Category: Kundapura

  • ಕುಂದಾಪುರ: ಕಳೆದುಹೋದ ಮೊಬೈಲ್ ಫೋನ್ CEIR ಪೋರ್ಟಲ್ ಮೂಲಕ ಪತ್ತೆ, ಮಾಲೀಕರಿಗೆ ಹಸ್ತಾಂತರ

    ಕುಂದಾಪುರ, ಮೇ 5: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಒಂದನ್ನು ಕೇಂದ್ರ ಸರ್ಕಾರದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಬಳಸಿ ಪತ್ತೆಹಚ್ಚಿರುವ ಉಡುಪಿ ಪೊಲೀಸರು, ಫೋನ್‌ನ ಮಾಲೀಕರಿಗೆ ಯಶಸ್ವಿಯಾಗಿ ಹಿಂದಿರುಗಿಸಿದ್ದಾರೆ.

    ಏನಿದು ಸಿಇಐಆರ್? ಹೇಗೆ ಕೆಲಸ ಮಾಡುತ್ತದೆ?

    ಸಿಇಐಆರ್ ದೂರು ನೀಡುವ ಕಾರ್ಯವಿಧಾನ ಕದ್ದ ಸಾಧನಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅವುಗಳನ್ನು ಬಳಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಎಚ್ಚರಿಕೆ ನೀಡುತ್ತದೆ. CEIR ಪೋರ್ಟಲ್‌ನಲ್ಲಿ ಸಾಧನ ಮತ್ತು ಅದರ ಮಾಲೀಕರ ಎಲ್ಲಾ ವಿವರಗಳನ್ನು ಒದಗಿಸಿದ ನಂತರ, ಮೊಬೈಲ್ ಸ್ವಯಂಚಾಲಿತವಾಗಿ ನಿರ್ಬಂಧಿಸಲ್ಪಡುತ್ತದೆ. ಹೊಸ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ ಸಾಧನವನ್ನು ಬಳಸುವ ಯಾವುದೇ ಪ್ರಯತ್ನವು ಹೊಸ ಬಳಕೆದಾರರ ಸಂಖ್ಯೆ ಮತ್ತು ಸ್ಥಳ ಮತ್ತು ಇತರ ವಿವರಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.

    ದೂರು ಬಂದ ಬಳಿಕ ಮೊದಲು ಪೊಲೀಸರು ಆ ಸಂಖ್ಯೆಗೆ ಮರಳಿ ಕರೆ ಮಾಡುತ್ತಾರೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಮೊಬೈಲ್ ಫೋನ್ ಸಕ್ರಿಯಗೊಳಿಸುತ್ತಾರೆ. ಇದು ಕದ್ದ ಅಥವಾ ಕಳೆದು ಹೋದ ಫೋನ್ ಎಂದು ತಿಳಿಸುತ್ತಾರೆ. ಮತ್ತು ಅದನ್ನು ಹಿಂತಿರುಗಿಸಬೇಕು ಇಲ್ಲಾ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಾರೆ. ಇದು ರಿಸೀವರ್ ಬಳಸಿದ ಸಿಮ್ ಕಾರ್ಡ್ ಎಲ್ಲಾ ವಿವರಗಳನ್ನು ಒದಗಿಸುತ್ತದೆ ಮತ್ತು ಪೊಲೀಸರು ಫೋನ್‌ ಸಿಕ್ಕ ವ್ಯಕ್ತಿ ಜೊತೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಇಂತಹ ಪ್ರಕರಣದಲ್ಲಿ ಖುದ್ದಾಗಿ ಬಂದು ಫೋನ್‌ ನೀಡುವುದಿಲ್ಲ ಬದಲಿಗೆ ಮೊಬೈಲ್‌ಗಳನ್ನು ಕೊರಿಯರ್‌ಗಳ ಮೂಲಕ ಪೊಲೀಸರಿಗೆ ಹಿಂತಿರುಗಿಸುತ್ತಾರೆ.

