Category: Udupi District

  • ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಗಲಾಟೆ: ಮೂವರು ಆರೋಪಿತರ ವಿರುದ್ಧ ಪ್ರಕರಣ ದಾಖಲು

    ಕುಂದಾಪುರ, ಜೂನ್ 4, 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ಬಳಿಕ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಸುಶಾಂತ್, ಕಾರ್ತಿಕ್ ಮತ್ತು ರಜತ್ ಸೇರಿದಂತೆ ಕೆಲವು ಯುವಕರು ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಾಂಕ ಜೂನ್ 3, 2025 ರಂದು ರಾತ್ರಿ 11:30 ಗಂಟೆಗೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ ಅವರು ಇಲಾಖಾ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದರು. ರಾತ್ರಿ 11:45 ಗಂಟೆಗೆ ಶಾಸ್ತ್ರೀ ಪಾರ್ಕ್‌ಗೆ ತಲುಪಿದಾಗ, ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಜನರು ಶಾಸ್ತ್ರೀ ಸರ್ಕಲ್‌ನಲ್ಲಿ ಜಮಾಯಿಸಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಕೆಲವು ಸಮಯದ ನಂತರ ಜನರು ಚದುರಿಕೊಂಡು ತೆರಳಿದ್ದರು.

    ಆದರೆ, ರಾತ್ರಿ 12:15 ಗಂಟೆಯ ಸಮಯದಲ್ಲಿ, ಶಾಸ್ತ್ರೀ ಸರ್ಕಲ್‌ನ ಆಟೋ ನಿಲ್ದಾಣದ ಬಳಿ ಕೆಲವು ಯುವಕರು ಸಾರ್ವಜನಿಕ ಸ್ಥಳದಲ್ಲಿ ಒಂದು ಮಹೇಂದ್ರ ಎಸ್‌.ಯು.ವಿ ವಾಹನದ ಮೇಲೆ ನಿಂತುಕೊಂಡು, ವಾಹನದ ಸುತ್ತ ಗುಂಪುಗೂಡಿದ್ದರು. ಈ ಸಂದರ್ಭದಲ್ಲಿ, ರಾತ್ರಿ ಗಸ್ತಿನ ಬೀಟ್ ಸಿಬ್ಬಂದಿ, ಹೋಮ್ ಗಾರ್ಡ್‌ಗಳು ಮತ್ತು ತುರ್ತು ಸೇವಾ ವಾಹನದ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿದರು. ಆಗ, ನಾಲ್ಕೈದು ಯುವಕರು ಪರಸ್ಪರ ಕೈಕಾಲು ದೂಡಾಡಿಕೊಂಡು, ಕೂಗಾಡುತ್ತಾ ಸ್ಥಳದಲ್ಲಿ ಅಶಾಂತಿ ಉಂಟುಮಾಡುತ್ತಿರುವುದು ಕಂಡುಬಂದಿತು.

    ಪಿರ್ಯಾದಿದಾರರಾದ ನಂಜಾ ನಾಯ್ಕ ಅವರು ಸಿಬ್ಬಂದಿಯೊಂದಿಗೆ ಗಲಾಟೆಯ ಸ್ಥಳಕ್ಕೆ ತೆರಳಿದಾಗ, ಆರೋಪಿತರು ತಕ್ಷಣವೇ ವಾಹನದಲ್ಲಿ ಚದುರಿ ಓಡಿಹೋಗಿದ್ದಾರೆ. ತನಿಖೆಯಿಂದ ಗಲಾಟೆಯಲ್ಲಿ ಭಾಗಿಯಾಗಿದ್ದವರು ಕುಂದಾಪುರದ ಸುಶಾಂತ್, ಕಾರ್ತಿಕ್, ರಜತ್ ಮತ್ತು ಇತರರೆಂದು ಗುರುತಿಸಲಾಗಿದೆ. ಈ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ, ಶಾಂತಿಗೆ ಭಂಗ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2025, ಕಲಂ 194 (2) BNS ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿತರ ಹುಡುಕಾಟವನ್ನು ತೀವ್ರಗೊಳಿಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

  • ಹೊನ್ನಾಳ: 20ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ – ಮುಂದೂಡಿಕೆ

    ಹೊನ್ನಾಳ, ಜೂನ್ 4, 2025: ಕರ್ನಾಟಕ ಮುಸ್ಲಿಂ ಜಮಾತ್‌ನ ಹೊನ್ನಾಳ ಶಾಖೆಯ ಮಾರ್ಗದರ್ಶನದಲ್ಲಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಹೊನ್ನಾಳ ಶಾಖೆಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊನ್ನಾಳದ ಸರ್ವ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

    • ಸ್ಥಳ: ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ, ಹೊನ್ನಾಳ

    ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಗುವುದು. ಈ ಉಪಕ್ರಮವು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ, ಇದು ಸಮುದಾಯ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಆಯೋಜಕರು ಕೋರಿದ್ದಾರೆ.

