Category: Udupi District

  • ಕುಂದಾಪುರ: ಕೋಪಮಾಡಿಕೊಂಡ ಯುವಕ ವಾರಾಹಿ ನದಿಗೆ ಹಾರಿ ಆತ್ಮಹತ್ಯೆ

    ಕುಂದಾಪುರ: ಕೋಪಮಾಡಿಕೊಂಡ ಯುವಕನೋರ್ವ ಬಳ್ಳೂರು ಕಳುವಿನಬಾಗಿಲು ವಾರಾಹಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಬಳ್ಳೂರು ಗ್ರಾಮದ ಸ್ವಸ್ತಿಕ್ (21) ಆತ್ಮಹತ್ಯೆಗೆ ಶರಣಾದ ಯುವಕ.

    ಸ್ವಸ್ತಿಕ್ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇದ್ದು ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಆತನ ಅಜ್ಜಿ ತಾಯಿಗೆ ಬೊಂಡ ಕೊಟ್ಟು ಬರುವಂತೆ ಹೇಳಿದ್ದಕ್ಕೆ ಕೋಪಗೊಂಡು ಸೈಕಲ್ ತೆಗೆದುಕೊಂಡು ಹೋಗಿದ್ದು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಸ್ವಸ್ತಿಕ್ ಎಲ್ಲಿಯಾದರೂ ಹೋಗಿರಬಹುದು ವಾಪಾಸ್ಸು ಬರಬಹುದು ಎಂದು ಮನೆಯವರು ಸುಮ್ಮನಿದ್ದರು. ಸ್ವಸ್ತಿಕ್ ನ ಮೃತದೇಹ ಬಳ್ಳೂರು ಕಳುವಿನಬಾಗಿಲು ವಾರಾಹಿ ಹೊಳೆಯಲ್ಲಿ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದಂತೆ ಮನೆಯವರು ಹಾಗೂ ಇತರರು ಬಂದು ನೋಡಿ ಗುರುತಿಸಿದ್ದಾರೆ.

    ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬ್ರಹ್ಮಾವರ: ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣ; ಹಾರಾಡಿ ಗ್ರಾಮ ಪಂಚಾಯಿತಿ ವತಿಯಿಂದ ಕು. ಪ್ರತೀಕ್ಷಾಗೆ ಸನ್ಮಾನ

    ಬ್ರಹ್ಮಾವರ: ತಾಲೂಕಿನ ಹಾರಾಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶೈಕ್ಷಣಿಕ ಸಾಧನೆಯನ್ನು ಗುರುತಿಸುವ ಸಮಾರಂಭವೊಂದು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ, ಅರಿವು ಕೇಂದ್ರ ಹಾರಾಡಿಯ ಸೌಲಭ್ಯಗಳನ್ನು ಪಡೆದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 91.84 ಅಂಕಗಳೊಂದಿಗೆ ಉತ್ತೀರ್ಣರಾದ ಕು. ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು.

    ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

  • ಮೇ 14ರಿಂದ ಉಡುಪಿಯಲ್ಲಿ “ಮಾವು ಮೇಳ-2025”

    ಉಡುಪಿ: ಸೀಕೋ ಮತ್ತು ಯು.ಬಿ. ಫ್ರೂಟ್ಸ್, ಮಂಗಳೂರು ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಐದು ದಿನಗಳ “ಮಾವು ಮೇಳ-2025” ಇದೇ ಮೇ 14 ರಿಂದ 18 ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ ಎಂದು ಸೀಕೋ ಮತ್ತು ಯು.ಬಿ. ಫ್ರೂಟ್ಸ್ ಪಾಲುದಾರ ಅಬ್ದುಲ್ ಕುಂಞಿ ತಿಳಿಸಿದರು.

    ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 14ರಂದು ಸಂಜೆ 4 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರು ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

    ಮಾವು ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ ಮಾರಾಟಕ್ಕೆ ಲಭ್ಯವಿದೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕ,

    ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಸಹಿತ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಾಲುದಾರರಾದ ಸಮೀರ್, ಸಿದ್ದೀಕ್ ಹಾಗೂ ಮ್ಯಾನೇಜರ್ ಮಹಮ್ಮದ್ ಹ್ಯಾರೀಸ್ ಕುದ್ರೋಳಿ ಉಪಸ್ಥಿತರಿದ್ದರು.

