Category: Kundapura

  • ತೆಕ್ಕಟ್ಟೆಯಲ್ಲಿ ದಾರುಣ ಘಟನೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನ, ತಂದೆ-ಮಗ ಸಾವು, ತಾಯಿ ಸ್ಥಿತಿ ಗಂಭೀರ

    ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ.

    ಸಾಲಬಾಧೆಯಿಂದ ಕಂಗೆಟ್ಟಿದ್ದ ಕುಟುಂಬ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದೆ. ಮೃತರನ್ನು ಕಂಚುಗಾರುಬೆಟ್ಟು ನಿವಾಸಿಗಳಾದ ಮಾಧವ ದೇವಾಡಿಗ (56) ಮತ್ತು ಅವರ ಮಗ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಗಂಭೀರವಾಗಿರುವ ತಾರಾ ದೇವಾಡಿಗ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ತಂದೆ ಮತ್ತು ಮಗ ಬಾವಿಗೆ ಹಾರಿರುವುದನ್ನು ತಿಳಿದ ತಾಯಿ ತಾರಾ ದೇವಾಡಿಗ ಕೂಡ ಬಾವಿಗೆ ಧುಮುಕಿದ್ದಾರೆ. ಅವರ ಕೂಗು ಕೇಳಿ ಸ್ಥಳೀಯರಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಸೇರಿದಂತೆ ಇತರರು ರಕ್ಷಣೆಗೆ ಧಾವಿಸಿದ್ದಾರೆ. ಮನೆಯಲ್ಲಿ ದೊರೆತ ಡೆತ್ ನೋಟ್‌ನಲ್ಲಿ, ಸಾಲಬಾಧೆಯಿಂದ ಬಡ ಕುಟುಂಬ ಮಾನ-ಮರ್ಯಾದೆಗಾಗಿ ಆತ್ಮಹತ್ಯೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮಾಧವ ದೇವಾಡಿಗ ಅವರು ಅಂಕದಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.

    ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕುಂದಾಪುರ: ವಿವಾಹಿತ ಮಹಿಳೆಗೆ ಮಾನಸಿಕ ಹಿಂಸೆ, ದೌರ್ಜನ್ಯ ಆರೋಪ

    ಕುಂದಾಪುರ: ಬೀಜಾಡಿ ಗ್ರಾಮದ ಸಫಾ (21) ಎಂಬ ವಿವಾಹಿತ ಮಹಿಳೆಯು ತನ್ನ ಗಂಡ ಹಾಗೂ ಇತರ ಇಬ್ಬರು ವ್ಯಕ್ತಿಗಳ ವಿರುದ್ಧ ಮಾನಸಿಕ ಹಿಂಸೆ ಮತ್ತು ದೌರ್ಜನ್ಯ ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಿರ್ಯಾದಿದಾರರಾದ ಸಫಾ ಅವರು 10/11/2024 ರಂದು ಮುಸ್ಲಿಂ ಸಂಪ್ರದಾಯದಂತೆ ಭಟ್ಕಳದ ಡೊಂಗರ್ ಪಲ್ಲಿ ಎಂಬಲ್ಲಿ ಆರೋಪಿ 1 ಮಹಮ್ಮದ್ ನಬೀಲ್ ಜೊತೆ ವಿವಾಹವಾಗಿದ್ದರು. ವಿವಾಹದ ನಂತರ ಭಟ್ಕಳದಲ್ಲಿ ಗಂಡನೊಂದಿಗೆ ವಾಸವಾಗಿದ್ದ ಸಫಾ ಅವರಿಗೆ 20/11/2024 ರಂದು ಸಂಜೆ 5:00 ಗಂಟೆಗೆ ಆರೋಪಿ 2 ಇಸ್ಮಾಯಿಲ್ ಮತ್ತು ಆರೋಪಿ 3 ಶರ್ಫುನ್ನಿಸ ಇವರು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು “ನಿನ್ನ ಮನೆಗೆ ಹೋಗು” ಎಂದು ಗದರಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ನಂತರ, 20/12/2024 ರಂದು ಸಫಾ ತನ್ನ ಗಂಡನೊಂದಿಗೆ ಬೀಜಾಡಿಯ ತಂದೆಯ ಮನೆಗೆ ಬಂದಿದ್ದ ವೇಳೆ ಸಂಜೆ 8:00 ಗಂಟೆಗೆ ಮತ್ತೆ ಅವಾಚ್ಯವಾಗಿ ಬೈದಿದ್ದಾರೆ. ಈ ವೇಳೆ ಸಫಾ ಅವರ ತಂದೆ ಬುದ್ಧಿವಾದ ಹೇಳಿದ್ದಾರೆ. 02/01/2025 ರಂದು ಆರೋಪಿ 1 ಮಹಮ್ಮದ್ ನಬೀಲ್, ಸಫಾ ಅವರನ್ನು ಭಟ್ಕಳದ ತನ್ನ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ 2 ಮತ್ತು 3 ರವರು ಅವಾಚ್ಯ ಶಬ್ದಗಳಿಂದ ಬೈದು ಹಿಂಸೆ ನೀಡಿದ್ದಾರೆ.

