲೀಸರ ಕರ್ತವ್ಯ. ಉಲ್ಲಂಘನೆಗಳ ಪತ್ತೆ ನೆಪದಲ್ಲಿ ಪೊಲೀಸರು ರಸ್ತೆ ತಿರುವಿನಲ್ಲಿ ನಿಲ್ಲುವುದು, ಗೋಡೆ ಬದಿ ಬಚ್ಚಿಟ್ಟುಕೊಂಡು ಏಕಾಏಕಿ ವಾಹನಗಳನ್ನು ಅಡ್ಡಗಟ್ಟುವುದು ಸರಿಯಾದ ಕ್ರಮವಲ್ಲ. ವೇಗವಾಗಿ ಬರುವ ಸವಾರರಿಗೆ ದಿಢೀರ್ ಆಗಿ ಕೈ ಹಾಕಿ ನಿಲ್ಲಿಸುವಂತೆ ಸೂಚಿಸುವುದರಿಂದ ನಿಯಂತ್ರಣ ತಪ್ಪಿ, ಅಪಘಾತಕ್ಕೂ ಕಾರಣವಾಗಲಿದೆ. ಸಿಡ್ಕ್​ ಆಗಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿರುವ ನಿದರ್ಶನಗಳಿವೆ. ತಿರುವಿನಲ್ಲಿ ನಿಂತು ಏಕಾಏಕಿ ವಾಹನಗಳನ್ನು ತಡೆಯಬಾರದೆಂಬ ನಿಯಮವಿದ್ದರೂ, ಸಂಚಾರ ಪೊಲೀಸರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ದರ್ಪ ತೋರಿಸುತ್ತಾರೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳುವುದೇನು?:

    • ಸರ್​​ಪ್ರೈಸ್ ರೀತಿ ತಪಾಸಣೆ ಮಾಡಿ ಸವಾರರಿಗೆ ತೊಂದರೆ ಮಾಡಬೇಡಿ.
    • ಮಂಡ್ಯದಲ್ಲಿ ನಡೆದ ದುರಂತ ಮರುಕಳಿಸದಿರಲು ಹಾಗೂ ವೈಜ್ಞಾನಿವಾಗಿ ವಾಹನಗಳ ತಪಾಸಣೆ ಮಾಡಬೇಕು.
    • ಅನಗತ್ಯ ಸಂದರ್ಭಗಳಲ್ಲಿ ತೆರೆಮರೆಯಲ್ಲಿ ನಿಲ್ಲದೆ, ಏಕಾಏಕಿ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ಕೈಗೊಳ್ಳಬೇಕು.
    • ಸಿಗ್ನಲ್ ಬದಿಯಲ್ಲಿ, ರಸ್ತೆ ತಿರುವಿನಲ್ಲಿ ಸೇರಿದಂತೆ ಅನಪೇಕ್ಷಿತವಾಗಿ ವಾಹನಗಳನ್ನು ಅಡ್ಡಗಟ್ಟದಿರಿ.
    • ಪೀಕ್ ಅವರ್​​ನಲ್ಲಿ ತಪಾಸಣೆ ಕೈಗೊಳ್ಳಬೇಡಿ.
    • ತಪಾಸಣೆ/ದಂಡ ವಿಧಿಸುವಾಗ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು ಜಂಟಿ ಪೊಲೀಸ್ ಆಯುಕ್ತರು ತಾಕೀತು ಮಾಡಿದ್ದಾರೆ.