  • ಕಾಪು: ಹಣ್ಣು ವ್ಯಾಪಾರಿಗಳ ಮೇಲೆ ಹಲ್ಲೆ, ಬೆದರಿಕೆ – ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಕಾಪು, ಮೇ 10: ಉಡುಪಿ ಜಿಲ್ಲೆಯ ಕಾಪು ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರದಲ್ಲಿ ತೊಡಗಿರುವ ಮೂವರು ಸಹೋದರರ ಮೇಲೆ ಶಾರೀಕ್‌ ಎಂಬಾತನ ನೇತೃತ್ವದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ, ಬೆದರಿಕೆ ಹಾಕಿರುವ ಘಟನೆ ದಿನಾಂಕ 09/05/2025 ರಂದು ನಡೆದಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಬಾಷಾಸಾಬ್ (20), ಕಲಬುರ್ಗಿ ಮೂಲದವರಾಗಿದ್ದು, ಪ್ರಸ್ತುತ ತಮ್ಮ ಪತ್ನಿ, ತಾಯಿ ಹಾಗೂ ಇಬ್ಬರು ತಮ್ಮಂದಿರಾದ ನಬೀಸಾಬ್ (19) ಮತ್ತು ಮಹಮ್ಮದ್‌ ರಫೀಕ್‌ (18) ಜೊತೆಗೆ ಮೂಡನಿಡಂಬೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮೂವರೂ ಸಹೋದರರು ಉಡುಪಿ ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.

    ದಿನಾಂಕ 09/05/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಬಾಷಾಸಾಬ್‌ ಮತ್ತು ಮಹಮ್ಮದ್‌ ರಫೀಕ್‌ ಕಾಪು ಮಾರುಕಟ್ಟೆಯಲ್ಲಿ ವಾಹನದಿಂದ ಹಣ್ಣುಗಳನ್ನು ಇಳಿಸುತ್ತಿದ್ದ ವೇಳೆ, ಪಿರ್ಯಾದಿದಾರರ ಬಾಡಿಗೆ ಮನೆಯ ಸಮೀಪದ ನಿವಾಸಿಯಾದ ಶಾರೀಕ್‌ ಎಂಬಾತ KA-19-MF-2667 ಸ್ವಿಫ್ಟ್‌ ಕಾರಿನಲ್ಲಿ ಇಬ್ಬರು ಅಪರಿಚಿತರೊಂದಿಗೆ ಆಗಮಿಸಿದ್ದಾನೆ. ಶಾರೀಕ್‌, ಬಾಷಾಸಾಬ್‌ ಮತ್ತು ರಫೀಕ್‌ ರವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಆಗ ಇಬ್ಬರೂ ಕಾರಿನಲ್ಲಿ ಕುಳಿತಾಗ, ಶಾರೀಕ್‌ ಕಾರನ್ನು ಉಡುಪಿಯತ್ತ ಚಲಾಯಿಸುವಂತೆ ತನ್ನ ಸಹಚರನಿಗೆ ಸೂಚಿಸಿದ್ದಾನೆ.

    ಕಾರಿನಲ್ಲಿ ಚಲಿಸುವಾಗ, ಶಾರೀಕ್‌ ಮತ್ತು ಇನ್ನೊಬ್ಬ ವ್ಯಕ್ತಿ ಬಾಷಾಸಾಬ್‌ರಿಗೆ ಹೊಡೆದಿದ್ದು, ಶಾರೀಕ್‌ ತನ್ನ ಬಳಿಯಿದ್ದ ಚಾಕುವನ್ನು ರಫೀಕ್‌ಗೆ ತೋರಿಸಿ ಬೆದರಿಕೆ ಹಾಕಿದ್ದಾನೆ. ನಂತರ ಉಡುಪಿ APMC ಮಾರುಕಟ್ಟೆಗೆ ತೆರಳಿ, ಅಲ್ಲಿದ್ದ ನಬೀಸಾಬ್‌ನನ್ನೂ ಕಾರಿನಲ್ಲಿ ಕರೆತಂದ ಆರೋಪಿಗಳು, ಮೂವರನ್ನೂ ಮಲ್ಪೆ ಬೀಚ್‌ಗೆ ಕರೆದೊಯ್ದು ಕೈಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ.

