Category: Kundapura

  • ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟನೆ

    ಕುಂದಾಪುರ, ಮೇ 28, 2025: ಅವಿಭಜಿತ ದ,ಕ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಪ್ರಾಮಾಣಿಕ ಸೇವೆ ನೀಡುತ್ತಾ ವ್ಯವಸಾಯಗಾರರ ಶ್ರೇಯೋಭಿವೃದ್ಧಿಯಲ್ಲಿ ಶ್ರಮಿಸುತ್ತಿವೆ. ಕೃಷಿಪತ್ತಿನ ಸಹಕಾರ ಸಂಘಗಳಿಗೆ ರೈತರಿಗೆ ಪೂರಕವಾಗಿ ಸ್ಪಂದಿಸಲು ಸಾಕಷ್ಟು ಅವಕಾಶಗಳಿದ್ದು, ಆ ಬಗ್ಗೆಯೂ ಚಿಂತನೆಯನ್ನು ಮಾಡಬೇಕಾಗಿದೆ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಅವರು ಮೇ 28ರಂದು ಹಾಲಾಡಿಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟಿಸಿ ಮಾತನಾಡಿದರು.

    ಪ್ರಸ್ತುತ ಶುದ್ಧ ತೆಂಗಿನ ಎಣ್ಣೆ ತಯಾರಿಸುವ ಘಟಕಗಳನ್ನು ನಿರ್ಮಿಸಿ ಸೇವೆ ನೀಡಲು ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಅವಕಾಶವಿದೆ. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದವರು ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಈ ಯೋಜನೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಅದೇ ರೀತಿ ಕರಾವಳಿಯಲ್ಲಿ ಭತ್ತದ ಧಾರಣೆಯನ್ನು ಕೂಡಾ ಅಕ್ಕಿಗಿರಣಿಯವರು ನಿರ್ಧರಿಸುತ್ತಾರೆ. ಕಟಾವು ಆದ ತಕ್ಷಣ ಭತ್ತ ಗಿರಣಿಗಳಿಗೆ ಹೋಗುತ್ತದೆ. ಅಲ್ಲಿ ತೇವಾಂಶ, ಇತರ ಕಾರಣ ಹೇಳಿ ಅವರು ನೀಡಿದ ಬೆಲೆಯನ್ನು ರೈತರು ಪಡೆದುಕೊಳ್ಳಬೇಕು. ರೈತರಿಗೆ ಸೂಕ್ತ ಗೋದಾಮು, ಒಣಿಸಲು ಡ್ರೈಯರ್ ವ್ಯವಸ್ಥೆ ಇದ್ದರೆ ಭತ್ತವನ್ನು ಉತ್ತಮ ಧಾರಣೆ ಬರುವ ತನಕ ಶೇಖರಿಸಿಡಬಹುದು. ಅಂಥಹ ವ್ಯವಸ್ಥೆಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘಗಳು ಮಾಡಬೇಕು. ವ್ಯವಸಾಯ ಸೇವಾ ಸಹಕಾರಿ ಸಂಘಗಳು ರೂಪಿತವಾಗಿದ್ದೇ ವ್ಯವಸಾಯಗಾರರ ಅನುಕೂಲಕ್ಕಾಗಿ. ತನ್ನ ಜವಬ್ದಾರಿಯನ್ನು ಯಾವತ್ತೂ ಮರೆಯಬಾರದು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್.ಜಯರಾಮ ಶೆಟ್ಟಿ ಮಾತನಾಡಿ, ಹಾಲಾಡಿ ಶಾಖೆ ಇವತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲ ಮರುಪಾವತಿ, ಠೇವಣಿ, ಸದಸ್ಯತ್ವ ಎಲ್ಲ ವಿಚಾರಗಳಲ್ಲೂ ಗುರುತಿಸಿಕೊಂಡಿದೆ. ಗ್ರಾಹಕರ ವಿಶ್ವಾಸದ ಕಾರಣ ಇವತ್ತು ಇಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ಆರಂಭವಾಗಲು ಕಾರಣವಾಯಿತು. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸ್ತುತ 4.21 ಕೋಟಿ ಪಾಲು ಬಂಡವಾಳ, 104.20 ಕೋಟಿ ಠೇವಣಾತಿ, 50.07 ಕೋಟಿ ಹೂಡಿಕೆಯನ್ನು ಹೊಂದಿದೆ. ಮಾರ್ಚ್ 31-2025ರ ಅಂತ್ಯಕ್ಕೆ 2.40 ಕೋಟಿ ಲಾಭ ಗಳಿಸಿದೆ. ನಾಲ್ಕು ಶಾಖೆಗಳನ್ನು ಸಂಸ್ಥೆ ಹೊಂದಿದ್ದು ಎಲ್ಲ ಶಾಖೆಗಳು ಸ್ವಂತ ಕಟ್ಟಡ ಹೊಂದಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. 828 ಕೋಟಿ ವ್ಯವಹಾರವನ್ನು ಸಂಸ್ಥೆ ಮಾಡಿದೆ. ಸಂಘದ ವತಿಯಿಂದ ಗೋಳಿಯಂಗಡಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಗ್ರಾಹಕರಿಗೆ ಲಾಕರ್ ಕೀ ಹಸ್ತಾಂತರ ಮಾಡಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು, ಸಹಕಾರಿ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಕೃಷಿಪತ್ತಿನ ಸಹಕಾರ ಸಂಘಗಳು ಇವತ್ತು ರೈತರಿಗೆ ಪ್ರಾಮಾಣಿಕ ಸೇವೆ ನೀಡುತ್ತಾ, ಪ್ರಗತಿಯ ಪಥದಲ್ಲಿ ಮುನ್ನೆಡೆಯುತ್ತಿವೆ. ರೈತರಿಗೆ ಯಂತ್ರೋಪಕರಣಗಳು, ಔಷಧ, ಶಿಕ್ಷಣಕ್ಕೆ ನೆರವು, ಸಾಮಾಜಿಕ ಉದ್ದೇಶಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರ ಕ್ಷೇತ್ರ ತೊಡಗಿಸಿಕೊಂಡಿದೆ. ಗಳಿಸಿದ ಲಾಭದಲ್ಲಿ ಸದಸ್ಯರಿಗೆ, ಸಮಾಜಕ್ಕೆ ನೀಡುವುದು ಕೂಡಾ ಮುಖ್ಯ. ಇವತ್ತು ಹಾಲಾಡಿಯಲ್ಲಿ ಅಂದು ಮಹಾಬಲ ಶೆಟ್ಟಿಯವರು ಸಹಕಾರದ ಉದ್ದೇಶಕ್ಕೆ ನಿವೇಶನ ಕಾದಿರಿಸಿದ್ದನ್ನು ಇಂದೂ ಜನ ನೆನಪಿಸಿಕೊಳ್ಳುತ್ತಾರೆ. ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಬೇಕು ಎಂದರು.

    ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಮ್.ಮಹೇಶ ಹೆಗ್ಡೆ ಹೊಸ ನವೋದಯ ಸ್ವ-ಸಹಾಯ ಸಂಘಗಳನ್ನು ಉದ್ಘಾಟಿಸಿದರು. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಕನ್ಯ, ಹಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಸುಬ್ರಾಯ, ಸಯ್ಯಾದ್ ಸಾಹೇಬ್ ಹೆಚ್ ಅವರನ್ನು ಸನ್ಮಾನಿಸಲಾಯಿತು. ಕಟ್ಟಡದ ಒಳಾಂಗಣ ವಿನ್ಯಾಸ ಮಾಡಿದ ಸೂರ್ಯಪ್ರಕಾಶ ಭಟ್, ಸಹಕಾರ ನೀಡಿದ ನರಸಿಂಹ ಶೆಟ್ಟಿ ಚೋರಾಡಿ, ಅಣ್ಣಪ್ಪ ಕುಲಾಲ್ ಅವರಿಗೆ ಗೌರವಾರ್ಪಣೆ ನೀಡಲಾಯಿತು.

    ಹಾಲಾಡಿ ಶಾಖೆ ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಪೂಜಾರಿ, ನಿರ್ದೇಶಕರಾದ ಎಚ್.ಕೆ.ಸೀತಾರಾಮ ಶೆಟ್ಟಿ, ದಯಾನಂದ ಆರ್.ಶೆಟ್ಟಿ, ಎಮ್.ಚಂದ್ರಶೇಖರ ಶೆಟ್ಟಿ, ದಯಾನಂದ ಪೂಜಾರಿ ಕೆ., ಇಚ್ಚಿತಾರ್ಥ ಶೆಟ್ಟಿ, ಉದಯ ಶೆಟ್ಟಿ, ಕೃಷ್ಣ ನಾಯ್ಕ, ಶ್ರೀಮತಿ ಸವಿತಾ ಪಿ ಶೆಟ್ಟಿ, ಶ್ರೀಮತಿ ಸುಜಾತ ಪೂಜಾರಿ, ಶಿವರಾಮ, ಪ್ರದೀಪ, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

    ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಘದ ಬೆಳವಣಿಗೆಯ ವಿವರ ನೀಡುತ್ತಾ, 7 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘವು 12 ಸಾವಿರ ಸದಸ್ಯರನ್ನು ಹೊಂದಿದೆ. 99% ಸಾಲ ವಸೂಲಾತಿ, 100 ಸ್ವಸಹಾಯ ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಭಾಗದ ಬಹುದಿನಗಳ ಬೇಡಿಕೆಯಾದ ಹೊಸ ಕಟ್ಟಡವು ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಸದಸ್ಯರ ಸೇವೆ ಸಜ್ಜಾಗಿದೆ ಎಂದರು.

    ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ಹರೀಶ್ ಕಿಣಿ ಬಿ. ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಅವೈಜ್ಞಾನಿಕ ಕೇಬಲ್‌ ವೈರ್‌ ಅಳವಡಿಕೆ ನಿಯಂತ್ರಣಕ್ಕೆ ಸಭೆ ಒತ್ತಾಯ; ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಭೆ

    ಕುಂದಾಪುರ, 28 ಮೇ,2025: ರಸ್ತೆಯಲ್ಲಿ ಹಾದು ಹೋಗುವಾಗ ನೀವೊಮ್ಮೆ ಸುಮ್ಮನೆ ತಲೆ ಎತ್ತಿ ನೋಡಬೇಕು. ಕಂಬದಿಂದ ಕಂಬಕ್ಕೆ ತೋರಣ ಕಟ್ಟಿದಂತೆ ಕೇಬಲ್‌ ವೈರ್‌ ಗಳು ಇನ್ನೇನು ಬಿದ್ದೇ ಬಿಡುವುದೋ ಎನ್ನುವಂತೆ ಜೋತಾಡುತ್ತಿರುವ ನೋಟ ಭಯ ಹುಟ್ಟಿಸುತ್ತದೆ. ಕುಂದಾಪುರದಿಂದ ಅಮಾವಾಸೆಯವರೆಗೂ ತಲೆಮೇಲೆ ಜೋತುಬಿದ್ದಂತೆಯೇ ಇವೆ. ಅಪಾಯವನ್ನು ತಂದೊಡ್ಡುತ್ತಿವೆ. ಮೆಸ್ಕಾಂ ಅನುಮತಿಯಿಲ್ಲದೇ ಅನಧಿಕೃತ ಕಂಬಗಳನ್ನು ಅಳವಡಿಸಿ ಪ್ರೈವೇಟ್‌ ಕಂಪೆನಿಗಳನ್ನು ಕೇಬಲ್‌ ವೈರ್ ಗಳನ್ನು ಎಳೆಯುತ್ತಿವೆ. ನೂರಾರು ಕಿ. ಮೀ. ಉದ್ದದ ಅನಧಿಕೃತ ಕೇಬಲ್‌ ಜಾಲ ಹರಡಿಕೊಂಡಿದೆ. ಮಾನದಂಡಗಳನ್ನು ಮೀರಿ ಅವೈಜ್ಞಾನಿಕವಾಗಿ ಕೇಬಲ್‌ ವೈರ್‌ ಗಳನ್ನು ಎಳೆಯಲಾಗುತ್ತಿದೆ. ಮೆಸ್ಕಾಂ ಅನುಮತಿ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಮುಂದಿನ ಸಭೆಯಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಕುಂದಾಪುರ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಮುಂದಿನ ಸಭೆಯಲ್ಲಿ ಕೇಬಲ್‌ ಕಂಪೆನಿಗಳಿಂದ ಎಷ್ಟು ಹಣ ಪಾವತಿ ಮಾಡಿಕೊಳ್ಳಲಾಗುತ್ತಿದೆ, ಎಷ್ಟು ಕಂಬಗಳಿಗೆ ಮೆಸ್ಕಾಂ ನಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎನ್ನುವುದರ ಬಗ್ಗೆ ಅನುಪಾಲನ ವರದಿ ಸಲ್ಲಿಸುವಂತೆ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಅವರು ಇಂದು(ಬುಧವಾರ) ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಚಂದ್ರ ಕಾಂಚನ್‌, ವಿದ್ಯುತ್‌ ತಂತಿಗಳು, ಕೇಬಲ್‌ ವೈರ್ ಗಳ ಅವೈಜ್ಞಾನಿಕ ಅಳವಡಿಕೆಯ ಬಗ್ಗೆ ಸಭೆಯ ಗಮನ ಸೆಳೆದರು. ಅವೈಜ್ಞಾನಿಕ ಕೇಬಲ್‌ ವೈರ್‌ ಗಳ ಅಳವಡಿಕೆಗೆ ಮೆಸ್ಕಾಂ ಇಲಾಖೆ ಅನುಮತಿ ನೀಡಬಾರದು. ಕೇಬಲ್‌ ಅಳವಡಿಕೆಗೆಗೆ ಇಲಾಖೆಯಿಂದ ಕೇಳಿದ ಕೂಡಲೇ ಹೆಚ್ಚಿನ ನಿರ್ಬಂಧವಿಲ್ಲದೆ ಅನುಮತಿ ದೊರಕುವುದು ವಾಡಿಕೆ ಎಂಬಂತಾಗಿದೆ. ಸ್ಥಳ ಪರಿಶೀಲನೆ ಮಾಡಿ ಅನುಮತಿ ನೀಡಬೇಕು. ಆಗ ಮಾತ್ರ ಅಪಾಯ ತಪ್ಪಿಸಬಹುದಾಗಿದೆ ಎಂದು ಹೇಳಿದರು.

    ಮೆಸ್ಕಾಂ ಬಗ್ಗೆ ಅಧ್ಯಕ್ಷರ ಅಸಮಧಾನ :

    ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್‌ ತಂತಿಗಳು ಹಾಗೂ ಕಂಬಗಳ ಮೇಲೆ ಅಕ್ಕಪಕ್ಕದ ಮರಗಳ ಕೊಂಬೆಗಳು ಮಳೆ, ಗಾಳಿಯಿಂದ ಬಿದ್ದು ವಿದ್ಯುತ್‌ ಕಂಬ, ತಂತಿಗಳಿಗೂ ಹಾನಿ ಉಂಟಾಗುತ್ತದೆ ಎನ್ನುವುದರ ಬಗ್ಗೆ ಮೆಸ್ಕಾಂ ಸಿಬ್ಬಂದಿಗಳಿಗೆ, ಇಲಾಖೆಗೆ ಹೇಳಬೇಕೆಂದಿಲ್ಲ. ಮಳೆಗಾಲ ಆರಂಭಕ್ಕೂ ಮುಂಚೆಯೇ ವಿದ್ಯುತ್‌ ತಂತಿ, ಕಂಬಗಳ ಅಕ್ಕಪ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ ಮುಂಜಾಗ್ರತೆ ವಹಿಸದೆ ಇರುವುದು ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ.

    ಅಪಾಯವನ್ನು ತಡೆಯುವ ಉದ್ದೇಶದಿಂದ ಕಂಬಗಳು, ತಂತಿಗಳ ಮೇಲೆ ಚಾಚಿಕೊಂಡಿರುವ ಮರದ ಕೊಂಬೆಗಳನ್ನು ಮೆಸ್ಕಾಂ ಇಲಾಖೆ ಕಡಿದು ಅಪಾಯವನ್ನು ತಪ್ಪಿಸಬಹುದಿತ್ತು. ಇನ್ನಾದರೂ ಮುಂಜಾಗ್ರತೆ ವಹಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು. ಖಾಸಗಿ ಜಾಗದಲ್ಲಿರುವ ತಂತಿಗಳ ಮೇಲೆ ಬಂದ ಕೊಂಬೆಗಳನ್ನು ತೆಗೆಯುವುದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂತು. ಇಲಾಖೆ ಮುತುವರ್ಜಿ ವಹಿಸಿಕೊಂಡು ಅವಘಡವನ್ನು ತಪ್ಪಿಸುವಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

    ಲೈನ್‌ ಮ್ಯಾನ್‌ ಕೊರತೆ :

    ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಜಹೀರ್ ನಾಖುದ ಗಂಗೊಳ್ಳಿ‌, ಮಳೆಯಿಂದಾಗಿ ವಿದ್ಯುತ್‌ ವ್ಯತ್ಯವಾಗುತ್ತಿರುವುದನ್ನು ಮತ್ತು ಗಂಗೊಳ್ಳಿ ಭಾಗದಲ್ಲಿ ಲೈನ್‌ ಮ್ಯಾನ್ ಗಳ ಕೊರತೆಯ ಬಗ್ಗೆ ಸಭೆಯ ಗಮನ ಸೆಳೆದರು. ಹೆಚ್ಚವರಿ ಲೈನ್‌ ಮ್ಯಾನ್ ಗಳನ್ನು ನಿಯೋಜಿಸುವಂತೆ ಅವರು ಒತ್ತಾಯಿಸಿದರು. ಮೆಸ್ಕಾಂ ತಲ್ಲೂರು ಉಪ ವಿಭಾಗದ ಅಸಿಸ್ಟೆಂಟ್‌ ಇಂಜಿನಿಯರ್‌ ಶಿವಾನಂದ್‌ ನಾಯಕ್‌ ಮಾತನಾಡಿ, ಉಡುಪಿ ಜಿಲ್ಲಾಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ತಲ್ಲೂರು ಉಪವಿಭಾಗಕ್ಕೆ ಲೈನ್‌ ಮ್ಯಾನ್‌ ನೇಮಕಗೊಳ್ಳಬಹುದು ಎಂದು ಅವರು ಹೇಳಿದರು.