    ಮೊಬೈಲ್ ಕಳೆದುಹೋದವರು ದೂರು ದಾಖಲಿಸುವುದು ಹೇಗೆ?

    ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳ ಬಗ್ಗೆ ದೂರು ದಾಖಲಿಸಲು ನಾಗರಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:

    1. CEIR ಪೋರ್ಟಲ್‌ಗೆ ಭೇಟಿ: www.ceir.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
    2. ದೂರು ದಾಖಲಾತಿ: “Block/Lost Mobile” ಆಯ್ಕೆಯನ್ನು ಆರಿಸಿ, ಅಗತ್ಯವಿರುವ ಮಾಹಿತಿಯಾದ ಫೋನ್‌ನ IMEI ಸಂಖ್ಯೆ, ಮೊಬೈಲ್ ಸಂಖ್ಯೆ, ಕಳೆದ ಸ್ಥಳದ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
    3. ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್: ಕರ್ನಾಟಕದ ನಾಗರಿಕರು KSP ಆ್ಯಪ್‌ನಲ್ಲಿ “e-Lost” ವಿಭಾಗದ ಮೂಲಕ ದೂರು ದಾಖಲಿಸಬಹುದು. ದೂರು ದಾಖಲಾದ ನಂತರ, CEIR ಪೋರ್ಟಲ್ ಮೂಲಕ ಫೋನ್‌ನ IMEI ಸಂಖ್ಯೆಯನ್ನು ತಡೆಯಲಾಗುತ್ತದೆ ಮತ್ತು ಟ್ರ್ಯಾಕಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ.
    4. ಸ್ಥಳೀಯ ಪೊಲೀಸ್ ಠಾಣೆ: ದೂರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿ, ಇದರಿಂದ ಪೊಲೀಸರು CEIR ವ್ಯವಸ್ಥೆಯ ಮೂಲಕ ಫೋನ್ ಪತ್ತೆಗೆ ಕ್ರಮ ಕೈಗೊಳ್ಳಬಹುದು.

    ಈ ಪೋರ್ಟಲ್‌ ಬಳಸಲು ಸಿಮ್ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು

    ಈ ವ್ಯವಸ್ಥೆ ಬಳಸಿಕೊಳ್ಳಲು ಮೊಬೈಲ್ ಮತ್ತು ಸಿಮ್ ಅನ್ನು ಕರ್ನಾಟಕದಲ್ಲಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಕಳೆದು ಹೋದ ಮೊಬೈಲ್ ಅನ್ನು ದೇಶದ ಯಾವುದೇ ಭಾಗಕ್ಕೆ ತೆಗೆದುಕೊಂಡ ಹೋದರೂ ಪತ್ತೆಹಚ್ಚಬಹುದು. ಹಿಂದೆ ರಾಜ್ಯದಲ್ಲಿ ಕಳೆದು ಹೋದ ಮೊಬೈಲ್ಗಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಈಗ ಅದು ಸುಲಭವಾದ ಮಾರ್ಗವಾಗಿದೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಬಡವರ ಮಕ್ಕಳ ಕೊಲೆಗಳನ್ನು ಬಲಿದಾನ ಎಂದು ಬಣ್ಣಿಸುವವರು ಸ್ವತಃ ಬಲಿದಾನ ನೀಡಲಿ.

    ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಶ್ರಫ್ ಕೇರಳದಿಂದ ಮಂಗಳೂರಿಗೆ ಬಂದಿದ್ದ ಯುವಕ. ಮಂಗಳೂರಿನ ರೈಲು ಹಳಿಗಳ ಮೇಲೆ ಬಿದ್ದ ಚಿಂದಿ ಆಯುತ್ತಾ ಬದುಕು ಸಾಗಿಸುವ ಅಶ್ರಫ್‌ಗೆ ಮಂಗಳೂರಿನಲ್ಲಿ ಮನೆ ಇಲ್ಲ, ಸೂರಿಲ್ಲ. ರಾತ್ರಿ ಸಿಕ್ಕ ಜಾಗದಲ್ಲಿ ಮಲಗುತ್ತಾನೆ.