    ಟಾರ್ಗೆಟ್ ನೀಡಿಲ್ಲ- ಸಂಚಾರ ಡಿಸಿಪಿ: “ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುವ ಹಾಗೂ ಸುಗಮ ಸಂಚಾರಕ್ಕೆ ಧಕ್ಕೆ ತರುವವರ ವಿರುದ್ಧ ನಿರಂತರವಾಗಿ ಅಭಿಯಾನ ಕೈಗೊಂಡು ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲಾಗುತ್ತಿದೆ. ಎಲ್ಲಾ ಮಾದರಿಯ ಉಲ್ಲಂಘನೆಗಳನ್ನು ಏಕಾಏಕಿ ಒಂದೇ ದಿನದಲ್ಲಿ ತಪಾಸಣೆ ಮಾಡದೆ, ಹೆಚ್ಚು ಉಲ್ಲಂಘನೆ ಕಂಡುಬರುವ ಸಂಚಾರ ಅಪರಾಧಗಳನ್ನು ನಿರ್ದಿಷ್ಟ ದಿನದಂದು ನಿಗಡಿಪಡಿಸಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಎಫ್​ಟಿವಿಆರ್ (ಫೀಲ್ಡ್ ಟ್ರಾಫಿಕ್ ವೈಯಲೇಷನ್ ರಿಪೋರ್ಟ್) ಪ್ರತಿನಿತ್ಯ 15-20 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಪಾಸಣೆ ನಡೆಸುವ ಸಿಬ್ಬಂದಿಗೆ ದಾಖಲಿಸುವಂತೆ ಸೂಚಿಸಲಾಗಿದೆಯೇ ಹೊರತು ಬೇರೆ ಯಾವ ಪ್ರಕರಣಗಳಿಗೂ ಇಂತಿಷ್ಟೇ ಸಂಖ್ಯೆಯಲ್ಲಿ ಕೇಸ್ ದಾಖಲಿಸಬೇಕೆಂದು ಟಾರ್ಗೆಟ್ ನಿಗದಿಪಡಿಸಿಲ್ಲ” ಎಂದು ಉತ್ತರ ವಿಭಾಗದ ಸಂಚಾರ ಡಿಸಿಪಿ ಸಿರಿಗೌರಿ ಅವರು ‘ಈಟಿವಿ ಭಾರತ’ಕ್ಕೆ ತಿಳಿಸಿದ್ದಾರೆ.

    ಸಂಚಾರ ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬಾರದು. ವ್ಯವಸ್ಥಿತ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು. ಈ ಕುರಿತು ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದೇನೆ – ಜಿ.ಪರಮೇಶ್ವರ್, ಗೃಹ ಸಚಿವ

    ವಾಹನ ತಪಾಸಣೆ ಮಾಡುವಾಗ ಸಂಚಾರ ಪೊಲೀಸರು ಅನುಸರಿಸಬೇಕಾದ ನಿಯಮಗಳು:

    • ರಸ್ತೆ ಬದಿ ವಾಹನ ತಪಾಸಣೆ ಮಾಡುವಾಗ ಸೂಕ್ಷ್ಮ ಹಾಗೂ ಸಂವೇದನೆಯಿಂದ ವರ್ತಿಸಿ.
    • ಏಕಾಏಕಿ ವಾಹನಗಳನ್ನು ಅಡ್ಡಗಟ್ಟಿ ವಾಹನ ಸವಾರರನ್ನು ಗಾಬರಿಗೊಳಿಸಬೇಡಿ.
    • ರಸ್ತೆ ತಿರುವು, ಜಂಕ್ಷನ್ ಹಾಗೂ ತೆರೆಮರೆಯಲ್ಲಿ ನಿಂತು ತಪಾಸಣೆ ಮಾಡಬೇಡಿ.
    • ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಉಲ್ಲಂಘಿಸಿದ ವಾಹನಗಳ ಫೋಟೊ ಸೆರೆಹಿಡಿದು, ಸವಾರರ ಮನೆಗೆ ನೋಟಿಸ್ ಜಾರಿಗೆ ಆದ್ಯತೆ ನೀಡಿ.
    • ಸುರಕ್ಷಿತ ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿ.
  • ಮಂಗಳೂರಿನ ಕೊಳತ್ತಮಜಲುವಿನಲ್ಲಿ ಯುವಕನ ಕೊಲೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡನೆ

    ಮಂಗಳೂರು, 27 ಮೇ 2025: ಬಂಟ್ವಾಳದ ಕೊಳತ್ತಮಜಲು ಸಮೀಪದಲ್ಲಿ ಯುವಕ ಅಬ್ದುಲ್ ರಹಿಮಾನ್‌ನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆಯ ಹಿನ್ನೆಲೆಯಲ್ಲಿ ಸಚಿವರು DG & IGP ಮತ್ತು ಕಾನೂನು ಸುವ್ಯವಸ್ಥೆ ADGP ಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಜೊತೆಗೆ, ಮಂಗಳೂರು ಜಿಲ್ಲಾಧಿಕಾರಿ ಮತ್ತು ಎಸ್‌ಪಿಯವರೊಂದಿಗೆ ಚರ್ಚಿಸಿದ ಸಚಿವರು, ಮಂಗಳೂರಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.