    ರೇಷನ್‌ ಕಾರ್ಡ್‌ ತಿದ್ದುಪಡಿಗೆ ಸಹಕರಿಸಿ :

    ಕೊರಗ ಕುಟುಂಬಗಳು ಪಡಿತರ ಚೀಟಿಯಲ್ಲಿ ದೋಷದಿಂದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯದಂತಾಗಿದೆ. ಪಡಿತರ ಚೀಟಿ ತಿದ್ದುಪಡಿ ಕಾರ್ಯವನ್ನು ಆಹಾರ ಇಲಾಖೆ ಸ್ವಯಂ ಮುತುವರ್ಜಿ ವಹಿಸಿ ನಿರ್ವಹಿಸಬೇಕೆಂದು ಅಧ್ಯಕ್ಷರು ತಿಳಿಸಿದರು.

    ತಾಲೂಕಿಗೆ ಏಪ್ರಿಲ್‌ ನಲ್ಲಿ 9,72,72,172 ರೂ.
    ಕುಂದಾಪುರ ತಾಲೂಕಿಗೆ ಈವರೆಗೆ ಗ್ರಹಲಕ್ಷ್ಮೀ ಯೋಜನೆಯಿಂದ 176,92,96,000 ರೂ. ಗ್ರಹಜ್ಯೋತಿ ಯೋಜನೆಯಿಂದ ಏಪ್ರಿಲ್ ತಿಂಗಳಲ್ಲಿ ತಾಲೂಕಿಗೆ 3,93,14,282 ರೂ. ಅನ್ನ ಭಾಗ್ಯ ಯೋಜನೆಯಿಂದ 3,05,10,000 ರೂ. ಶಕ್ತಿ ಯೋಜನೆಗಾಗಿ 2,74,47,870 ರೂ. ಯುವನಿಧಿ ಯೋಜನೆಗಾಗಿ ಈವರೆಗೆ 1,18,00500 ರೂ. ಬಂದಿದೆ. ಒಟ್ಟು ಏಪ್ರಿಲ್ ತಿಂಗಳಲ್ಲಿ 9,72,72,172 ರೂ. ತಾಲೂಕಿಗೆ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿರುವುದಾಗಿ ಅವರು ತಿಳಿಸಿದರು.

    ಸಭೆಯಲ್ಲಿ ತಾಲೂಕು ಪಂಚಾಯತತ್‌ ಕಾರ್ಯ ನಿರ್ವಹಣಾಧಿಕಾರಿ ಡಾ. ರವಿಕುಮಾರ್‌ ಹುಕ್ಕೇರಿ, ಸಮಿತಿಯ ಸದಸ್ಯರಾದ ಅಭಿಜಿತ್‌ ಪೂಜಾರಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್‌, ಅಉಣ್‌, ವಾಣಿ ಆರ್‌ ಶೆಟ್ಟಿ, ಸವಿತಾ ಪೂಜಾರಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

  • ಕರ್ನಾಟಕ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆ: CET/NEET ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ

    ಬೆಂಗಳೂರು, ಮೇ 27, 2025: ಕರ್ನಾಟಕ ರಾಜ್ಯ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆಯಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

    ಯೋಗ್ಯತಾ ಅಂಶಗಳು:

    • ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
    • ವಿದ್ಯಾರ್ಥಿಯು CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರಬೇಕು.
    • ಕ್ರೈಸ್ತರನ್ನು ಹೊರತುಪಡಿಸಿ, ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.

    ಸಾಲದ ಮೊತ್ತ (ಗರಿಷ್ಠ ಮಿತಿ):

    ಕೋರ್ಸ್ಗರಿಷ್ಠ ಸಾಲದ ಮೊತ್ತ (ರೂ)
    MBBS, MD, MS₹5,00,000
    BDS, MDS₹1,00,000
    BAMS, BHMS, BNYS, BUMS₹50,000
    BE, B.Tech, M.Tech, B.Arch, M.Arch₹50,000
    MBA, MCA, LLB₹50,000
    B.Sc. (Agriculture, Horticulture, etc.)₹50,000
    Pharmacy (B.Pharma, M.Pharma, D.Pharma, Pharma.D)₹50,000

    ಅಗತ್ಯ ದಾಖಲೆಗಳು:

    1. ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
    2. ಆದಾಯ ಪ್ರಮಾಣಪತ್ರ
    3. ಆಧಾರ್ ಕಾರ್ಡ್ ಪ್ರತಿ
    4. CET ಪ್ರವೇಶ ಪತ್ರ
    5. NEET ಪ್ರವೇಶ ಪತ್ರ
    6. SSLC/10ನೇ ತರಗತಿಯ ಅಂಕಪಟ್ಟಿ
    7. PUC/ಡಿಪ್ಲೋಮಾ ಅಂಕಪಟ್ಟಿ
    8. ಇಂಡೆಮ್ನಿಟೀ ಬಾಂಡ್ (Indemnity Bond)
    9. ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
    10. ಪೋಷಕರ ಸ್ವಯಂ ಘೋಷಣೆ ಪತ್ರ

    ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31, 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

    • ☎️ 6363604332 – NNO Mangalore Community Centre
    • ☎️ 7259204123 – NNO Kundapura Community Centre
    • ☎️ 9945167801 – NNO Karkala Community Centre
    • ನಮ್ಮ ನಾಡ ಒಕ್ಕೂಟ ಕಾರ್ಕಳ ಪ್ರಕಟಣೆ
  • ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ (ರಿ.) ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ – ಶಿಕ್ಷಕರ ಓರಿಯಂಟೇಶನ್ ಕಾರ್ಯಕ್ರಮ – 2025