    ಮತ್ತೊಂದೆಡೆ, 30/01/2025 ರಂದು ಸಫಾ ತನ್ನ ಗಂಡನೊಂದಿಗೆ ವಿದೇಶಕ್ಕೆ ತೆರಳಿದ್ದಾಗಲೂ, ಆರೋಪಿ 1 ಮಹಮ್ಮದ್ ನೆಭಿಲ್ ಪದೇ-ಪದೇ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2025ರಡಿ ಕಲಂ 85, 352, 115(2) R/W 3(5) BNS ರಂತೆ ಪ್ರಕರಣ ದಾಖಲಾಗಿದೆ.

  • ಕುಂದಾಪುರ: ಕೋಪಮಾಡಿಕೊಂಡ ಯುವಕ ವಾರಾಹಿ ನದಿಗೆ ಹಾರಿ ಆತ್ಮಹತ್ಯೆ

    ಕುಂದಾಪುರ: ಕೋಪಮಾಡಿಕೊಂಡ ಯುವಕನೋರ್ವ ಬಳ್ಳೂರು ಕಳುವಿನಬಾಗಿಲು ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಬಳ್ಳೂರು ಗ್ರಾಮದ ಸ್ವಸ್ತಿಕ್ (21) ಆತ್ಮಹತ್ಯೆಗೆ ಶರಣಾದ ಯುವಕ.

    ಸ್ವಸ್ತಿಕ್ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಆತನ ಅಜ್ಜಿ ತಾಯಿಗೆ ಬೊಂಡ ಕೊಟ್ಟು ಬರುವಂತೆ ಹೇಳಿದ್ದಕ್ಕೆ ಕೋಪಗೊಂಡು ಸೈಕಲ್ ತೆಗೆದುಕೊಂಡು ಹೋಗಿದ್ದು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಸ್ವಸ್ತಿಕ್ ಎಲ್ಲಿಯಾದರೂ ಹೋಗಿರಬಹುದು ವಾಪಾಸ್ಸು ಬರಬಹುದು ಎಂದು ಮನೆಯವರು ಸುಮ್ಮನಿದ್ದರು. ಸ್ವಸ್ತಿಕ್ ನ ಮೃತದೇಹ ಬಳ್ಳೂರು ಕಳುವಿನಬಾಗಿಲು ವಾರಾಹಿ ಹೊಳೆಯಲ್ಲಿ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದಂತೆ ಮನೆಯವರು ಹಾಗೂ ಇತರರು ಬಂದು ನೋಡಿ ಗುರುತಿಸಿದ್ದಾರೆ.

    ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚೈತ್ರಾ ಕುಂದಾಪುರ ಮದುವೆ: ಬಿಗ್‌ಬಾಸ್ ತಾರೆಯ ಹಸೆಮಣೆ ಏರಲು ಸಜ್ಜು

    ಕುಂದಾಪುರ: ಬಿಗ್‌ಬಾಸ್ ಕನ್ನಡ 11ರ ವಿವಾದಾತ್ಮಕ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಮೇ 9, 2025ರಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮದರಂಗಿ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಚೈತ್ರಾ ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯ ಸಂಭ್ರಮದಲ್ಲಿ ತೊಡಗಿರುವ ಅವರ ವಿಡಿಯೋಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ, ವರನ ಗುರುತಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ, ಇದು ಕುತೂಹಲವನ್ನು ಹೆಚ್ಚಿಸಿದೆ.

    ಚೈತ್ರಾ ಕುಂದಾಪುರ ಯಾರು?