  • ಬಿಜೆಪಿಯಿಂದ ಶಾಸಕ್ ಶಿವರಾಮ್ ಹೆಬ್ಬಾರ್ ಹಾಗೂ ಎಸ್​ಟಿ ಸೋಮಶೇಖರ್ ಉಚ್ಚಾಟನೆ

    ಬೆಂಗಳೂರು, ಮೇ 27,2025: ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್​ಟಿ ಸೋಮಶೇಖರ್​ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಇಬ್ಬರನ್ನೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ. ಇವರು ಬಿಜೆಪಿಯಲ್ಲಿ ಇದ್ದುಕೊಂಡು ಕಾಂಗ್ರೆಸ್ ಜೊತೆ ಹೆಚ್ಚು ಗುರುತಿಸಿಕೊಂಡಿದ್ದರು. ಹೀಗಾಗಿ, ಅವರನ್ನು ಉಚ್ಚಾಟನೆ ಮಾಡುವ ನಿರ್ಧಾರವನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ತೆಗೆದುಕೊಂಡಿದೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರವನ್ನು ಶಿವರಾಮ್ ಹೆಬ್ಬಾರ್ ಪ್ರತಿನಿಧಿಸುತ್ತಿದ್ದಾರೆ. ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಎಸ್.ಟಿ.ಸೋಮಶೇಖರ್ ಮೂರನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಈ ಮೊದಲು ಇಬ್ಬರೂ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆ ಇಬ್ಬರೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾದರೆ, ಸೋಮಶೇಖರ್ ಅವರು ಸಹಕಾರ ಸಚಿವರಾಗಿದ್ದರು.

    2023ರಲ್ಲಿ ಇಬ್ಬರೂ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಬಂದರು. ಆದರೆ, ಈಗ ಶಿವರಾಮ್ ಹೆಬ್ಬಾರ್ ಹಾಗೂ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಕ್ಕಾಗಿ ಇಬ್ಬರೂ ಉಚ್ಚಾಟನೆ ಮಾಡಿ ಹೈ ಕಮಾಂಡ್ ಆದೇಶ ಹೊರಡಿಸಿದೆ.

  • ಕಲಬುರಗಿ ಡಿಸಿ ವಿರುದ್ಧ ದ್ವೇಷಪೂರಿತ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್‌ ವಿರುದ್ಧ ಎಫ್‌ಐಆರ್ ದಾಖಲು

    ಕಲಬುರಗಿ, ಮೇ 26, 2025: ಕಲಬುರಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಫೌಝಿಯಾ ತರನ್ನುಮ್ ಐಎಎಸ್ ವಿರುದ್ಧ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಅವರ ದ್ವೇಷಪೂರಿತ ಹೇಳಿಕೆಗಳು ರಾಜ್ಯದಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿವೆ. ತಮ್ಮ ಹೇಳಿಕೆಯಲ್ಲಿ ರವಿಕುಮಾರ್, “ಕಲಬುರಗಿ ಡಿಸಿ ಪಾಕಿಸ್ತಾನದಿಂದ ಬಂದ ಐಎಎಸ್ ಅಧಿಕಾರಿಯೋ ಇಲ್ಲವೋ ನನಗೆ ತಿಳಿದಿಲ್ಲ. ನಿಮ್ಮ ಚಪ್ಪಾಳೆ ಕೇಳಿದರೆ, ಡಿಸಿ ನಿಜವಾಗಿಯೂ ಪಾಕಿಸ್ತಾನದಿಂದ ಬಂದಂತೆ ತೋರುತ್ತದೆ” ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಧಾರ್ಮಿಕ ಪ್ರೇರಿತ ದಾಳಿ ಎಂದು ಟೀಕಿಸಲಾಗಿದೆ.