    ಕುಂದಾಪುರ, ಮೇ 27, 2025: ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ, ಎಲ್ಲಾ ವಿಧದ ಜ್ಞಾನವನ್ನು ಪಡೆಯಲು ಅವಕಾಶ ಕಲ್ಪಿಸಬೇಕು. ಶಿಕ್ಷಣದ ನಿಜವಾದ ಉದ್ದೇಶವು ಮಕ್ಕಳಲ್ಲಿರುವ ಎಲ್ಲಾ ಪ್ರತಿಭೆಗಳನ್ನು ಹೊರತಂದು ಜಗತ್ತಿಗೆ ಪರಿಚಯಿಸುವುದಾಗಿದೆ ಎಂದು ಹೆಸ್ಕುತೂರು ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್‌ ಹೇಳಿದರು. ಶಿಕ್ಷಕರು ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸಿ, ಹೆಚ್ಚಿನ ಜ್ಞಾನವನ್ನು ಗಳಿಸಿದಾಗ ಮಕ್ಕಳನ್ನು ಕ್ರಿಯಾಶೀಲ ಕಲಿಕೆಯಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ. ಪಠ್ಯದ ಜೊತೆಗೆ ಚಟುವಟಿಕೆಗಳನ್ನು ಸಂಯೋಜಿಸಿದರೆ, ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳ ಜ್ಞಾನ ಮತ್ತು ಬುದ್ಧಿಮಟ್ಟವನ್ನು ಅಳೆಯಲು ಕೇವಲ ಅಂಕಗಳು ಆಧಾರವಾಗದು; ಸರ್ವಾಂಗೀಣ ಪ್ರಗತಿಯೇ ಶಿಕ್ಷಣದ ಸಾರ್ಥಕತೆಯನ್ನು ತೋರಿಸುತ್ತದೆ. ಇದಕ್ಕೆ ಶಿಕ್ಷಕರ ತರಬೇತಿ ಕಾರ್ಯಗಾರಗಳು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.

    ಅವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 26 ರಿಂದ 28 ರವರೆಗೆ ಆಯೋಜಿಸಲಾದ ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಗಾರದ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಶಿಕ್ಷಕರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಲು ಇದು ಸಹಾಯಕವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ದಿನನಿತ್ಯ ಬದಲಾವಣೆಗೊಳ್ಳುತ್ತಿದ್ದು, ಶಿಕ್ಷಕರು ಹೊಸ ಚಿಂತನೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕ ವಿದ್ಯಾಮಾನಕ್ಕೆ ಹೊಂದಿಕೊಳ್ಳಬೇಕು. ಮೊಬೈಲ್ ಯುಗದಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ತರಬೇತಿ ಕಾರ್ಯಗಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

    ಮೊದಲ ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಫ್ರೀಲ್ಯಾನ್ಸ್ ಅಕಾಡೆಮಿಕ್ ಕೌನ್ಸಿಲ್ ಕನ್ಸಲ್ಟೆಂಟ್ ಮತ್ತು ಸಾಫ್ಟ್ ಸ್ಕಿಲ್ಸ್ ತರಬೇತುದಾರ ಅರುಣ್ ಎಸ್ ಭಾಗವಹಿಸಿದರು. ಶಿಕ್ಷಕರು ಉತ್ಸಾಹದಿಂದ ಕಾರ್ಯಗಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ, ಓರಿಯಂಟಲ್ ಬ್ಲಾಕ್ ಸ್ವಾನ್ ಪ್ರಕಾಶನದ ಚೇತನ್ ಮತ್ತು ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಕಾರ್ಯಕ್ರಮವನ್ನು ನಿರೂಪಿಸಿದರು.

  • ಯಕ್ಷನಿಧಿ ಯೋಜನೆಯಡಿ ಶ್ರಾವಣಿಗೆ ವಿದ್ಯಾಪೋಷಣ: ‘ಸುಮಿತ್ರಾ ಸುಂದರ’ ಮನೆಯ ಹಸ್ತಾಂತರ

    ಕುಂದಾಪುರ, ಮೇ 26, 2025: ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ‍್ಯಂಡ್ ರಿಸರ್ಚ್ ಸೆಂಟರ್ (ಐವೈಸಿ) ಉಡುಪಿ ವತಿಯಿಂದ ಯಕ್ಷನಿಧಿ – ವಿದ್ಯಾಪೋಷಕ್ – ಯಕ್ಷಶಿಕ್ಷಣ ಯೋಜನೆಯಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರಾವಣಿಗೆ ವಿದ್ಯಾಪೋಷಣ ಒದಗಿಸಲಾಯಿತು. ಈ ಕಾರ್ಯಕ್ರಮ ಕುಂದಾಪುರ ತಾಲ್ಲೂಕಿನ ಕಮಲಶಿಲೆಯಲ್ಲಿ ನಡೆಯಿತು.

    ಈ ಸಂದರ್ಭದಲ್ಲಿ, ಡಾ. ಉಡುಪಿ ಸುಂದರಾಯ ಶೇಟ್-ಸುಮಿತ್ರಾ ಬಾಯಿ ಅವರ ಸುಪುತ್ರ ಉಡುಪಿ ಬನ್ನಂಜೆಯ ಯು. ಎಸ್. ಶ್ರೀಧರ್ ಶೇಟ್ ಅವರು, ತಮ್ಮ ಮಾತೃಶ್ರೀಯವರ ಜನ್ಮಶತಾಬ್ದಿಯ ಸವಿ ನೆನಪಿನಲ್ಲಿ ನಿರ್ಮಿಸಿದ ನೂತನ ಮನೆ ‘ಸುಮಿತ್ರಾ ಸುಂದರ’ ಮನೆಯ ಹಸ್ತಾಂತರ ಕಾರ್ಯಕ್ರಮವೂ ನೆರವೇರಿತು. ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉಪಸ್ಥಿತರಿದ್ದರು.

  • ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ ಪ್ರಕರಣ- ಕುಟುಂಬಕ್ಕೆ 10 ಸೆಂಟ್ಸ್ ಜಾಗ ಮಂಜೂರು: ಡಿಸಿ ಆದೇಶ

    ಕುಂದಾಪುರ, ಮೇ 24: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಎಂಬಲ್ಲಿ ಎ.17ರಂದು ನಡೆದ ಮನೆ ಧ್ವಂಸ ಪ್ರಕರಣದ ಸಂತ್ರಸ್ತ ಕೊರಗ ಕುಟುಂಬಕ್ಕೆ ಪುನರ್ವಸತಿಗಾಗಿ 10 ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

    ಕಳೆದ 40ವರ್ಷಗಳಿಂದ ಕಲ್ಯಾಣಿಗುಡೆಯಲ್ಲಿ ವಾಸವಾಗಿದ್ದ ಗಂಗೆ ಕೊರಗ ಅವರ ಮನೆಯನ್ನು ಕೊಲ್ಲೂರು ಶ್ರೀಜಗದಂಭಾ ಸೇವಾ ಟ್ರಸ್ಟ್‌ನವರು ಏಕಾಏಕಿ ನ್ಯಾಯಾಲಯದ ಆದೇಶ ಇದೆ ಎಂದು ಹೇಳಿ ಧ್ವಂಸಗೊಳಿಸಿದ್ದರು. ಇದರ ವಿರುದ್ಧ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ದಲಿತ ಸಂಘಟನೆಗಳು ಹಾಗೂ ಕೊರಗಾಭಿವೃದ್ಧಿ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಈ ಸಂಬಂಧ ಟ್ರಸ್ಟ್ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

    ಆದೇಶದಲ್ಲಿ ಏನಿದೆ?: ಗಂಗೆ ಕೊರಗ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು ಅವರ ವಾಸ್ತವ್ಯದ ಮನೆಯನ್ನು ಧ್ವಂಸ ಮಾಡಿರುವುದರಿಂದ ಭೂ ರಹಿತರಾಗಿದ್ದು, ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಿಕೊಡಲು 10 ಎಕ್ರೆ ಸೆಂಟ್ಸ್ ದರ್ಖಾಸ್ತು ಮಂಜೂರು ಮಾಡುವ ಬಗ್ಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರು ಪ್ರಸ್ತಾವನೆಯನ್ನು ಸಲ್ಲಿಸಿದ್ದರು.

    ಅದರಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 5(ಎ)ರಡಿ ತಾಲ್ಲೂಕಿನಲ್ಲಿ ಶೇ.50ಕ್ಕಿಂತ ಕಡಿಮೆಯಾಗದ ರೀತಿಯಲ್ಲಿ ಅನುಸೂಚಿತ ಜಾತಿಯ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಭೂಮಿಗಳನ್ನು ಮಂಜೂರಾತಿಗೆ ಮೀಸಲಿಡಲು ಅವಕಾಶ ಕಲ್ಪಿಸಿರುವಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಮಂಜೂರಾತಿ ನಿಯಮಗಳು, 1969 ರ ನಿಯಮ 12(4) ರಂತೆ ಭೂ ಮೌಲ್ಯವನ್ನು ವಿನಾಯಿತಿಗೊಳಿಸಿ ಷರತ್ತುಗಳಿಗೆ ಒಳಪಟ್ಟು ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ 10 ಸೆಂಟ್ಸ್ ಜಮೀನನ್ನು ಪರಿಶಿಷ್ಟ ಪಂಗಡದ ಗಂಗೆ ಅವರಿಗೆ ಪುನರ್ ವಸತಿ ಸೌಕರ್ಯ ಕಲ್ಪಿಸಲು ಮಂಜೂರು ಮಾಡಿ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ

  • ಕುಂದಾಪುರ: ಚಿನ್ನ ವಂಚನೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್‌

    ಕುಂದಾಪುರ, ಮೇ 19, 2025: ತಾಲೂಕಿನ ಹಂಗಳೂರು ನಿವಾಸಿಯೊಬ್ಬರು (ಮಹಿಳೆ, 30) ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಚಿನ್ನದ ವಂಚನೆ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಪಿರ್ಯಾದಿದಾರರ ಗಂಡ ವಿದೇಶದಲ್ಲಿದ್ದು, ಕಷ್ಟದ ಸಮಯಕ್ಕಾಗಿ 850 ಗ್ರಾಂ ಚಿನ್ನವನ್ನು ತೆಗೆದಿಟ್ಟಿದ್ದರು. ಸುಮಾರು ಐದು ವರ್ಷಗಳ ಹಿಂದೆ, ಪಿರ್ಯಾದಿದಾರರ ತಮ್ಮನಾದ ಮೊದಲ ಆರೋಪಿ, ವ್ಯವಹಾರದ ಉದ್ದೇಶಕ್ಕಾಗಿ ಈ ಚಿನ್ನವನ್ನು ಪಡೆದುಕೊಂಡಿದ್ದಾನೆ. ಆದರೆ, ಚಿನ್ನವನ್ನು ವಾಪಸ್ ನೀಡದೆ, ಪಿರ್ಯಾದಿದಾರರು ಕೇಳಿದಾಗ “ಇವತ್ತು-ನಾಳೆ” ಎಂದು ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ನಂತರ, ಪಿರ್ಯಾದಿದಾರರು ಮೊದಲ ಆರೋಪಿಯಲ್ಲಿ ಚಿನ್ನದ ಬಗ್ಗೆ ವಿಚಾರಿಸಿದಾಗ, ಎರಡನೇ ಆರೋಪಿಯ ಮೂಲಕ ಚಿನ್ನವನ್ನು ಮೂರನೇ ಆರೋಪಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಆದರೆ, ಮೂರನೇ ಆರೋಪಿಯ ಬಳಿ ವಿಚಾರಿಸಿದಾಗ, “ಅದನ್ನು ನಿಮಗೆ ಕೊಡಲು ಆಗುವುದಿಲ್ಲ, ಅದು ನನ್ನ ಚಿನ್ನ. ಇನ್ನು ಮುಂದೆ ಚಿನ್ನದ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಚಿನ್ನವನ್ನು ತೆಗೆದುಕೊಂಡು, ನಂಬಿಕೆ ದ್ರೋಹ ಮಾಡಿ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2025ರ ಅಡಿಯಲ್ಲಿ ಕಲಂ 351, 352, 318(4), 316(2), ಮತ್ತು 3(2) BNS ರಂತೆ ಪ್ರಕರಣ ದಾಖಲಾಗಿದೆ.