  • ಉಡುಪಿ: ಬಕ್ರೀದ್ ಹಿನ್ನಲೆ, ಅನಧಿಕೃತ ಜಾನುವಾರು ವಧೆ, ಸಾಗಾಣಿಕೆ ಕಂಡುಬಂದಲ್ಲಿ ಕಾನೂನು ಕ್ರಮ – ಡಿಸಿ

    ಉಡುಪಿ, ಜೂನ್ 03, 2025: ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ಮಾಡುವುದನ್ನು ತಡೆಗಟ್ಟಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

    ಅವರು ಇಂದು ಉಡುಪಿ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬ ಆಚರಣೆ ಸಂದರ್ಭದಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಲು ನಡೆದ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ಹತ್ತಿರದ ಪೋಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಧಿಕೃತ ಜಾನುವಾರು ಸಾಗಾಣಿಕೆ ಮಾಡಬೇಕಾದ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಆ ವ್ಯಾಪ್ತಿಯ ಪೋಲಿಸ್ ಠಾಣೆಗಳ ಅನುಮತಿ ಪಡೆಯುವುದು ಕಡ್ಡಾಯ ಎಂದರು.

    ಬಕ್ರೀದ್ ಹಬ್ಬದ ಸಂದರ್ಭದಲ್ಲಿ ದನ, ಎಮ್ಮೆ, ಕರು ಹಾಗೂ ಒಂಟೆಗಳನ್ನು ಅಕ್ರಮವಾಗಿ ದಾಸ್ತಾನು ಸಾಗಾಣಿಕೆ ಹಾಗೂ ವಧೆ ಮಾಡುವ ಸಾಧ್ಯತೆ ಇರುವುದರಿಂದ ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಪಾಸಣಾ ತಂಡಗಳನ್ನು ರಚಿಸಲಾಗಿದೆ. ಇದಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತರಾಗಿರಬೇಕು ಎಂದ ಅವರು, ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ತಂಡಗಳು ಸಭೆ ಸೇರಿ, ಇವುಗಳ ನಿಯಂತ್ರಣ ಕಾರ್ಯದ ಬಗ್ಗೆ ಚರ್ಚಿಸಿ, ಕ್ರಮವಹಿಸಬೇಕು ಎಂದರು.

    ಅನಧಿಕೃತ ಜಾನುವಾರು ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸುವಂತೆ ಹಾಗೂ ವಶಪಡಿಸಿಕೊಂಡ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲು ಪಶುವೈದ್ಯಾಧಿಕಾರಿಗಳು ಸನ್ನದ್ಧರಾಗಿರಬೇಕು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

    ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ನಡೆಯಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರರುಗಳು ಶಾಂತಿ ಸಭೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ಜಿಲ್ಲಾ ಪೋಲಿಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾತನಾಡಿ, “ಜಿಲ್ಲಾದ್ಯಂತ ತಪಾಸಣಾ ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಸದ್ರಿ ಕೇಂದ್ರಗಳು ಜಾನುವಾರು ಸಾಗಾಣಿಕೆ ಮಾಡುವ ಕುರಿತು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕಾನೂನು ಉಲ್ಲಂಘನೆ ಮಾಡಿ ಜಾನುವಾರು ಸಾಗಾಣಿಕೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದರು.

    ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ನಗರಸಭೆ ಆಯುಕ್ತ ಮಹೇಶ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರ ಬಂಧನ

    ಕೋಟ, ಜೂನ್ 04, 2025:: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

    ದಿನಾಂಕ 03-06-2025 ರಂದು ರಾತ್ರಿ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ. ಅವರಿಗೆ, ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಕೆಲವು ಯುವಕರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ನಡುವಿನ ಐಪಿಎಲ್ ಟಿ20 ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಿತ್ತು.

    ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಶಿವರಾಜ್ (1ನೇ ಆರೋಪಿ), ಪ್ರದೀಪ್ (2ನೇ ಆರೋಪಿ), ಮತ್ತು ಚಂದ್ರ ಜನ್ನಾಡಿ (3ನೇ ಆರೋಪಿ) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಬೆಟ್ಟಿಂಗ್ ಆಪ್ ಮತ್ತು ವೆಬ್‌ಸೈಟ್‌ ಮೂಲಕ ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳಿಗೆ ಸಂಬಂಧಿಸಿದಂತೆ ಅಕ್ರಮ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

    ಪೊಲೀಸರು ಆರೋಪಿಗಳಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಸಿದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025, ಕಲಂ: 112 BNS ಮತ್ತು 78(i)(iii) KP Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

  • ಕುಂದಾಪುರ: ಉದ್ಯೋಗ ವೀಸಾದ ಹೆಸರಿನಲ್ಲಿ 16 ಲಕ್ಷ ರೂ. ವಂಚನೆ

    ಕುಂದಾಪುರ, ಜೂನ್ 03, 2025: ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಸಿಸಿಲಿ, ಇವರ ಮಗ ಸುನಿಲ್, ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ UK-IN-REGAL ACADEMY ಎಂಬ ಸಂಸ್ಥೆಯ ಫೇಸ್‌ಬುಕ್ ಜಾಹೀರಾತು ನೋಡಿ, ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದರು. ಸಂಸ್ಥೆಯು 90 ದಿನಗಳಲ್ಲಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿತ್ತು.

    ಸುನಿಲ್‌ ಅವರು ಕೊಡಿಯಾಲ್‌ಬೈಲ್‌ನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್‌, 2 ಲಕ್ಷ ರೂಪಾಯಿ ನಗದನ್ನು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ನಂತರ, ಉಳಿದ 16 ಲಕ್ಷ ರೂಪಾಯಿಗಳನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ, ಪದೇ ಪದೇ ಫೋನ್‌ ಕರೆ ಮಾಡಿ, ಪಾವತಿಸದಿದ್ದರೆ ವೀಸಾ ರದ್ದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

    ದಿನಾಂಕ 27-10-2023 ರಂದು ಪಿರ್ಯಾದಿದಾರರ ಮಗಳ ಬ್ಯಾಂಕ್ ಖಾತೆಯ ಮೂಲಕ ಟೌನ್ ಕೋಆಪರೇಟಿವ್ ಬ್ಯಾಂಕ್‌, ಉಡುಪಿ ಶಾಖೆಯಿಂದ 3 ಲಕ್ಷ ರೂಪಾಯಿಯನ್ನು ಸಂಸ್ಥೆಯ ಕಣ್ಣೂರು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಇದೇ ರೀತಿ, 01-12-2023 ರಂದು ಕುಂದಾಪುರ ಕರ್ನಾಟಕ ಬ್ಯಾಂಕ್ ಶಾಖೆಯಿಂದ 13 ಲಕ್ಷ ರೂಪಾಯಿಯನ್ನು ಸಂಸ್ಥೆಯ ಆಕ್ಸಿಸ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.

    ಆದರೆ, ಆರೋಪಿಯು ವೀಸಾ ಕೊಡಿಸದೇ, ಸುನಿಲ್‌ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ದಿನಾಂಕ 20-03-2024 ರಂದು ಸುನಿಲ್‌ ಮಂಗಳೂರಿನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್‌, 3 ತಿಂಗಳೊಳಗೆ ವೀಸಾ ಕೊಡಿಸುವುದಾಗಿ ಅಥವಾ 6 ತಿಂಗಳೊಳಗೆ ಹಣ ವಾಪಸ್‌ ಮಾಡುವುದಾಗಿ ಒಪ್ಪಂದದಲ್ಲಿ ತನ್ನ ಸಹಿ ಮತ್ತು ಕಚೇರಿಯ ಶೀಲಿನೊಂದಿಗೆ ಲಿಖಿತ ಭರವಸೆ ನೀಡಿದ್ದಾನೆ.