    ಅಶ್ರಫ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ಒಂದು ಜಾಗಕ್ಕೆ ಹೋಗುತ್ತಾನೆ. ಅಲ್ಲಿ ನೀರು ಕುಡಿಯುತ್ತಾನೆ. ಮೊದಲೇ ಮಾನಸಿಕ ಅಸ್ವಸ್ಥ. ಮೇಲಾಗಿ ಮುಸ್ಲಿಂ. ಇಷ್ಟಕ್ಕೇ ಆತನ ಮೇಲೆ ಮೂವತ್ತಕ್ಕೂ ಹೆಚ್ಚು ಯುವಕರು ಮುಗಿಬೀಳುತ್ತಾರೆ. ಆತನ ಇಡೀ ದೇಹಕ್ಕೆ ಮನಬಂದಂತೆ ಥಳಿಸಿ ಗುಂಪು ಹಲ್ಲೆ ಮಾಡಿ ಕೊಲೆ ಮಾಡುತ್ತಾರೆ.

    ಅಸಹಜ ಸಾವು ಎಂದು ದಾಖಲಾಗಿದ್ದ ಈ ಸಾವು ಮರಣೋತ್ತರ ಶವಪರೀಕ್ಷೆಯ ಬಳಿಕ ಗುಂಪುಹಲ್ಲೆಯಿಂದ ಆದ ಸಾವು ಎಂದು ಗೊತ್ತಾಗುತ್ತದೆ. ಅದಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ “ಆತ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ. ಅದಕ್ಕಾಗಿ ಅವನ ಮೇಲೆ ಗುಂಪು ಹಲ್ಲೆ ಮಾಡಿದೆ” ಎಂದು ಕಥೆ ಕಟ್ಟಿತು. ಏಕೆಂದರೆ ಈ ಗುಂಪು ಹಲ್ಲೆಯಲ್ಲಿ ಪಾಲ್ಗೊಂದ ಬಹುತೇಕ ಯುವಕರು ಒಂದೋ ಇವರ ಕಾರ್ಯಕರ್ತರು ಅಥವಾ ಕನಿಷ್ಟ ಪಕ್ಷ ಇವರ ದ್ವೇಷದ ವಿಷ ಕಾರುವ ಸಂಘಿ ಐಡಿಯಾಲಜಿಯಿಂದ ಪ್ರೇರಿತರಾದವರು.

    ಪಾಕಿಸ್ತಾನ ಝಿಂದಾಬಾದ್ ಎಂದು ಅಶ್ರಫ್ ಕೂಗಿದ ಅಂದು ಕೊಳ್ಳೋಣ. ಹಾಗೆ ಘೋಷಣೆ ಕೂಗಿದರೆ ತಪ್ಪು. ಹಾಗಂತ ಅಷ್ಟಕ್ಕೆ ಒಬ್ಬ ಮಾನಸಿಕ ಅಸ್ವಸ್ಥನನ್ನು ಕೊಲೆ ಮಾಡಿಬಿಡುವುದೆ? ಮತ್ತು ಕಾನೂನಿನಲ್ಲಿ ನಂಬಿಕೆ ಎಂದು ಬಾಯಿಮಾತಿಗಾದರೂ ಹೇಳುವ ಬಿಜೆಪಿ ನಾಯಕರು ಈ ಕೊಲೆಯನ್ನು ಒಂದು ಶಬ್ದದಲ್ಲಿಯೂ ಖಂಡಿಸದೆ ಈ ಕಗ್ಗೊಲೆಯನ್ನು ಸಮರ್ಥಿಸಿಬಿಡುವುದೆ?