    ಚೈತ್ರಾ ಕುಂದಾಪುರ ಉಡುಪಿಯ ಕುಂದಾಪುರದವರು. ಇವರು ಕನ್ನಡ ಮಾಧ್ಯಮದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ 11ರಲ್ಲಿ ಭಾಗವಹಿಸಿ ತಮ್ಮ ಧೀರ ಮತ್ತು ಸ್ಪಷ್ಟವಾದ ಮಾತುಗಾರಿಕೆಯಿಂದ ಗಮನ ಸೆಳೆದರು. ಆದರೆ, ಅವರ ಪಯಣವು ವಿವಾದಗಳಿಂದ ಕೂಡಿತ್ತು. ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳ ಜೊತೆ ತೀವ್ರ ವಾಗ್ವಾದಗಳು, ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳು ಮತ್ತು ಹೊರಗಿನ ಮಾಹಿತಿಯನ್ನು ಒಳಗೆ ತಂದಿದ್ದಕ್ಕಾಗಿ ಆತಿಥೇಯ ಕಿಚ್ಚ ಸುದೀಪ್‌ರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಫಿನಾಲೆಗೆ ಎರಡು ವಾರಗಳ ಮೊದಲು ಚೈತ್ರಾ ಶತಕೋಡಿ ಹೊರಬಿದ್ದರು.

    ಇದಕ್ಕೂ ಮೊದಲು, ಚೈತ್ರಾ 2023ರಲ್ಲಿ 5 ಕೋಟಿ ರೂಪಾಯಿಗಳ ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಉದ್ಯಮಿಯೊಬ್ಬರಿಗೆ ಬಿಜೆಪಿ ಚುನಾವಣಾ ಟಿಕೆಟ್ ಒದಗಿಸುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ಇವರ ಜೊತೆಗೆ ಇತರ ಏಳು ಜನರ ವಿರುದ್ಧವೂ ದೂರು ದಾಖಲಾಗಿತ್ತು.

    ಮದುವೆಯ ವಿವರ

    ಮದುವೆಯ ಸ್ಥಳ ಮತ್ತು ವರನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಅವರ ಮದರಂಗಿ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ವರನ ಗುರುತಿನ ಬಗ್ಗೆ ಊಹಾಪೋಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದುವೆಯ ಸಂಭ್ರಮವನ್ನು ಸದ್ದಿಲ್ಲದೆ ಆಚರಿಸಲು ಚೈತ್ರಾ ಯೋಜಿಸಿರುವಂತೆ ಕಾಣುತ್ತದೆ.

    ಚೈತ್ರಾ ಕುಂದಾಪುರ ಅವರ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ, ಆದರೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ವಿವಾದಗಳು ಇನ್ನೂ ಚರ್ಚೆಯ ಕೇಂದ್ರಬಿಂದುವಾಗಿವೆ.

  • ಮಂಗಳೂರು/ಉಡುಪಿ: ‘ಆಪರೇಷನ್ ಸಿಂಧೂರ್’ ಬೆನ್ನಲ್ಲೇ ಕರಾವಳಿಯಲ್ಲಿ ಹೈಅಲರ್ಟ್‌

    ಮಂಗಳೂರು/ಉಡುಪಿ, ಮೇ. 08: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ’ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಬೆನ್ನಲ್ಲೇ ರಾಜ್ಯದ ಕರಾವಳಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ 324 ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಮಂಗಳೂರು, ಮಲ್ಪೆ, ಕಾರವಾರ, ಕುಮಟಾ, ಭಟ್ಕಳ, ಹೆಜಮಾಡಿ, ಹೊನ್ನಾವರ, ಬೇಲೆಕೇರಿ ಮತ್ತು ಗಂಗೊಳ್ಳಿಯಲ್ಲಿ ಸಿಎಸ್‌ಪಿ ಕೇಂದ್ರಗಳು ಸೇರಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 340 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅದರಲ್ಲಿ 180 ಸಿಬ್ಬಂದಿಯನ್ನು ಕರಾವಳಿ ನಿಯಂತ್ರಣ ಪಡೆಗೆ ಸೇರಿಸಲಾಗಿದೆ. 13 ದೋಣಿಗಳು ಮತ್ತು ಜೆಟ್ ಸ್ಕೀ ಗಳನ್ನು ಬಳಸಿಕೊಂಡು 24/7 ಕಣ್ಗಾವಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕರಾವಳಿ ಭದ್ರತಾ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    “ಪಹಲ್ಗಾಮ್ ಘಟನೆಯ ನಂತರ, ನಮ್ಮ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆಯಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಇಂದು ಕಾರವಾರದಲ್ಲಿ ಅಣಕು ನಾಗರಿಕ ರಕ್ಷಣಾ ಕವಾಯತು ನಡೆಸಲಾಯಿತು. ಸಮುದ್ರದಲ್ಲಿ ಕಾರ್ಯನಿರ್ವಹಿಸುವ ದೋಣಿಗಳನ್ನು ಸಾಮಾನ್ಯ ದಿನಗಳಿಗಿಂತ ಹೆಚ್ಚು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ” ಎಂದು ಅವರು ಹೇಳಿದರು.