    ಆದಾಗ್ಯೂ, 6 ತಿಂಗಳು ಕಳೆದರೂ ಹಣ ವಾಪಸ್‌ ಮಾಡದೇ ಇದ್ದಾಗ, ಸುನಿಲ್‌ ಪುನಃ ಕಚೇರಿಗೆ ಭೇಟಿ ನೀಡಿದಾಗ, ಆರೋಪಿಯು 16 ಲಕ್ಷ ರೂಪಾಯಿಯ ಚೆಕ್‌ (ದಿನಾಂಕ 03-10-2024) ನೀಡಿದ್ದಾನೆ. ಆದರೆ, 16-12-2024 ರಂದು ಚೆಕ್‌ ಕಲೆಕ್ಷನ್‌ಗೆ ಹಾಕಿದಾಗ “Funds Insufficient” ಎಂದು ಹಿಂತಿರುಗಿದೆ.

    ಆರೋಪಿ ಸೂರಜ್ ಜೋಸೆಫ್‌, ವೀಸಾ ಕೊಡಿಸುವ ಭರವಸೆಯೊಂದಿಗೆ ನಗದು ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ 16 ಲಕ್ಷ ರೂಪಾಯಿಯನ್ನು ಪಡೆದು, ವೀಸಾ ಕೊಡಿಸದೇ ಮತ್ತು ಹಣ ವಾಪಸ್‌ ಮಾಡದೇ ವಂಚಿಸಿರುವುದಾಗಿ ಪಿರ್ಯಾದಿದಾರರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ Zero FIR No. 01/2025, ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

  • ಉಡುಪಿ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ

    ಉಡುಪಿ, ಜೂನ್ 4, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಕೊಲ್ಲೂರು, ಅಮಾಸೆಬೈಲು, ಶಿರ್ವ, ಮತ್ತು ಮಣಿಪಾಲದಲ್ಲಿ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಕೊಲ್ಲೂರು: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

    ಅಮಾಸೆಬೈಲು: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

    ಕಾರ್ಕಳ: ಗ್ರಾಮಾಂತರ ಮತ್ತು ಕಾರ್ಕಳ ನಗರ ಠಾಣಾ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು

    ಮಣಿಪಾಲ: ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಉಡುಪಿ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ

    ಉಡುಪಿ, ಜೂನ್ 03, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಅಜೆಕಾರು, ಮಲ್ಪೆ, ಶಿರ್ವ, ಮತ್ತು ಹೆಬ್ರಿಯಲ್ಲಿ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಗಳನ್ನು ಆಯೋಜಿಸಲಾಗಿತ್ತು. ಈ ಸಭೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಅಜೆಕಾರು, ಮಲ್ಪೆ, ಶಿರ್ವ, ಮತ್ತು ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ನಡೆದ ಈ ಸಭೆಗಳಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವ ಕುರಿತು ಚರ್ಚಿಸಿದರು. ಕಾನೂನು ಉಲ್ಲಂಘನೆಯಾಗದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.

  • ತೋಟಗಾರಿಕೆ ಇಲಾಖೆಯ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ

    ಉಡುಪಿ, ಜೂನ್ 02 : ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಲಭ್ಯವಿದ್ದು, ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಪ್ರಸಕ್ತ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಕಾಳುಮೆಣಸು, ಅನಾನಸ್ಸು, ಅಂಗಾಂಶಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೋಸ್ಟೀನ್ ಮತ್ತು ಡ್ರಾ್ಯಗನ್ ಫ್ರೂಟ್ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ನೀರು ಸಂಗ್ರಹಣ ಘಟಕ ನಿರ್ಮಾಣಕ್ಕೆ, ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಪ್ರತಿ ಹೆಕ್ಟೇರಿಗೆ 1,500 ಹಾಗೂ ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ.40 ರ ಸಹಾಯಧನ ಲಭ್ಯವಿದೆ.

    ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.40 ರ ದರದಲ್ಲಿ (ಗರಿಷ್ಠ 12.25 ಲಕ್ಷಗಳವರೆಗೆ), ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಗರಿಷ್ಠ 2.40 ಲಕ್ಷಗಳವರೆಗೆ ಶೇ.50 ರ ವರೆಗೆ ಹಾಗೂ ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hಠಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ರೂ. 1.6 ರಿಂದ 2.45 ಲಕ್ಷ ರೂ. ವರೆಗೆ ಸಹಾಯಧನ ಲಭ್ಯವಿದೆ.