    ಅದಾದ ಬಳಿಕ ಕೆಲವೇ ದಿನಗಳಲ್ಲಿ ಅಂದರೆ ನಿನ್ನೆ ಸುಹಾಸ್ ಶೆಟ್ಟಿ ಎಂಬಾತನ ಕೊಲೆಯಾಗುತ್ತದೆ. ಈತ ರೌಡಿ ಶೀಟರ್. ಎರಡೆರಡು ಕೊಲೆಗಳಲ್ಲಿ ಆರೋಪಿ. ಒಂದು ಆರೋಪ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಹತ್ಯೆ ಮಾಡಿದ್ದು. ಇನ್ನೊಂದು ಆರೋಪ ಹಿಂದೂ ಯುವಕ ಕೀರ್ತಿ ಕೊಲೆಯಲ್ಲಿ ಭಾಗಿಯಾಗಿದ್ದು. ಅದಲ್ಲದೆ ಆತನ ವಿರುದ್ಧ ಹಲವು ಪ್ರಕರಣಗಳಿವೆ. ಬಿಜೆಪಿ ಮತ್ತು ಸಂಘಪರಿವಾರದ ಪ್ರಕಾರ ಇಷ್ಟು ನಟೋರಿಯಸ್ ಹಿನ್ನೆಲೆಯ ಸುಹಾಸ್ ಶೆಟ್ಟಿ ಅವರ ಹಿಂದೂ ಕಾರ್ಯಕರ್ತ! ಹಿಂದೂ ಹೋರಾಟಗಾರ!
    ಬಿಜೆಪಿಯವರ ಪ್ರಕಾರ ಅಶ್ರಫ್ ಕಗ್ಗೊಲೆಯಾಗುವ ತನಕ ಸರಿಯಾಗಿದ್ದ ಮಂಗಳೂರಿನ ಶಾಂತಿ ಸುವ್ಯವಸ್ಥೆ ಸುಹಾಸ್ ಶೆಟ್ಟಿ ಕೊಲೆಯಾದ ಕೂಡಲೇ ಹಾಳಾಗುತ್ತದೆ. ಅಶ್ರಫ್ ಕೊಲೆಯಾದಾಗ ದೇಶಭಕ್ತರ ನಾಡಾಗಿ ಕಂಡಿದ್ದ ಮಂಗಳೂರು ಸುಹಾಸ್ ಕೊಲೆಯಾದ ಕೂಡಲೇ ಪಾಪಿ ಪಾಕಿಸ್ತಾನದಂತೆ ಕಾಣಿಸುತ್ತದೆ.

    ಸುಹಾಸ್ ಕೊಲೆ ಖಂಡನೀಯ. ಆದರೆ ಆ ಕೊಲೆಯನ್ನು ಬಳಸಿಕೊಂಡು ಹೆಣದ ಮೇಲೆ ರಾಜಕೀಯ ಮಾಡುತ್ತಾ, ಬಾಯಿಗೆ ಬಂದಂತೆ ಕೋಮುದ್ವೇಷ ಪ್ರಚೋದಿಸುವ ಹೇಳಿಕೆಗಳನ್ನು ಪದೇಪದೆ ನೀಡುತ್ತಾ ಹಿಂದೂ ಯುವಕರನ್ನು ಕೆಣಕುತ್ತಿರುವುದು ಇದೇ ಬಿಜೆಪಿ ಮತ್ತು ಇವರ ಸಂಘಟನೆಗಳ ನಾಯಕರು ತಾನೆ? ಶಾಂತಿ ಸುವ್ಯವಸ್ಥೆ ಕಾಪಡಲು ಸಹಕರಿಸುವ ಜವಾಬ್ದಾರಿ ಬಿಜೆಪಿಗೆ, ಆರೆಸ್ಸೆಸ್‌ಗೆ ಇಲ್ಲವೆ?