    ಅಲ್ಲಿಂದ ಅಂಬಾಗಿಲು ಮಾರ್ಗವಾಗಿ ಮಣಿಪಾಲಕ್ಕೆ ತೆರಳುವಾಗ, ಶಾರೀಕ್‌ ರಫೀಕ್‌ ಜೇಬಿನಲ್ಲಿದ್ದ 1,500 ರೂ. ಹಣವನ್ನು ಕಸಿದುಕೊಂಡು, ಕಾರಿಗೆ ಪೆಟ್ರೋಲ್‌ ಹಾಕಿಸಿಕೊಂಡಿದ್ದಾನೆ. ನಂತರ ಬಾರ್‌ವೊಂದರಲ್ಲಿ ಮದ್ಯ ಸೇವಿಸಿ, ಡಿ.ಸಿ ಆಫೀಸ್‌ ಬಳಿ ಕರ್ಕೊಂಡು ಹೋಗಿದ್ದಾರೆ.

    ಮಣಿಪಾಲದ ಕಾಡಿನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಅಲ್ಲಿ ಕೂಡ ಬೆದರಿಕೆಯನ್ನು ಮುಂದುವರಿಸಿದ್ದಾರೆ. ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಅಂಬಾಗಿಲಿಗೆ ಮರಳಿದ ಆರೋಪಿಗಳ ಜೊತೆಗಿದ್ದ ಇಬ್ಬರು ಅಪರಿಚಿತರು ಕಾರಿನಿಂದ ಇಳಿದುಕೊಂಡಿದ್ದಾರೆ.

    ಈ ಘಟನೆಯ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025, ಕಲಂ 140(3), 115(2), 352, 351(2) R/w 3(5) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ಉಡುಪಿ: ಭಾರತ-ಪಾಕ್ ಉದ್ವಿಗ್ನತೆ; ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

    ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಉಡುಪಿಯಾದ್ಯಂತ ಶುಕ್ರವಾರ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಶಾಂತಿ ಮತ್ತು ರಾಷ್ಟ್ರೀಯ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಸಾಮೂಹಿಕ ಪ್ರಾರ್ಥನೆಯ ನಂತರ, ಧಾರ್ಮಿಕ ಮುಖಂಡರು ಮತ್ತು ಸಮುದಾಯದ ಸದಸ್ಯರು ದೇಶದ ಸುರಕ್ಷತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮುದಾಯದ ಮುಖಂಡ ಇಕ್ಬಾಲ್ ಮನ್ನಾ, “ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಅಗತ್ಯವಿದ್ದರೆ, ಭಾರತವು ಅರ್ಧ ಗಂಟೆಯೊಳಗೆ ಕಾರ್ಯನಿರ್ವಹಿಸಬಹುದು” ಎಂದು ಹೇಳಿದರು.

    “ಪಾಕಿಸ್ತಾನದ ಪುನರಾವರ್ತಿತ ಪ್ರಚೋದನೆಗಳನ್ನು ಸಹಿಸಲಾಗುವುದಿಲ್ಲ. ಈ ನಿರ್ಣಾಯಕ ಸಮಯದಲ್ಲಿ, ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ನಮಗೆ ವಕ್ಫ್ ಮಂಡಳಿಯಿಂದಲೂ ಮಾರ್ಗದರ್ಶನ ದೊರೆತಿದೆ. ಆದರೆ ಅದಕ್ಕೂ ಮೊದಲು, ನಾವು ಶಾಂತಿ ಮತ್ತು ದೇಶದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.

    ಜಿಲ್ಲೆಯಾದ್ಯಂತ ಮುಸ್ಲಿಮರು ಮಸೀದಿಗಳಲ್ಲಿ ಸೇರಿ ದೇಶವು ಶೀಘ್ರವಾಗಿ ಶಾಂತಿ ಮತ್ತು ಸ್ಥಿರತೆಗೆ ಮರಳಲಿ ಎಂಬ ಸಂದೇಶವನ್ನು ನೀಡಿದರು. ಈ ಪ್ರಾರ್ಥನೆಯನ್ನು ಕೇವಲ ಸಂಘರ್ಷದಿಂದ ಸುರಕ್ಷತೆಗಾಗಿ ಮಾತ್ರವಲ್ಲದೆ, ಎಲ್ಲಾ ಸಮುದಾಯಗಳ ನಡುವಿನ ಸಾಮರಸ್ಯಕ್ಕಾಗಿ ಮಾಡಲಾಯಿತು.