    ಈ ಘಟನೆಯ ನಂತರ, ಕಲಬುರಗಿ ಪೊಲೀಸರು ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ, ಫೌಝಿಯಾ ತರನ್ನುಮ್ ಅವರನ್ನು “ಪಾಕಿಸ್ತಾನಿ” ಎಂದು ಕರೆದ ಅವರ ಹೇಳಿಕೆಯು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ, ಕರ್ನಾಟಕ ಐಎಎಸ್ ಸಂಘವು ಈ ಜವಾಬ್ದಾರಿಹೀನ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಸಂಘದ ಹೇಳಿಕೆಯಲ್ಲಿ, “ಐಎಎಸ್ ಸಂಘವು ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಆಗಿರುವ ಅವಮಾನಕರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಿವಿಲ್ ಸರ್ವೆಂಟ್‌ಗಳು ಸಂವಿಧಾನವನ್ನು ಅಚಲ ನಿಷ್ಠೆಯಿಂದ ಕಾಪಾಡುತ್ತಾರೆ. ಈ ರೀತಿಯ ವ್ಯಕ್ತಿಗತ ದಾಳಿಗಳು ಸಾರ್ವಜನಿಕ ಸೇವೆಯ ಸಮಗ್ರತೆಗೆ ಹಾನಿ ಉಂಟುಮಾಡುತ್ತವೆ ಮತ್ತು ಒಪ್ಪಲಾಗದು” ಎಂದು ತಿಳಿಸಲಾಗಿದೆ.

    ಈ ಘಟನೆಯಿಂದಾಗಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

  • ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟು, ಮೂರೂವರೆ ವರ್ಷದ ಮಗು ಬಲಿ; ಮೂವರು ASI ಸಸ್ಪೆಂಡ್‌

    ಮಂಡ್ಯ, ಮೇ 26, 2025: ನಗರದ ಸ್ವರ್ಣಸಂದ್ರ ಬಳಿ ಟ್ರಾಫಿಕ್ ಪೊಲೀಸರ ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಪ್ರಾಣಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್‌ಐಗಳ ತಲೆದಂಡವಾಗಿದೆ.

    ಘಟನೆ ವಿವರ:

    ಮಗು ಹೃತೀಕ್ಷಾಗೆ ನಾಯಿ ಕಚ್ಚಿದ್ದರಿಂದ ತಂದೆ, ತಾಯಿ ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಲ್ಮೆಟ್ ತಪಾಸಣೆಗಾಗಿ ಸ್ವರ್ಣಸಂದ್ರ ಬಳಿ ಸಂಚಾರಿ ಠಾಣೆ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಹೀಗಾಗಿ ಮಗು ಸೇರಿದಂತೆ ದಂಪತಿ ಆಯಾ ತಪ್ಪಿ ಬಿದಿದ್ದಾರೆ. ಈ ವೇಳೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದೆ.

    ಮಗುವನ್ನು ಮಡಿನಲ್ಲಿ ಇಟ್ಟುಕೊಂಡು ರಸ್ತೆಯಲ್ಲೇ ಪೋಷಕರು ಗೋಳಾಡಿದ್ದಾರೆ. ಘಟನೆ ಕಣ್ಣಾರೆ ಕಂಡು ಸಾರ್ವಜನಿಕರು ದಿಗ್ಭ್ರಮೆಗೊಂಡರೆ, ಮಂಡ್ಯ ಸಂಚಾರಿ ಪೊಲೀಸರಿಗೆ ಹೆತ್ತಕರುಳು ಹಿಡಿಶಾಪ ಹಾಕಿದೆ. ಸಂಚಾರಿ ಪೊಲೀಸರ ವಿರುದ್ಧ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನಾ ಸ್ಥಳದಲ್ಲಿ ಹೆಲ್ಮೆಟ್‌ ತಪಾಸಣೆ ಮಾಡುತ್ತಿದ್ದ ಎಎಸ್‌ಐಗಳಾದ ನಾಗರಾಜು, ಜಯರಾಂ, ಗುರುದೇವ್‌ ಅವರನ್ನು ಅಮಾನತುಗೊಳಿಸಿರುವುದಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

  • 18 ಬಿಜೆಪಿ ಶಾಸಕರ ಅಮಾನತು ವಾಪಸ್‌: ಸ್ಪೀಕರ್ ಯುಟಿ ಖಾದರ್ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ

    ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಭಾನುವಾರ ಹೇಳಿದ್ದಾರೆ.

    18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಇಂದು ಸ್ಪೀಕರ್ ಯುಟಿ ಖಾದರ್ ನೇತೃತ್ವದ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಇದೀಗ ಬಿಜೆಪಿ ಶಾಸಕ ಅಮಾನತು ಆದೇಶವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನವಾಗಿದೆ.

    ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಲ್ಲಿಸಿದ್ದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಈಗ ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮಕೈಗೊಂಡೆ. ಕ್ರಮತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಸ್ಪೀಕರ್​ ಯು.ಟಿ.ಖಾದರ್​ ಹೇಳಿದ್ದಾರೆ.

    ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್​. ಅಶೋಕ್, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಕಾನೂನು ಸಚಿವ ಎಚ್​.ಕೆ.ಪಾಟೀಲ್ ಭಾಗಿಯಾಗಿದ್ದರು.

  • ಜಾನಪದ ಅಕಾಡೆಮಿಯ 2023-24ರ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿತರಣಾ ಸಮಾರಂಭ; ಎನ್. ಗಣೇಶ್ ಗಂಗೊಳ್ಳಿ ಗೆ ಸನ್ಮಾನ

    ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ, ಪುಸ್ತಕ ಪ್ರದಾನ ಸಮಾರಂಭ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವು ದಿನಾಂಕ 15-03-2025ರಂದು ಬೀದರ್‌ನ ಪೂಜ್ಯಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನಮನ ಸೆಳೆದವು.

    ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಆಯೋಜಿಸಿದ್ದು, ಶ್ರೀ ವಿಜಯಕುಮಾರ್ ಸೋನಾರೆ ಅವರು ಸದಸ್ಯ ಸಂಚಾಲಕತ್ವ ವಹಿಸಿದ್ದರು. 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಕೆಳಗಿನ ಕಲಾವಿದರನ್ನು ಸನ್ಮಾನಿಸಲಾಯಿತು:

    1. ಶ್ರೀಮತಿ ಎಸ್. ಆರ್. ಸರೋಜ – ಬುಡಕಟ್ಟು ಕೋಲಾಟ, ಜೇನು ಕೊಯ್ಯುವ ಹಾಡು ಮತ್ತು ನೃತ್ಯ (ಕೊಡಗು ಜಿಲ್ಲೆ)
    2. ಶ್ರೀಮತಿ ಸುನಂದಮ್ಮ – ಕೋಲಾಟ (ಕೋಲಾರ ಜಿಲ್ಲೆ)
    3. ಶ್ರೀ ಮಾರುತಿ ಕೋಳಿ – ಜಾನಪದ ಗಾಯನ (ಬೀದರ್ ಜಿಲ್ಲೆ)
    4. ಶ್ರೀ ಹುರುಗಲವಾಡಿ ರಾಮಯ್ಯ – ಜಾನಪದ ಗಾಯಕರು (ಮಂಡ್ಯ ಜಿಲ್ಲೆ)
    5. ಶ್ರೀ ಎನ್. ಗಣೇಶ್ ಗಂಗೊಳ್ಳಿ – ಜಾನಪದ ಗಾಯಕರು (ಉಡುಪಿ ಜಿಲ್ಲೆ)

    ಈ ಸಮಾರಂಭವು ಕರ್ನಾಟಕದ ಜಾನಪದ ಕಲೆಯ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರಿಂದ ಪ್ರದರ್ಶಿತವಾದ ಜಾನಪದ ಗಾಯನ ಮತ್ತು ಕಲಾಪ್ರದರ್ಶನಗಳು ಜನರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

  • ಸೆಂಟ್ರಲ್ ಜೈಲ್ ನಲ್ಲಿ ನಾಲ್ಕು ಚಾಕು, ನಗದು, ಮೊಬೈಲ್, ಇಂಡಕ್ಷನ್ ಸ್ಟೌವ್ ಪತ್ತೆ: ನಾಲ್ವರು ಸಜಾಬಂಧಿಗಳು ಸೇರಿ ಭದ್ರತಾ ಸಿಬ್ಬಂದಿಗಳ ವಿರುದ್ಧ ಎಫ್ಐಆರ್

    ಬೆಂಗಳೂರು, ಮೇ 25, 2025: ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಮಾಹಿತಿ ಮೇರೆಗೆ ನಗರದ ಜೈಲಿನ ಮೇಲೆ ಆಗ್ನೇಯ ವಿಭಾಗದ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿ ಅಕ್ರಮವಾಗಿ ಇರಿಸಲಾಗಿದ್ದ ನಾಲ್ಕು ಚಾಕು ಒಂದು ಮೊಬೈಲ್, ಎಲೆಕ್ಟ್ರಾನಿಕ್ ಇಂಡಕ್ಷನ್ ಸ್ಟೌವ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