    ನಿನ್ನೆ ಸುಹಾಸ್ ಕೊಲೆ ನಡೆದ ಸಮಯದಿಂದ ಈ ಪೋಸ್ಟ್ ಬರೆಯುವ ಹೊತ್ತಿನ ವರೆಗೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ, ಮಂಗಳೂರಿನ ಮೂರು ಬೇರೆಬೇರೆ ಪ್ರದೇಶಗಳಲ್ಲಿ ಈ ಯಾವುದೇ ಘಟನೆಗಳಿಗೆ ಸಂಬಂಧವೇ ಇಲ್ಲದ ನಾಲ್ವರು ಅಮಾಯಕ ಮುಸ್ಲಿಮ್ ಯುವಕರ ಮೇಲೆ ಹಲ್ಲೆಯಾಗಿದೆ. ಮಂಗಳೂರಲ್ಲಿ ಇಷ್ಟೆಲ್ಲ ಹಿಂಸೆ ನಡೆಯುತ್ತಿದ್ದರೂ ತಮ್ಮ ಕಾರ್ಯಕರ್ತರನ್ನು ತಡೆಯುವುದು ಬಿಟ್ಟು ಇನ್ನಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತಿರುವುದು ಇದೇ ಕಲ್ಲಡ್ಕ ಗ್ಯಾಂಗ್ ಅಲ್ಲವೆ? ಮಂಗಳೂರಿನಲ್ಲಿ ಇಂದು ಹಿಂದೂ ಪ್ರಯಾಣಿಕರೇ ಹೆಚ್ಚಿದ್ದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೇಲೆ ನಿಮ್ಮದೇ ಕಾರ್ಯಕರ್ತರು ಕಲ್ಲು ತೂರಿದರಲ್ಲ ಅದಕ್ಕೆ ಯಾರು ಹೊಣೆ.

    ಯಾವುದಾದರೂ ಪ್ರಯಾಣಿಕರಿಗೆ ಅದರಲ್ಲೂ ಹಿಂದೂಗಳಿಗೆ ಗಂಭೀರ ಗಾಯಗಳಾಗುತ್ತಿದ್ದರೆ ಯಾರು ಹೊಣೆ?
    ಹಿಂದೂತ್ವಕ್ಕಾಗಿ, ಹಿಂದೂ ಧರ್ಮಕ್ಕಾಗಿ ಇನ್ನೊಬ್ಬ ಯುವಕನ ಬಲಿದಾನವಾಗಿದೆ ಎಂದು ಹೇಳಿಕೆ ನೀಡುವ ಕಲ್ಲಡ್ಕ ಪ್ರಭಾಕರ ಭಟ್ಟರೆ, ನಿಮ್ಮ ಹಿಂದೂ ಧರ್ಮಕ್ಕೆ ಕರಾವಳಿಯ ಇನ್ನೂ ಎಷ್ಟು ಬಡ ಹಿಂದೂ ಮನೆಗಳ ಮಕ್ಕಳ ಹೆಣಗಳು ನಿಮಗೆ ಬೇಕು?

    ಅಶ್ರಫ್ ಕೊಲೆಯೂ ಖಂಡನೀಯ. ಸುಹಾಸ್ ಕೊಲೆಯೂ ತಪ್ಪು. ಇದು ನನ್ನ ನಿಲುವು. ನಮ್ಮಂಥವರು ಎರಡೂ ಕುಟುಂಬಗಳಿಗಾಗಿ ಮಿಡಿಯುತ್ತೇವೆ. ಆದರೆ ಬಿಜೆಪಿ ಮತ್ತು ಸಂಘಕ್ಕೆ ಸುಹಾಸ್ ಕೊಲೆ ಮಾತ್ರ ತಪ್ಪು, ಅಶ್ರಫ್ ಕೊಲೆ ಸರಿ!