  • ಗುಲ್ವಾಡಿ: ಕೌಂಜೂರು ಕೆತ್ತಮಕ್ಕಿ ಎಸ್‍ಸಿ ಕಾಲೋನಿಗೆ ಹೋಗುವ ರಸ್ತೆಯ ಅಭಿವೃದ್ಧಿ; ಸುಮಾರು 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ

    ಕುಂದಾಪುರ, ಮೇ 24, 2025: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ಅನುದಾನ ಮೀಸಲಿಟ್ಟಿದೆ. ಈ ಅನುದಾನದ ಮೂಲಕ ಕೊರಗರ ಕಾಲೋನಿ ರಸ್ತೆ ಅಭಿವೃದ್ಧಿಗೆ ಪ್ರಯತ್ನಗಳು ನಡೆಯುತ್ತಿವೆ. ಸೌಕೂರು ದೇವಸ್ಥಾನದಿಂದ ಭಟ್ರಹಾಡಿವರೆಗೆ ರಸ್ತೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಬಹುದಿನದ ಬೇಡಿಕೆ. ಪ್ರತಿ ಗ್ರಾಮಕ್ಕೆ ಒಂದೊಂದು ರಸ್ತೆ ನಿರ್ಮಾಣವಾದರೆ ಆ ಊರು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

    ಅವರು ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಂಜೂರು ಕೆತ್ತಮಕ್ಕಿ ಎಸ್‍ಸಿ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ನಿರ್ಮಾಣಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಗುಲ್ವಾಡಿ ಗ್ರಾಮ ಪಂಚಾಯತ್ ಸದಸ್ಯ ರಾಮಕೃಷ್ಣ ಹೆಬ್ಬಾರ್, ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ, ದಿವ್ಯಾನಂದ ಶೆಟ್ಟಿ, ರಾಮ ಅಡಿಗ ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಸಂತೋಷ ಪೂಜಾರಿ ಸ್ವಾಗತಿಸಿದರೆ, ಸುರೇಂದ್ರ ಗುಲ್ವಾಡಿ ವಂದನೆ ಸಲ್ಲಿಸಿದರು.

  • CET Results: Amulya Shetty Secures 209th Rank in State-Level Engineering

    Kundapura, May 24, 2025: Amulya Shetty, a student of Sri Venkataramana Pre-University College, has achieved an impressive 209th rank in the engineering category at the state level in the 2025 Common Entrance Test (CET) conducted by the Karnataka Examinations Authority for admissions to various professional courses, including engineering.

    The college provides daily training for competitive exams, and Amulya has made remarkable use of this opportunity to excel in the examination.

    The college management, principal, teaching, and non-teaching staff have extended their heartfelt congratulations to the student for her outstanding achievement.

  • ಪಂಚಗಂಗಾವಳಿ ಶಾಶ್ವತ ಮೊಹರು; ಅಂಚೆ ಇಲಾಖೆಯಿಂದ ಬಿಡುಗಡೆ

    ಕುಂದಾಪುರ, ಮೇ 24, 2025: ಕುಂದಾಪುರದ ಪ್ರಧಾನ ಅಂಚೆ ಕಚೇರಿಯಲ್ಲಿ ‘ಪಂಚಗಂಗಾವಳಿ’ ಶಾಶ್ವತ ಅಂಚೆ ಮೊಹರು ಶುಕ್ರವಾರ ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅವರು ಅತಿಥಿಗಳ ಸಮ್ಮುಖದಲ್ಲಿ ಈ ಮೊಹರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

    ರಮೇಶ ಪ್ರಭು ಮಾತನಾಡಿ, “ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ‘ಪಂಚಗಂಗಾವಳಿ’ ಬಗ್ಗೆ ತೀವ್ರ ಆಸಕ್ತಿ ತೋರಿದ್ದರು. ಕುಂದಾಪುರದ ಮಹತ್ವವನ್ನು ಎತ್ತಿ ತೋರಿಸುವ ಸಲುವಾಗಿ ಈ ಮೊಹರನ್ನು ರಚಿಸುವ ಆಶಯ ನಮ್ಮದಾಗಿತ್ತು. ಕುಂದಾಪುರ ತಾಲೂಕಿನಲ್ಲಿ ಹರಿಯುವ ‘ಪಂಚಗಂಗಾವಳಿ’ ನದಿಗಳು ದೇಶದಲ್ಲೇ ವಿಶಿಷ್ಟ ಸ್ಥಾನವನ್ನು ಪಡೆದಿವೆ ಎಂಬುದನ್ನು ಗಮನಿಸಿದ ಬಳಿಕ ಇಲಾಖೆಯ ಒಪ್ಪಿಗೆ ದೊರೆಯಿತು. ಈ ಮೊಹರು ಅಂಚೆ ಚೀಟಿ ಸಂಗ್ರಾಹಕರಿಗೂ ಆನಂದ ತಂದಿದೆ. ಈ ಮೊಹರನ್ನು ಅಂಚೆ ಕಾರ್ಡು ಮತ್ತು ಕವರ್‌ಗಳಿಗೆ ಬಳಸುವ ಮೂಲಕ ಜನಪ್ರಿಯಗೊಳಿಸಬಹುದು,” ಎಂದರು.