    ನಿಷೇಧಿತ ವಸ್ತುಗಳು ಪತ್ತೆ ಸಂಬಂಧ ಶಿಕ್ಷಾಬಂಧಿಗಳಾದ ಚೆಲುವ, ಇರ್ಷಾದ್, ಆಕಾಶ್, ಮಾರುತಿ ಹಾಗೂ ಜೈಲು ಭದ್ರತಾ ಸಿಬ್ಬಂದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಇತ್ತೀಚೆಗೆ ಜೈಲಿನ ಶಿಕ್ಷಾಬಂಧಿಗಳ ಬ್ಯಾರಕ್ ವೊಂದರಲ್ಲಿ ತಿಂಡಿ ವಿಚಾರವಾಗಿ ಸಜಾಬಂಧಿಗಳ ನಡುವೆ ಮಾರಾಮಾರಿ ನಡೆದಿತ್ತು. ಅಲ್ಲದೆ, ಜೈಲಿನಲ್ಲಿ ಅವ್ಯವಹಾರಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಡಿಸಿಪಿ ಸಾರಾಫಾತಿಮಾ ಅವರ ಸೂಚನೆ ಮೇರೆಗೆ ಹುಳಿಮಾವು, ಬಂಡೆಪಾಳ್ಯ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಪರಪ್ಪನ ಅಗ್ರಹಾರ ಠಾಣೆ ಇನ್ ಸ್ಪೆಕ್ಟರ್ ಒಳಗೊಂಡ ಮೂರು ವಿಶೇಷ ತಂಡ ಶುಕ್ರವಾರ ದಾಳಿ ನಡೆಸಿತ್ತು.

    ತಪಾಸಣೆ ವೇಳೆ ಶಿಕ್ಷಾಬಂಧಿ ವಿಭಾಗದ ಬಿ- ಬ್ಯಾರಕ್ ನಲ್ಲಿದ್ದ ಅಪರಾಧಿ ಚೆಲುವ 7 ಸಾವಿರ ನಗದು, ಸಿ ಬ್ಯಾರಕ್ ಲ್ಲಿದ್ದ ಇರ್ಷಾದ್ ಬಳಿ ಒಂದು ಮೊಬೈಲ್ ಫೋನ್, ಆಕಾಶ್ ಎಂಬಾತನ ಬಳಿ 2 ಸಾವಿರ ನಗದು, ಬಾತ್ ರೂಮ್ ನಲ್ಲಿ ಇಟ್ಟಿದ್ದ 5 ಸಾವಿರ ನಗದು, ಮತ್ತೋರ್ವ ಕೈದಿ ಮಾರುತಿ ಬಳಿ 2,500 ನಗದು ಹಣ ಪತ್ತೆಯಾಗಿದೆ. ಇದೇ ವೇಳೆ ಎಲೆಕ್ಟ್ರಾನಿಕ್ ಇಂಡೆಕ್ಷನ್ ಸ್ಟೌವ್, 4 ಚಾಕು ಹಾಗೂ ಒಂದು ಮೊಬೈಲ್ ಸಿಕ್ಕಿದ್ದು, ಇವುಗಳನ್ನ ವಶಕ್ಕೆ ಪಡೆದು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಜೈಲು ಭದ್ರತಾ ಸಿಬ್ಬಂದಿಗಳ ಕೈವಾಡ ಶಂಕೆ: ಪತ್ತೆಯಾಗಿರುವ ವಸ್ತುಗಳೆಲ್ಲವೂ ನಿಷೇಧಿತವಾಗಿದ್ದರೂ ಕೈದಿಗಳು ಬಳಕೆಗೆ ಅನುವು ಮಾಡಿಕೊಡುವುದರ ಹಿಂದೆ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ವಸ್ತು ಜೈಲಿನೊಳಗೆ ಹೋಗಬೇಕಾದರೂ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಾರೆ. ಪತ್ತೆಯಾಗಿರುವ ನಿಷೇಧಿತ ವಸ್ತುಗಳ ಹಿಂದೆ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗಳು ಕೈದಿಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿ- ಸಿಬ್ಬಂದಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾರ್ವಜನಿಕರೇ ಗಮನಿಸಿ: ಇನ್ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಗೆ ಇ-ಸಹಿ ಕಡ್ಡಾಯ