    ಪೊಲೀಸರಿರಲಿ, ಕಾನೂನು ವ್ಯವಸ್ಥೆ ಇರಲಿ, ಸರ್ಕಾರವಿರಲಿ ಸುಹಾಸ್ ಮತ್ತು ಅಶ್ರಫ್ ಕೊಲೆ ಮಾಡಿದ ಕೊಲೆಗಡುಕರನ್ನು ಪತ್ತೆ ಮಾಡಬಹುದು, ಶಿಕ್ಷೆ ನೀಡಬಹುದು. ಅದಕಿಂತ ಹೆಚ್ಚಿನದನ್ನು ಅವು ಈ ವ್ಯವಸ್ಥೆಗಳು ಮಾಡಲಾರವು. ಕರಾವಳಿಯ ಸಜ್ಜನರು, ಅದು ಯಾವುದೇ ಮತಧರ್ಮದವರಿರಲಿ, ಮಾಡಬೇಕಾದ ಮೊದಲ ಕೆಲಸವೆಂದರೆ ನಮ್ಮ ಮಕ್ಕಳನ್ನು ಈ ಮತಾಂಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ದೂರವಿಟ್ಟು ಕಾಪಾಡುವುದು. ಈ hatemongerಗಳ ದ್ವೇಷದ, ಹಿಂಸೆಯ ಮಾತು ಮತ್ತು ಪ್ರಚೋದನೆಗಳನ್ನು ಧಿಕ್ಕರಿಸಿ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು ಶಾಂತಿ, ಸಹಬಾಳ್ವೆಯ ಬದುಕು ಬಾಳುವುದು.

    ಈ ಮತಾಂಢ, ಕೋಮುವಾದಿ, hatemonger ಪಾರ್ಟಿಗಳಿಗೆ, ನಾಯಕರಿಗೆ, ಸಂಘಟನೆಗಳಿಗೆ ಅವರ ರಾಜಕೀಯ ಲಾಭಕ್ಕಾಗಿ ಅವರವರ ಧರ್ಮಗಳ ಯುವಕರದ್ದೇ ಬಲಿದಾನಗಳು ಬೇಕಾದರೆ ಅಂತಹ ಬಲಿದಾನಕ್ಕೆ ಕರೆಕೊಡುತ್ತಿರುವವರು, ಅದಕ್ಕೆ ಪ್ರಚೋದಿಸುವವರು ಮೊದಲು ತಮ್ಮದೇ ಪ್ರಾಣಗಳನ್ನು ಧರ್ಮ ಉಳಿಸುವ ಆ ಮಾಹಾಕಾರ್ಯಕ್ಕಾಗಿ ಬಲಿಕೊಡಲಿ. ಆಗಲಾದರೂ ನಾವು ನೆಮ್ಮದಿಯಿಂದ ಬದುಕಬಹುದೋ, ಟ್ರೈ ಮಾಡೋಣ..

    ಲೇಖಕ: ಶಶಿಧರ ಹೆಮ್ಮಾಡಿ

    ಶಶಿಧರ್ ಹೆಮ್ಮಾಡಿ ಅವರು ಕರಾವಳಿ ಕರ್ನಾಟಕ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ. ಅವರು ಕರಾವಳಿಯ ಸಾಮಾಜಿಕ-ರಾಜಕೀಯ ಸ್ಥಿತಿಗತಿಯ ಬಗ್ಗೆ ಗಹನ ತಿಳುವಳಿಕೆಯನ್ನು ಹೊಂದಿರುವ ಅನುಭವೀ ಪತ್ರಕರ್ತರು. ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಅನುಮತಿಯಿಂದ ಪ್ರಕಟಿಸಲಾಗಿದೆ.