    ಮೇ 7 ರಂದು, ಸಿಎಸ್‌ಪಿ ಗಸ್ತು ದೋಣಿಗಳು ಮಂಗಳೂರಿನ ಹಳೆಯ ಬಂದರು ಪ್ರದೇಶದಲ್ಲಿ ಕಣ್ಗಾವಲು ನಡೆಸಿದವು. ಇದರ ಜೊತೆಗೆ, ಸುತ್ತಮುತ್ತಲಿನ ದೋಣಿಗಳನ್ನು ಪರಿಶೀಲಿಸಲು ಅಣಕು ಕಾರ್ಯಾಚರಣೆಯನ್ನು ಸಹ ನಡೆಸಲಾಯಿತು. ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಕರಾವಳಿ ಭದ್ರತಾ ಪೊಲೀಸರು, ಕರಾವಳಿ ಮತ್ತು ಆಳ ಸಮುದ್ರದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಕರಾವಳಿ ಕಾವಲು ಪಡೆ ಹಡಗುಗಳು ಈಗಾಗಲೇ 24×7 ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ವಿದೇಶಿ ಹಡಗುಗಳ ಮೇಲೆ ಹೆಚ್ಚಿನ ಕಣ್ಗಾವಲು ನಡೆಸುತ್ತಿವೆ.

    ಲಭ್ಯವಿರುವ ದೋಣಿಗಳ ಸಮೂಹವನ್ನು ಬಳಸಿಕೊಂಡು ನಿರಂತರ ಗಸ್ತು ನಡೆಸಲಾಗುತ್ತಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದರು. ಇಂದು ಮಲ್ಪೆಯಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು. ಇತರ ಜಿಲ್ಲೆಗಳಿಂದ ಬರುವ ದೋಣಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ದೋಣಿಗಳಿಗೆ ದಂಡ ವಿಧಿಸಲಾಗಿದೆ. ಅನುಮಾನಾಸ್ಪದವಾಗಿ ಕಂಡುಬಂದ ಯಾರನ್ನಾದರೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

  • ಕುಂದಾಪುರ: ಗಡಿ ಕಲ್ಲಿನ ವಿವಾದ; ಮಹಿಳೆಯ ಮೇಲೆ ಹಾರೆಯಿಂದ ಹಲ್ಲೆ, ಪ್ರಕರಣ ದಾಖಲು

    ಕುಂದಾಪುರ, ಮೇ 07, 2025: ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ಗಡಿ ಕಲ್ಲಿನ ವಿವಾದವೊಂದರಿಂದಾಗಿ ನೆರೆಯವನೊಬ್ಬ ಮಹಿಳೆಯ ಮೇಲೆ ಹಾರೆಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರ ತಾಹಿರಾ (58), ಕಾವ್ರಾಡಿ ಗ್ರಾಮದ ನಿವಾಸಿಯಾಗಿದ್ದು, ಮೇ 06, 2025 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ತಮ್ಮ ಮನೆಯಲ್ಲಿದ್ದಾಗ, ಪಕ್ಕದ ಮನೆಯ ಶಫಿವುಲ್ಲಾ ಎಂಬಾತ ತಾಹಿರಾ ಅವರ ಕಂಪೌಂಡ್ ಬದಿಯಲ್ಲಿ ಹಾಕಿದ್ದ ಮಣ್ಣನ್ನು ತೆಗೆಯುತ್ತಿದ್ದ. ಈ ವೇಳೆ ಶಫಿವುಲ್ಲಾ, ತಾಹಿರಾ ಅವರ ಜಾಗದ ಗಡಿಯನ್ನು ಸೂಚಿಸುವ ಕಲ್ಲನ್ನು ತೆಗೆದುಹಾಕಿದ್ದಾನೆ. ಇದನ್ನು ಗಮನಿಸಿದ ತಾಹಿರಾ, ಶಫಿವುಲ್ಲಾ ಬಳಿ ತೆರಳಿ, ಗಡಿ ಕಲ್ಲನ್ನು ಯಾಕೆ ತೆಗೆದೆ ಎಂದು ಪ್ರಶ್ನಿಸಿದ್ದಾರೆ.