    ಬೆಂಗಳೂರು: ಇನ್ನು ಮುಂದೆ ಆಸ್ತಿ ನೋಂದಾಣಿಗೆ ಇ-ಸಿಗ್ನೇಚರ್ ಕಡ್ಡಾಯವಾಗಿರಲಿದೆ.‌ ನಾಳೆಯಿಂದ (ಮೇ 26) ಆಸ್ತಿ ಅಥವಾ ಇತರ ನೋಂದಣಿ ಪ್ರಕ್ರಿಯೆಗಳಿಗೆ ವಿದ್ಯುನ್ಮಾನ ಸಹಿ ಕಡ್ಡಾಯವಾಗಿದೆ.

    ಈ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪು ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ ಯಾವುದೇ ನೋಂದಣಿ ಪ್ರಕ್ರಿಯೆಗಳು ಡಿಜಿಟಲೀಕರಣವಾಗಲಿವೆ. ಸೇಲ್ ಡೀಡ್ ಸೇರಿ ಎಲ್ಲ ಮಾದರಿಯ ಡೀಡ್‌ಗಳನ್ನು ಆರಂಭದಿಂದ ಅಂತ್ಯದ ಪ್ರಕ್ರಿಯೆವರೆಗೂ ಡಿಜಿಟಲೈಸ್ ಮಾಡಲು ಈ ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ.

    ಡಿಜಿಟಲ್ ಇ-ಸ್ಟಾಂಪುಗಳು ಕಡ್ಡಾಯವಾಗಿರಲಿದೆ. ಇದರಿಂದ ಸ್ಟಾಂಪುಗಳ ದುರುಪಯೋಗ ಮತ್ತು ಸೋರಿಕೆ ತಡೆಯಲು ಅನುಕೂಲವಾಗಲಿದೆ. ಬ್ಯಾಂಕ್ ಚಲನ್‌‌ಗಳ ಮೂಲಕ ಸ್ಟಾಂಪುಗಳ ದುರುಪಯೋಗ ತಡೆಯಲು ಇದು ಸಹಕಾರಿಯಾಗಲಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕ ಬೆಂಬಲ ನೀಡಲಾಗಿದೆ. ವಿದ್ಯನ್ಮಾನ ವಿಧಾನಗಳ ಮೂಲಕ ಸ್ಟಾಂಪ್ ಶುಲ್ಕ ಪಾವತಿಸಬೇಕಾಗಿದೆ.

    ಸಿಬ್ಬಂದಿ ಮೂಲಕ ಸ್ಟಾಂಪ್‌ ವಿತರಣೆಗೆ ಸಂಪೂರ್ಣ ತಡೆ ಬೀಳಲಿದೆ. ಡಿಜಿಟಲ್‌ ಸಹಿ ದುರ್ಬಳಕೆಯಾಗದಂತೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ಸಹಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗುತ್ತದೆ. ಸಹಿ ದೃಢೀಕರಣಗೊಂಡರೆ ಮಾತ್ರ ಸಹಿ ಸಾಧ್ಯ. ಡಿಜಿಟಲ್‌ ಸಹಿಯಲ್ಲಿ ಬಯೊಮೆಟ್ರಿಕ್‌ ಕೂಡ ಇರಲಿದೆ.

  • ಮನೆಗೆ ಬಿಡುವ ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಹಠಯೋಗಿ ಲೋಕೇಶ್ವರ ಸ್ವಾಮೀಜಿ ಬಂಧನ

    ಚಿಕ್ಕೋಡಿ: ವಿದ್ಯಾರ್ಥಿನಿಯನ್ನು ಮನೆಗೆ ಬಿಡುವುದಾಗಿ ಹೇಳಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮೇಕಳಿ‌ ಗ್ರಾಮದ ಸ್ವಯಂ ಘೋಷಿತ ಮಠಾಧೀಶನಾದ ಹಠಯೋಗಿ ಲೋಕೇಶ್ವರ ಎಂಬ ಸ್ವಾಮೀಜಿಯನ್ನ ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