  • ಕುಂದಾಪುರ ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆ: ಎಸ್ಎಸ್ಎಲ್‌ಸಿ ಶೇ. 99.05 ಫಲಿತಾಂಶ  

    ಅಪ್ಡೇಟ್:

    • ಕುಂದಾಪುರ ಎಜುಕೇಶನ್‌ ಸೊಸೈಟಿ ಪ್ರವರ್ತಿತ ಎಚ್‌.ಎಮ್‌.ಎಮ್‌. ಮತ್ತು ವಿ. ಕೆ. ಆರ್‌. ಶಾಲೆಯ ಎಸೆಸೆಲ್ಸಿ ಪರೀಕ್ಷೆ-1ರ ಮರುಮೌಲ್ಯಮಾಪನದಲ್ಲಿ ಸಾಯಿಸ್ಪರ್ಶ ಕೆ. 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.
    • ಈಕೆಗೆ 623 ಅಂಕಗಳು ಬಂದಿದ್ದವು. ಬಿ. ವಿ. ಜಯಸೂರ್ಯ 623 ಅಂಕಗಳೊಂದಿಗೆ 3ನೇ, ಭಕ್ತಿ ಶೆಟ್ಟಿ ಹಾಗೂ ಪ್ರಿಯಾ 622 ಅಂಕಗಳೊಂದಿಗೆ 4 ನೇ, ವಿನ್ಯಾಸ ಅಡಿಗ ಹಾಗೂ ನಿರೀಕ್ಷಾ ಎನ್‌. ಶೆಟ್ಟಿಗಾರ್‌ 621 ಅಂಕಗಳೊಂದಿಗೆ ಐದನೇ, ಸನ್ವಿತ್‌ ಶೆಟ್ಟಿ 620 ಅಂಕಗಳೊಂದಿಗೆ 6ನೇ , ಸಮನ್ವಿ ಎಸ್‌. 618 ಅಂಕಗಳೊಂದಿಗೆ 8 ನೇ, ಮತ್ತು ಅನ್ವಿತ್‌ ಕೆ. 616 ಅಂಕಗಳೊಂದಿಗೆ 10 ನೇ ರ್‍ಯಾಂಕ್‌ ಗಳಿಸಿದ್ದಾರೆ.
    • ಶಾಲೆಗೆ ಒಟ್ಟು ರಾಜ್ಯಮಟ್ಟದ 9 ರ್‍ಯಾಂಕ್‌ಗಳು ಲಭಿಸಿವೆ ಎಂದು ಶಾಲಾ ಅಧ್ಯಕ್ಷ ಹಾಗೂ ಸಂಚಾಲಕ ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ, ಪ್ರಾಂಶುಪಾಲೆ ಡಾ| ಚಿಂತನಾ ರಾಜೇಶ್‌ ತಿಳಿಸಿದ್ದಾರೆ.

    ಕುಂದಾಪುರ: ಎಜ್ಯುಕೇಶನ್‍ ಸೊಸೈಟಿ ರಿ. ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಈ ಬಾರಿ ಎಸ್. ಎಸ್. ಎಲ್‍. ಸಿ ಪರೀಕ್ಷೆಗೆ 106 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ವಿಶಿಷ್ಟ ದರ್ಜೆಯಲ್ಲಿ ಮತ್ತು 41 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಶಾಲೆಗೆ ಶೇಕಡಾ 99.05 ಫಲಿತಾಂಶ ಲಭಿಸಿರುತ್ತದೆ.