    ಮಣ್ಣನ್ನು ಸರಿಸುವ ಕೆಲಸದಲ್ಲಿ ತೊಡಗಿದ್ದ ಶಫಿವುಲ್ಲಾ, ಏಕಾಏಕಿ ಹಿಂದಿನಿಂದ ಬಂದು ತನ್ನ ಕೈಯಲ್ಲಿದ್ದ ಹಾರೆಯಿಂದ ತಾಹಿರಾ ಅವರ ತಲೆಯ ಎಡಭಾಗ ಮತ್ತು ಎಡ ಭುಜಕ್ಕೆ ಹೊಡೆದಿದ್ದಾನೆ. ತೀವ್ರ ನೋವಿನಿಂದ ಕೂಗಿಕೊಂಡ ತಾಹಿರಾ ನೆಲಕ್ಕೆ ಬಿದ್ದಿದ್ದಾರೆ. ತಾಹಿರಾ ಅವರ ಬೊಬ್ಬೆ ಕೇಳಿ ಅವರ ಗಂಡ ಬರುತ್ತಿರುವುದನ್ನು ಕಂಡ ಶಫಿವುಲ್ಲಾ, ತಾಹಿರಾ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಸ್ಥಳದಿಂದ ತೊಲಗಿದ್ದಾನೆ.

    ಈ ಘಟನೆಗೆ ಸಂಬಂಧಿಸಿದಂತೆ ತಾಹಿರಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 31/2025, ಕಲಂ 118(1), 352, 351(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಗಂಗೊಳ್ಳಿ: ಮಾಣಿಕೊಳಲು ಬದ್ರಿಯ ಜುಮ್ಮಾ ಮಸೀದಿಯ ಖಬರ್‌ಸ್ಥಾನದ ನಾಮಫಲಕ ಧ್ವಂಸ; ಪ್ರಕರಣ ದಾಖಲು

    ಗಂಗೊಳ್ಳಿ, ಮೇ 07, 2025: ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಮಾಣಿಕೊಳಲು ಬದ್ರಿಯ ಜುಮ್ಮಾ ಮಸೀದಿಯ ಖಬರ್‌ಸ್ಥಾನದಲ್ಲಿ ಅಳವಡಿಸಲಾಗಿದ್ದ ಗ್ರಾನೈಟ್ ಕಲ್ಲಿನ ನಾಮಫಲಕಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರ ಎಂ. ಇಬ್ರಾಹಿಂ, ಹಕ್ಲಾಡಿ ಗ್ರಾಮ, ಕಳೆದ ಮೂರು ವರ್ಷಗಳಿಂದ ಬದ್ರಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಸೀದಿಯಿಂದ ಸುಮಾರು 500 ಮೀಟರ್ ದೂರದ ಕಟ್ಟಿನಮಕ್ಕಿ-ನೂಜಾಡಿ ಸಂಪರ್ಕ ರಸ್ತೆಯ ಬದಿಯಲ್ಲಿರುವ ಖಬರ್‌ಸ್ಥಾನದಲ್ಲಿ 23 ಸಮಾಧಿಗಳಿದ್ದು, ಇವುಗಳಿಗೆ ಗ್ರಾನೈಟ್ ಕಲ್ಲಿನ ನಾಮಫಲಕಗಳನ್ನು ಅಳವಡಿಸಲಾಗಿತ್ತು.