    ಮೊಹರಿನ ರಚನೆಗೆ ಸಹಕಾರ ನೀಡಿದ ಪಂಚಗಂಗಾವಳಿ ಸಮಿತಿಯ ಸಂಚಾಲಕ ಯು. ಎಸ್. ಶೆಣೈ ಹಾಗೂ ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಉಡುಪಿಯವರನ್ನು ರಮೇಶ ಪ್ರಭು ಅಭಿನಂದಿಸಿದರು. “ಜಿಲ್ಲೆಯಲ್ಲಿ ಒಂಬತ್ತು ಪ್ರಮುಖ ಕೇಂದ್ರಗಳಿಗೆ ಸಂಬಂಧಿಸಿದ ಮೊಹರುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ‘ಪಂಚಗಂಗಾವಳಿ’ 10ನೇ ಮೊಹರಾಗಿದೆ. ಮುಂದಿನ ದಿನಗಳಲ್ಲಿ ಪಂಚಗಂಗಾವಳಿಯ ಚಿತ್ರವಿರುವ ಅಂಚೆ ಕಾರ್ಡನ್ನೂ ಬಿಡುಗಡೆ ಮಾಡಲಿದ್ದೇವೆ. ಕುಂದಾಪುರ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉತ್ತಮ ಸೇವೆಯನ್ನು ನೀಡುತ್ತಿದ್ದು, ಈ ಮೊಹರು ಸಾರ್ವಜನಿಕರಿಗೆ ತಲುಪುವಂತೆ ಮಾಡಲಿದ್ದಾರೆ,” ಎಂದು ತಿಳಿಸಿ ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು.

    ಹಿರಿಯ ವಕೀಲ ಹಾಗೂ ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಮಾತನಾಡಿ, “ಅಂಚೆ ಇಲಾಖೆಯ ಸೇವೆ ಶ್ಲಾಘನೀಯವಾಗಿದೆ. ಸಾರ್ವಜನಿಕರ ಹಿತಾಸಕ್ತಿಗೆ ತಕ್ಷಣವೇ ಸ್ಪಂದಿಸುವ ಈ ಇಲಾಖೆಯು ಕುಂದಾಪುರಕ್ಕೆ ಮಹತ್ವ ನೀಡಿ ‘ಪಂಚಗಂಗಾವಳಿ’ ಮೊಹರನ್ನು ಬಿಡುಗಡೆಗೊಳಿಸಿರುವುದು ಪ್ರಶಂಸನೀಯ. ಇದು ಈ ಪರಿಸರದ ಅಭಿವೃದ್ಧಿಗೆ ಪ್ರೇರಣೆಯಾಗಲಿ,” ಎಂದರು. ವಿದೇಶದಲ್ಲಿಯೂ ಭಾರತೀಯ ಅಂಚೆ ಚೀಟಿಗಳಿಗೆ ಇರುವ ಗೌರವವನ್ನು ಅವರು ವಿವರಿಸಿದರು.

    ಯು. ಎಸ್. ಶೆಣೈ ಮಾತನಾಡಿ, “ವಿದೇಶಿ ಮತ್ತು ಸ್ವದೇಶಿ ಸಂಶೋಧಕರು, ಇತಿಹಾಸಗಾರರು ಪಂಚಗಂಗಾವಳಿ ನದಿಗಳ ವೈಶಿಷ್ಟ್ಯವನ್ನು ದಾಖಲಿಸಿದ್ದಾರೆ. ಮುಂದಿನ ಪೀಳಿಗೆಗೆ ನಮ್ಮ ಪರಿಸರದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ಕಾರಣದಿಂದ 15 ವರ್ಷಗಳಿಂದ ಪಂಚಗಂಗಾವಳಿ ಅಭಿಯಾನ ನಡೆಸುತ್ತಿದ್ದೇವೆ. ಅಂಚೆ ಇಲಾಖೆಯು ಸೂಕ್ತ ಸಮಯದಲ್ಲಿ ಈ ಮೊಹರನ್ನು ಬಿಡುಗಡೆಗೊಳಿಸಿರುವುದು ಸಂತೋಷ ತಂದಿದೆ. ಈ ವಿನ್ಯಾಸಕ್ಕೆ ಸಹಕರಿಸಿದ ಕಲಾವಿದ ಕೇಶವ ಸಸಿಹಿತ್ಲು, ಪ್ರೇರಣೆ ನೀಡಿದ ಕೃಷ್ಣಯ್ಯ, ಮತ್ತು ಅಂಚೆ ಅಧೀಕ್ಷಕ ರಮೇಶ ಪ್ರಭು ಅವರಿಗೆ ಅಭಿನಂದನೆಗಳು. ಅಂಚೆ ಚೀಟಿ ಸಂಗ್ರಹದ ಹವ್ಯಾಸವನ್ನು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿಯ ರೀತಿಯಲ್ಲಿ ಪ್ರೇರೇಪಿಸಬೇಕು,” ಎಂದರು.

    ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಮಾತನಾಡಿ, “ಉಡುಪಿ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಸಂಬಂಧಿಸಿದ ಮೊಹರುಗಳು ಮತ್ತು ಅಂಚೆ ಚೀಟಿಗಳು ಬಿಡುಗಡೆಯಾಗುವಂತೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕೆಲವೊಮ್ಮೆ ಕಾರಣಾಂತರಗಳಿಂದ ವಿಳಂಬವಾಗುತ್ತದೆ, ಅಥವಾ ನಿರೀಕ್ಷಿತ ವಿನ್ಯಾಸ ಬಿಡುಗಡೆಯಾಗದಿರಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸಂತೋಷ ತರುತ್ತದೆ. ‘ಪಂಚಗಂಗಾವಳಿ’ ಮೊಹರಿನ ಬಿಡುಗಡೆ ತೃಪ್ತಿಕರವಾಗಿದೆ,” ಎಂದರು.

    ಕುಂದಾಪುರ ಪ್ರಧಾನ ಅಂಚೆ ಪಾಲಕ ಜಿ. ಎಸ್. ಮರಕಾಲ ಅತಿಥಿಗಳನ್ನು ಸನ್ಮಾನಿಸಿದರು. ಉಡುಪಿ ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಧಾನ ಅಂಚೆ ಪಾಲಕಿ ಸೌಮ್ಯಶ್ರೀ ಸ್ವಾಗತಿಸಿದರು. ಪೂರ್ಣಿಮಾ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು, ಮತ್ತು ಸಹಾಯಕ ಅಂಚೆ ಅಧೀಕ್ಷಕ ದಯಾನಂದ ವಂದನೆ ಸಲ್ಲಿಸಿದರು.