    ಕೃಷಿ ಯಾಂತ್ರೀಕರಣ ಉಪಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನ ಹಾಗೂ ದೊಡ್ಡ ಗಾತ್ರದ ನೀರು ಸಂಗ್ರಹಣಾ ಘಟಕ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ಮತ್ತು ಲಘುಪೋಷಕಾಂಶಗಳ ಖರೀದಿಗೆ ಸಹಾಯಧನ ಪಡೆಯಲು ಅವಕಾಶವಿದೆ.

    ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ /ತುಂತುರು ನೀರಾವರಿ ಅಳವಡಿಕೆಗೆ ರೈತರಿಗೆ ಶೇ.90 ರಷ್ಟು ಸಹಾಯಧನ, ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಮತ್ತು ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 4 ಪೆಟ್ಟಿಗೆ ಖರೀದಿಗೆ ಶೇ.75 ರಿಂದ 90 ರ ಸಹಾಯಧನ ಪಡೆಯಬಹುದಾಗಿದೆ.

    ಮಹಾತ್ಮಾಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿದ್ದು, ಈ ಯೋಜನೆಯ ಪ್ರಯೋಜನೆ ಪಡೆಯಲಿಚ್ಚಿಸುವವರು ಕೂಡಲೆ ಅರ್ಜಿ ಸಲ್ಲಿಸಿ, ಯೋಜನೆಯ ಫಲಾನುಭವಿಯಾಗಬಹುದಾಗಿದೆ.

    ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ರಕಟಣೆ ತಿಳಿಸಿದೆ.

  • ಕುಂದಾಪುರ: ಬಕ್ರೀದ್ ಹಬ್ಬಕ್ಕೆ ಮುನ್ನ ಶಾಂತಿ ಸಭೆ; ಸೌಹಾರ್ದತೆಯಿಂದ ಆಚರಿಸಲು ಸೂಚನೆ

    ಕುಂದಾಪುರ, ಜೂನ್ 03, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವ ಕುರಿತು ಚರ್ಚಿಸಿದರು. ಕಾನೂನು ಉಲ್ಲಂಘನೆಯಾಗದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.

    ಉಡುಪಿ: ನಗರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಉಡುಪಿ: ಮಟ್ಕಾ ಜುಗಾರಿ ಜಾಲದ ಮೇಲೆ ಪೊಲೀಸ್ ದಾಳಿ; ಎಂಟು ಪ್ರಕರಣಗಳು ದಾಖಲು, ಹಲವರು ವಶಕ್ಕೆ

    ಉಡುಪಿ, ಜೂನ್ 03, 2025: ಉಡುಪಿ ಜಿಲ್ಲೆಯ ವಿವಿಧೆಡೆ ದಿನಾಂಕ 02/06/2025 ರಂದು ಸಾರ್ವಜನಿಕ ಸ್ಥಳಗಳಲ್ಲಿ ಮಟ್ಕಾ ಜುಗಾರಿ ಆಟವಾಡಿಸಿ ಹಣ ಸಂಗ್ರಹಿಸುತ್ತಿದ್ದ ಆರೋಪಿಗಳ ವಿರುದ್ಧ ಉಡುಪಿ ನಗರ, ಮಣಿಪಾಲ, ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಘಟನೆಗಳಲ್ಲಿ ಆರೋಪಿಗಳು ಅಂಬಾಗಿಲಿನ ಲಿಯೋ ಕರ್ನಾಲಿಯೋ ಎಂಬಾತನ ಸೂಚನೆಯಂತೆ ಕಮಿಷನ್‌ಗಾಗಿ ಮಟ್ಕಾ ಜುಗಾರಿ ಆಟವಾಡಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ತಿಳಿದುಬಂದಿದೆ.