    ವಿದ್ಯಾರ್ಥಿಗಳಾದ  ಸಾಯಿಸ್ಪರ್ಶ ಕೆ. 623 (99.68%), ಬಿ.ವಿ. ಜಯಸೂರ್ಯ 622 (99.52%), ಪ್ರಿಯಾ 622 (99.52%), ಭಕ್ತಿ ಶೆಟ್ಟಿ 621 (99.36%), ನಿರೀಕ್ಷಾ ಎನ್‌. ಶೆಟ್ಟಿಗಾರ್‌ 621 (99.36%), ಸನ್ವಿತ್‌ ಶೆಟ್ಟಿ 619 (99.04%), ವಿನ್ಯಾಸ್‌ ಅಡಿಗ (619 (99.04%), ಸಮನ್ವಿ ಎಸ್‌ 616 (98.56%) ಅನ್ವಿತ್‌ ಕೆ. 615 (98.405) ಸಿಂಚನಾ ಎಸ್‌. ಶೆಟ್ಟಿ  614( 98.24%)  ನಿಹಾಲ್‌ ಅಮಿನ್‌  610 ( 97.60%) ರವಿನಾ ಬಿ. 610 ( 97.60%)  ಅದ್ವೈತ್‌ ಟಿ 609 (97.44%)  ರಾಘವೇಂದ್ರ  ಅಡಿಗ 609 (97.44%) ಆಶ್ಲೇಷ್‌ ಎನ್‌. 607 (97.12%), ಪ್ರೀತಿ 606 (96.96%) ಅದಿತಿ ಅಡಿಗ 605 (96.80%) ಲಹರಿ 605 (96.80%), ಸುಭಿಕ್ಷಾ 605 (96.80%), ಕೀರ್ತನಾ ವಿ. ಶೆಟ್ಟಿ 604 (96.64%) ಸೃಜನಿ ಎಸ್. 603, ತನ್ಮಯಿ ಹೊಳ್ಳ 603, ಸುಮುಖ 601, ಪೂರ್ವಿಕಾ ರಾವ್‍ 601, ಶ್ರೀನಂದನ್‍ ಉಪಾಧ್ಯಾಯ 599, ವರೇಣ್ಯ ಶರ್ಮಾ ಎನ್‍. ವಿ. 599, ಭುವಿ ಆರ್. ಗಾಣಿಗ 599, ಮನ್ವಿತ್‍ ಜೆ. ಶೆಟ್ಟಿ 598, ರಿತೇಶ್‍ 598, ಐಶಾತುಲ್‍ ಬುಶ್ರಾ 596, ರಿಶಿತಾ ಎಸ್‍. 596, ಬ್ರಾಹ್ಮೀ ಉಡುಪ 594, ಧನ್ಯ ರಾಯ್ಕರ್‍ 594 ಅಂಕ ಗಳಿಸಿದ್ದಾರೆ.  

  • ಕುಂದಾಪುರ: 75,000 ರೂ. ವಂಚನೆ: ಆರೋಪಿಯ ವಿರುದ್ಧ ಪ್ರಕರಣ ದಾಖಲು

    ಕುಂದಾಪುರ, ಮಾರ್ಚ್ 12, 2025: ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ವ್ಯಕ್ತಿಯೊಬ್ಬ ಎಲ್‌ಇಡಿ ಅಳವಡಿಕೆಯ ಕಾರಣಕ್ಕೆಂದು ಹೇಳಿ, 68 ವರ್ಷದ ಕೃಷ್ಣಯ್ಯ ಎಂಬುವವರಿಂದ 75,000 ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಮೂಡಲಕಟ್ಟೆಯ ಕೃಷ್ಣಯ್ಯ ಎಂಬುವವರು ದಿನಾಂಕ 12 ಮಾರ್ಚ್ 2024ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ಶಾಸ್ತ್ರಿ ಸರ್ಕಲ್‌ನಲ್ಲಿ ಆರೋಪಿ ಕಿರಣ್ ಎಂಬಾತನನ್ನು ಭೇಟಿಯಾಗಿದ್ದಾರೆ. ಆರೋಪಿಯು ಎಲ್‌ಇಡಿ ಅಳವಡಿಕೆಗೆ ಕುಂದಾಪುರಕ್ಕೆ ಬಂದಿರುವುದಾಗಿ ಹೇಳಿ, ಪಿರ್ಯಾದಿದಾರರ ಮೊಬೈಲ್‌ನಿಂದ ಫೋನ್‌ಪೇ ಮೂಲಕ 75,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಕೃಷ್ಣಯ್ಯ ಅವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2025ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭವಾಗಿದೆ. ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಸೂಚಿಸಿದ್ದಾರೆ.