  • ಕಾರ್ಕಳ: ಕಲ್ಲುಕೋರೆಯಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನಿಗೆ ಗಂಭೀರ ಗಾಯ

    ಕಾರ್ಕಳ: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರಿನ ಶಿವರಾಜ್ (27) ಎಂಬ ಕಾರ್ಮಿಕನಿಗೆ ಸ್ಪೋಟಕ ಸಿಡಿದ ಪರಿಣಾಮ ತಲೆಗೆ ಮಾರಣಾಂತಿಕ ಗಾಯವಾಗಿರುವ ಘಟನೆ ನಡೆದಿದೆ. ಈ ಕುರಿತು ಶಿವರಾಜ್‌ರ ಪತ್ನಿ ಪಲ್ಲವಿ (25) ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆಯ ವಿವರಗಳ ಪ್ರಕಾರ, ದಿನಾಂಕ 08/05/2025 ರಂದು ಮಧ್ಯಾಹ್ನ 1:40 ಗಂಟೆಗೆ ಶಿವರಾಜ್ ಮತ್ತು ಇತರ ಕಾರ್ಮಿಕರು ಕಂಪ್ರೆಸರ್ ಬಳಸಿ ಕಲ್ಲುಕೋರೆಯಲ್ಲಿ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಕಾರ್ಯ ನಡೆಸಿದ್ದರು. ಡ್ರಿಲಿಂಗ್ ಮುಗಿಸಿ ಕಲ್ಲುಕೋರೆಯಿಂದ ಹೊರಬಂದು ಕಂಪ್ರೆಸರ್ ಬಳಿ ಕುಳಿತಿದ್ದ ವೇಳೆ, ಕಲ್ಲು ಸಿಡಿಸಲು ಇಟ್ಟಿದ್ದ ಸ್ಪೋಟಕವು ಸಿಡಿದಿದೆ. ಈ ವೇಳೆ ವೇಗವಾಗಿ ಬಂದ ಕಲ್ಲೊಂದು ಕಂಪ್ರೆಸರ್‌ಗೆ ಬಡಿದು, ಶಿವರಾಜ್‌ರ ತಲೆಯ ಎಡಭಾಗಕ್ಕೆ ತಗುಲಿದ್ದರಿಂದ ಗಂಭೀರ ರಕ್ತಗಾಯವಾಗಿದೆ.

    ದೂರಿನಲ್ಲಿ, ಕಲ್ಲುಕೋರೆಯ ಮಾಲಿಕ ಫ್ರಾನ್ಸಿಸ್ ಡಿಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಎಂಬವರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2025ರಡಿಯಲ್ಲಿ ಕಲಂ 288, 125(a), 125(b) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

    ಮುಂದಿನ ತನಿಖೆ ನಡೆಯುತ್ತಿದೆ.

  • ತ್ರಾಸಿ-ಮರವಂತೆ ಪ್ರವಾಸೋಧ್ಯಮ ಕೇಂದ್ರವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು ಮುತುವರ್ಜಿ ಕ್ರಮ: ಕೇಂದ್ರ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್

    ಕುಂದಾಪುರ: ಉಡುಪಿ ಜಿಲ್ಲೆ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಪೂರಕವಾಗಿದೆ. ಮರವಂತೆಯಲ್ಲಿ ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಹಾಗೂ‌ ಮದ್ಯೆ ರಸ್ತೆಯಿದ್ದು ಇದೊಂದು ಅದ್ಭುತ ಪ್ರದೇಶ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಯೋಜನೆ‌ ಸಿದ್ಧಪಡಿಸಿ ನೀಡಿದಲ್ಲಿ ಅಗತ್ಯಕ್ರಮ ವಹಿಸಲಾಗುವುದು ಎಂದು ಕೇಂದ್ರ ಪ್ರವಾಸೋಧ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.

    ಗುರುವಾರ ಸಂಜೆ ತ್ರಾಸಿ- ಮರವಂತೆ ಸಮುದ್ರ ತೀರ ವೀಕ್ಷಣೆ ಬಳಿಕ ಅವರು ಇಲ್ಲಿನ ಅಭಿವೃದ್ಧಿ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಬೈಂದೂರು ಕ್ಷೇತೃದ ಕೊಲ್ಲೂರು ಸಹಿತ ಮರವಂತೆ, ಸೋಮೇಶ್ವರ ಬೀಚ್ ಅಭಿವೃದ್ಧಿಯ ಕುರಿತು ತಿಂಗಳಿನ ಹಿಂದೆ ಸ್ಥಳೀಯ ಶಾಸಕರು ಹಾಗೂ ಮುಖಂಡರ ಜೊತೆಗೆ ಕೇಂದ್ರ ಪ್ರವಾಸೋಧ್ಯಮ ಸಚಿವರನ್ನು ಭೇಟಿ ಮಾಡಲಾಗಿತ್ತು. ‘ಸಾಸಿ’ ಎನ್ನುವ ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ದೇವಸ್ಥಾನ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬೇಡಿಕೆಯಿಟ್ಟು ಪ್ರಸ್ತಾವನೆ ಕಳಿಸಲಾಗಿತ್ತು. ಗುರುವಾರ ಕೇಂದ್ರ ಮಂತ್ರಿಗಳು ಈ ಮೂರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ನಿರೀಕ್ಷೆಯಿದೆ ಎಂದರು.