    ಉಡುಪಿ ನಗರದಲ್ಲಿ ಆರು ಪ್ರಕರಣಗಳು:
    ನಾರಾಯಣ ಬಿ, ಪೊಲೀಸ್ ಉಪನಿರೀಕ್ಷಕರು (ತನಿಖೆ-2), ಉಡುಪಿ ನಗರ ಪೊಲೀಸ್ ಠಾಣೆ, ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಜಂಕ್ಷನ್ ಬಳಿಯ ಗೂಡಂಗಡಿಯ ಹತ್ತಿರ ರಾಮರಾಜ್ ಎಂಬಾತ, ಪುತ್ತೂರು ಗ್ರಾಮದ ಆದರ್ಶ ಬೇಕರಿ ಬಳಿ ಜಗದೀಶ್, ಮತ್ತು ಬೆಂಗಳೂರು ಅಯ್ಯಂಗಾರ್ ಬೇಕರಿ ಬಳಿ ಚಿದಾನಂದ ಎಂಬವರು ಮಟ್ಕಾ ಜುಗಾರಿ ಆಟವಾಡಿಸುತ್ತಿರುವುದನ್ನು ಕಂಡು ದಾಳಿ ನಡೆಸಿದ್ದಾರೆ. ಗೋಪಾಲಕೃಷ್ಣ ಜೋಗಿ, ಪೊಲೀಸ್ ಉಪನಿರೀಕ್ಷಕರು (ತನಿಖೆ-3), ಪುತ್ತೂರು ಬಸ್ ನಿಲ್ದಾಣ ಬಳಿ ಉದಯ ಎಸ್, ಶಿವಳ್ಳಿ ಗ್ರಾಮದ ಕಕ್ಕುಂಜೆ ಕ್ಲಾಸಿಕ್ ಕಾಂಪ್ಲೆಕ್ಸ್ ಎದುರು ತಿಪ್ಪೆಸ್ವಾಮಿ, ಮತ್ತು ಸಂತೆಕಟ್ಟೆ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಮುಂಭಾಗ ರಾಘವೇಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳಿಂದ ಒಟ್ಟು 3,950 ರೂಪಾಯಿ ನಗದು, ಮಟ್ಕಾ ಚೀಟಿಗಳು, ಬಾಲ್‌ಪೆನ್‌ಗಳು, ಮತ್ತು ನೋಕಿಯಾ, ಹೀರೋ, ಸೆಲ್‌ಕೋರ್, ವಿವೋ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2025, 77/2025, 78/2025, 79/2025, 80/2025, ಮತ್ತು 81/2025ರಡಿ ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 112, 318(2) BNS ಅಡಿಯಲ್ಲಿ ದಾಖಲಾಗಿವೆ.

    ಮಣಿಪಾಲದಲ್ಲಿ ಒಂದು ಪ್ರಕರಣ:
    ರಾಮಪ್ರಭು, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ, ಶಿವಳ್ಳಿ ಗ್ರಾಮದ ಬಾಂಬ್ ಬಜಾರ್‌ ಬಳಿಯ ಸಾರ್ವಜನಿಕ ಶೌಚಾಲಯದ ಹತ್ತಿರ ಡಿ. ನಾಗೇಶ್ ಎಂಬಾತನನ್ನು ಮಟ್ಕಾ ಜುಗಾರಿ ಆಟವಾಡಿಸುತ್ತಿರುವಾಗ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 910 ರೂಪಾಯಿ ನಗದು, ಮಟ್ಕಾ ಚೀಟಿ, ಮತ್ತು ಬಾಲ್‌ಪೆನ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 90/2025ರಡಿ ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಕಲಂ 112 BNS ಅಡಿಯಲ್ಲಿ ದಾಖಲಾಗಿದೆ.

    ಬ್ರಹ್ಮಾವರದಲ್ಲಿ ಒಂದು ಪ್ರಕರಣ:
    ಮಹಾಂತೇಶ ಜಾಬಗೌಡರ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ, ಉಪ್ಪೂರು ಗ್ರಾಮದ ಶ್ರೀ ಲಕ್ಷ್ಮಿ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್ ಎದುರು ಕಮಲಾಕ್ಷ ಎಂಬಾತನನ್ನು ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿರುವಾಗ ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 1,600 ರೂಪಾಯಿ ನಗದು, ಮಟ್ಕಾ ಚೀಟಿ, ಮತ್ತು ಬಾಲ್‌ಪೆನ್‌ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2025ರಡಿ ಕಲಂ 112 BNS ಮತ್ತು ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿದೆ.

    ಎಲ್ಲಾ ಆರೋಪಿಗಳು ಲಿಯೋ ಕರ್ನಾಲಿಯೋ ಎಂಬಾತನ ಸೂಚನೆಯಂತೆ ಕಮಿಷನ್‌ಗಾಗಿ ಮಟ್ಕಾ ಜುಗಾರಿ ಆಟವಾಡಿಸಿ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಈ ಜಾಲದ ಬಗ್ಗೆ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.