    ಮೇ 02, 2025 ರಂದು ಮಧ್ಯಾಹ್ನ 2:00 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ಪ್ರಾರ್ಥನೆ ಸಲ್ಲಿಸಿ ವಾಪಸ್ ಆಗಿದ್ದರು. ಆದರೆ, ಮೇ 06, 2025 ರಂದು ಬೆಳಿಗ್ಗೆ 11:00 ಗಂಟೆಗೆ ಮತ್ತೆ ಪ್ರಾರ್ಥನೆಗೆ ತೆರಳಿದಾಗ, ಖಬರ್‌ಸ್ಥಾನದ ಎಂಟು ಸಮಾಧಿಗಳಿಗೆ ಅಳವಡಿಸಲಾಗಿದ್ದ ಗ್ರಾನೈಟ್ ನಾಮಫಲಕಗಳನ್ನು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಪ್ರವೇಶಿಸಿ ಧ್ವಂಸಗೊಳಿಸಿರುವುದು ಕಂಡುಬಂದಿದೆ. ಈ ಘಟನೆಯಿಂದ ಸುಮಾರು 12,500 ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.

    ಈ ಬಗ್ಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2025, ಕಲಂ 299, 329(3), 324(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗಂಗೊಳ್ಳಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಕುಂದಾಪುರ:‘ಕಾಂತಾರ ಚಾಪ್ಟರ್ 1’ಸೆಟ್‌ನಲ್ಲಿದ್ದ ಜೂನಿಯರ್‌ ಆರ್ಟಿಸ್ಟ್‌ ನದಿಯಲ್ಲಿ ಮುಳುಗಿ ಸಾವು

    ಕುಂದಾಪುರ, ಮೇ. 06: ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿ.ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಘಟನೆ ನಡೆದಿದೆ.

    ಕೊಲ್ಲೂರು ಭಾಗದಲ್ಲಿ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿ ಕಪಿಲ್‌ ಮತ್ತು ತಂಡ ಸೌಪರ್ಣಿಕ ನದಿಗೆ ಈಜಾಡಲು ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಕಪಿಲ್‌ ಮೃತದೇಹವನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ನಾಳೆ ಕಪಿಲ್ ಅವರ ಮನೆಯವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.

    ಕಾಂತಾರಕ್ಕೆ ಒಂದಲ್ಲ ಒಂದು ಗಂಡಾಂತರ ಎದುರಾಗುತ್ತಲೇ ಇದೆ. ಈ ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್ಟ್ ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಯಿತು. ಇದರ ಬೆನ್ನಲ್ಲೇ ಜೂನಿಯರ್ ಆರ್ಟಿಸ್ಟ್ ದಾರುಣ ಸಾವನ್ನಪ್ಪಿದ್ದ ಘಟನೆ ನಡೆದಿದೆ.

  • ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕಡಿವಾಣ; ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ

    ಕೋಟ, ಮೇ 06, 2025: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ನಾಲ್ವರು ಯುವಕರ ವಿರುದ್ಧ ಕೋಟ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

    ಮೇ 05, 2025 ರಂದು ರಾತ್ರಿ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ. ಅವರಿಗೆ, ಹೈದರಾಬಾದ್ ಮತ್ತು ದೆಹಲಿ ತಂಡಗಳ ನಡುವಿನ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಕೆಲವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತು. ಈ ಮಾಹಿತಿಯ ಆಧಾರದ ಮೇಲೆ, ರಾಘವೇಂದ್ರ ಸಿ. ಸ್ಥಳಕ್ಕೆ ತೆರಳಿ, ಆರೋಪಿಗಳಾದ ಕಿರಣ್, ಶಾಂತರಾಮ, ಅಜಿತ್ ಮತ್ತು ವಿವೇಕ ಇವರು ‘ಪಾರ್ಕರ್’ ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಎಸ್‌ಆರ್‌ಎಚ್ ಮತ್ತು ಡಿಸಿ ತಂಡಗಳ ಮೇಲೆ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿರುವುದನ್ನು ಕಂಡುಹಿಡಿದರು.