    ಪ್ರಕರಣದ ಬಗ್ಗೆ ಎಸ್​​​​ಪಿ ನೀಡಿದ ವಿವರಣೆ ಹೀಗಿದೆ: ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಯಭಾಗ ತಾಲೂಕಿನ ಮೇಕಳಿ ಗ್ರಾಮದ ಮಠದ ಸ್ವಯಂಘೋಷಿತ ಸ್ವಾಮೀಜಿ ಲೋಕೇಶ್ವರ ಸ್ವಾಮೀಜಿ ವಿರುದ್ಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ 21ರಂದು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಪೊಲೀಸರು ತಕ್ಷಣವೇ ಲೋಕೇಶ್ವರ ಸ್ವಾಮೀಜಿ ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ.

    ಬಂಧಿತ ಸ್ವಾಮೀಜಿ ಮೂಲತಃ ಕಲಬುರಗಿ ಜಿಲ್ಲೆಯವನಾಗಿದ್ದು, ಮೇಕಳಿ ಗ್ರಾಮದಲ್ಲಿ ಮಠ ಕಟ್ಟಿಕೊಂಡು ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾನೆ. ಸುತ್ತಮುತ್ತಲಿ ಜನ ಈ ಮಠದ ಭಕ್ತರಿದ್ದು, ಮಠದಲ್ಲಿ ಅನಾರೋಗ್ಯ ಪೀಡಿತರನ್ನು ಕೆಲವರು ಇಲ್ಲೇ ಬಿಟ್ಟು ಹೋಗುತ್ತಿದ್ದರು. ಭಕ್ತರ ನಂಬಿಕೆ ಹಾಗೂ ವಿಶ್ವಾಸವನ್ನು ದುರುಪಯೋಗ ಪಡೆದುಕೊಂಡು ಈ ದುಷ್ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.

    ಒಂದು ದಿನ ತಮ್ಮ ಪುತ್ರಿಯನ್ನು ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡು ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಲಾಡ್ಜ್ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದಾರೆ. ಈ ಆಧಾರದ ಅಡಿ ಸ್ವಯಂಘೋಷಿತ ಸ್ವಾಮೀಜಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದರು.

    ದೂರು ದಾಖಲಾಗುತ್ತಿದ್ದಂತೆ ಸ್ವಾಮೀಜಿ ಬಂಧನ: ಕಳೆದ ವಾರವೇ ಮೂಡಲಗಿ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಸ್ವಾಮೀಜಿಯ ಬಂಧನವಾಗಿದೆ. ಭಕ್ತರನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಮನೆಗೆ ಡ್ರಾಪ್ ಕೊಡ್ತಿನಿ ಅಂತ ಬಾಲಕಿಯನ್ನು ರಾಯಚೂರು, ಬಾಗಲಕೋಟೆಗೆ ಕರೆದೊಯ್ದಿದ್ದಾನೆ. ಬಳಿಕ ಲಾಡ್ಜ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಕ್ರೌರ್ಯದ ಬಳಿಕ ಬಾಲಕಿ ಮನೆಗೆ ಬಿಡದೇ ಹೊರ ಜಿಲ್ಲೆಯಲ್ಲಿ ಬಿಟ್ಟು ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಈ ಮೊದಲು ಕೇಸ್ ದಾಖಲಾಗಿತ್ತು. ಬಳಿಕ ಮೂಡಲಗಿ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ. ಆರೋಪಿ ಸ್ವಾಮೀಜಿ ಕೃತ್ಯ ಬಗ್ಗೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಿದ್ದೇವೆ ಎಂದು ಎಸ್ಪಿ ತಿಳಿಸಿದರು.

    ಕಾರು ಸಹ ವಶಕ್ಕೆ: ಸ್ವಾಮೀಜಿ ಕಾರನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಈ ಸ್ವಾಮೀಜಿ ಭಕ್ತರನ್ನು ಹೊಂದಿದ್ದು, ಭಕ್ತಿಯ ಕಾರಣಕ್ಕೆ ಮಕ್ಕಳನ್ನು ಸಹ ಅನೇಕ ಭಕ್ತರು ಮಠದಲ್ಲಿ ಬಿಟ್ಟು ಹೋಗುತ್ತಿದ್ದರು ಎಂದು ಎಸ್ಪಿ ಹೇಳಿದರು.