    ಪೊಲೀಸರು ದಾಳಿಯ ವೇಳೆ ಬೆಟ್ಟಿಂಗ್‌ಗೆ ಬಳಸಿದ ಎರಡು ಮೊಬೈಲ್ ಫೋನ್‌ಗಳು ಮತ್ತು 4,000 ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 93/2025, ಕಲಂ 78 KP ಆಕ್ಟ್ ಮತ್ತು 112 RW 3(5) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಕೋಟೇಶ್ವರ: ಮಟ್ಕಾ ಜುಗಾರಿ ಪ್ರಕರಣ; ಒಬ್ಬನ ಬಂಧನ, ಹಲವರ ವಿರುದ್ಧ ಪ್ರಕರಣ

    ಕುಂದಾಪುರ, ಮೇ 06, 2025: ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಎಂ ಕೋಡಿಯಿಂದ ಹಳೆ ಅಳಿವೆಗೆ ಹೋಗುವ ರಸ್ತೆಯ ಕೊಂಬಾರ ರೆಸಾರ್ಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಜುಗಾರಿ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ, ಒಬ್ಬ ವ್ಯಕ್ತಿಯನ್ನು ಬಂಧಿಸಿ, ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮೇ 05, 2025 ರಂದು ರಾತ್ರಿ 10:00 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಎನ್. ನಂಜಾನಾಯ್ಕ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕೋಟೇಶ್ವರ ಗ್ರಾಮದ ಬೀಟ್ ಸಿಬ್ಬಂದಿ ಆಲಿಂಗರಾಯ ಕಾಟೆರ ಅವರು ಮಟ್ಕಾ ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯನ್ನು ಆಧರಿಸಿ, ಎನ್. ನಂಜಾನಾಯ್ಕ ಸಿಬ್ಬಂದಿಯೊಂದಿಗೆ ರಾತ್ರಿ 10:40 ಗಂಟೆಗೆ ಸ್ಥಳಕ್ಕೆ ತೆರಳಿ, ಮರೆಯಲ್ಲಿ ನಿಂತು ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ, ಮಟ್ಕಾ ಸಂಖ್ಯೆ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡರು.

    ರಾತ್ರಿ 10:45 ಗಂಟೆಗೆ ದಾಳಿ ನಡೆಸಿದ ಪೊಲೀಸರು, ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸುರೇಶ ಎಂಬಾತನನ್ನು ವಶಕ್ಕೆ ಪಡೆದರು. ವಿಚಾರಣೆಯಲ್ಲಿ, ಸುರೇಶ ತನ್ನ ತಪ್ಪನ್ನು ಒಪ್ಪಿಕೊಂಡು, ಸಂದೇಶ ಎಂಬಾತ ಜುಗಾರಿಯ ಸಂಗ್ರಹ ಮೊತ್ತವನ್ನು ಪಡೆದುಕೊಂಡು ಕಮಿಷನ್ ನೀಡುತ್ತಿದ್ದನೆಂದು ತಿಳಿಸಿದ. ಜುಗಾರಿಯಲ್ಲಿ 00 ರಿಂದ 99 ರವರೆಗಿನ ಸಂಖ್ಯೆಗಳಿಗೆ ಹಣವನ್ನು ಪಣವಾಗಿಟ್ಟು ಆಟ ನಡೆಸಲಾಗುತ್ತಿತ್ತು.

    ಪೊಲೀಸರು ದಾಳಿಯ ವೇಳೆ ರೂ. 4,640 ನಗದು, 8 ಮಟ್ಕಾ ಚೀಟಿಗಳು, 1 ಬಾಲ್‌ಪೆನ್, ಒಟ್ಟು ರೂ. 10,000 ಮೌಲ್ಯದ 2 ಒಪ್ಪೋ ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್‌ನಲ್ಲಿ ಸ್ಕ್ರೀನ್‌ಶಾಟ್ ರೂಪದಲ್ಲಿ ದೊರೆತ 8 ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸುರೇಶ (ತೆಕ್ಕಟ್ಟೆ), ಸಂದೇಶ, ಶಂಕರ (ಕುಂಭಾಶಿ), ಜಯರಾಮ್ (ತೆಕ್ಕಟ್ಟೆ), ಶ್ರೀನಿವಾಸ (ಕುಂಭಾಶಿ), ವಿನಾಯಕ (ಕುಂಭಾಶಿ), ಗಣೇಶ್ (ಸಾಲಿಗ್ರಾಮ), ರಾಜು (ಕೋಟ), ಸಿಓ ರಾಜು (ಕುಂಭಾಶಿ) ಮತ್ತು ಬಾಬು (ತೆಕ್ಕಟ್ಟೆ) ಇವರ ವಿರುದ್ಧ ಅಪರಾಧ ಕ್ರಮಾಂಕ 57/2025, ಕಲಂ 112 BNS ಮತ್ತು 78(I)(III) KP ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಕುಂದಾಪುರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.