    ಇದಕ್ಕೂ ಮೊದಲು ಕೇಂದ್ರ ಸಚಿವರು ಮರವಂತೆಯಲ್ಲಿ ಕೆಲ ತಿಂಗಳ ಹಿಂದೆ ಆರಂಭಗೊಂಡ ಸ್ಕೈ ಡೈನಿಂಗ್ ಏರಿದರು.

    ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸ್ಥಳೀಯಾಡಳಿತ ಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಇದ್ದರು.

  • ಮಣಿಪಾಲ: ಕುಟುಂಬ ಕಲಹ; ಕಬ್ಬಿಣದ ರಾಡ್ ನಿಂದ ಹಲ್ಲೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಮಣಿಪಾಲ, ಮೇ 8, 2025: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕುಟುಂಬ ವಿವಾದದಿಂದ ಉಂಟಾದ ಘರ್ಷಣೆಯೊಂದರಲ್ಲಿ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ ನಡೆದಿದ್ದು, ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರ ಮೊಹಮ್ಮದ್ ಇರ್ಫಾನ್ (27, ಹೆಜಮಾಡಿ, ಕಾಪು) ತಮ್ಮ ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ರಫೀಕ್‌ನ ಅಕ್ಕನ ಮಗನಾದ ಇವರಿಗೆ ಆರೋಪಿಗಳೊಂದಿಗೆ ಕುಟುಂಬ ವಿಷಯದಲ್ಲಿ ಹಿಂದಿನಿಂದಲೂ ದ್ವೇಷವಿತ್ತು. ಮೇ 7, 2025ರ ಸಂಜೆ 4:45ರ ಸುಮಾರಿಗೆ, ಇರ್ಫಾನ್ ತಮ್ಮ ಪತ್ನಿ ರೆಹನಾ, ತಂಗಿ ಇಶ್ಮಿನ್ ಮತ್ತು ಮಾವನ ಮಗ ಮಾಝ್‌ನೊಂದಿಗೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಶೆಟ್ಟಿಬೆಟ್ಟಿನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳಾದ ರಫೀಕ್, ಸಲ್ಮಾ ಮತ್ತು ರಿಫಾಜ್‌ ಮನೆಗೆ ಬಂದು ಇರ್ಫಾನ್‌ರನ್ನು ಗದರಿಸಿದ್ದಾರೆ.

    ದೂರಿನ ಪ್ರಕಾರ, ರಫೀಕ್‌, “ನೀನು ನಮಗೆ ಭಾರಿ ಮಾತನಾಡುತ್ತೀಯಾ?” ಎಂದು ಕೂಗಿ, ಕಬ್ಬಿಣದ ರಾಡ್‌ನಿಂದ ಇರ್ಫಾನ್‌ರ ಎಡ ತೊಡೆ ಮತ್ತು ಎಡ ಕೈಗೆ ಗಾಯಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಲ್ಮಾ ಚಪ್ಪಲಿಯಿಂದ ಇರ್ಫಾನ್‌ಗೆ ಹೊಡೆದು ಅವಮಾನಿಸಿದ್ದಾರೆ, ಜೊತೆಗೆ ರಿಫಾಜ್‌ ಕೈಯಿಂದ ಹಲ್ಲೆ ನಡೆಸಿದ್ದಾರೆ. ಘರ್ಷಣೆಯ ಸಂದರ್ಭದಲ್ಲಿ ಇರ್ಫಾನ್‌ರ ಪತ್ನಿ, ತಂಗಿ ಮತ್ತು ಮಾಝ್‌ ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದಾಗ, ಆರೋಪಿಗಳು ಮಾಝ್‌ನ ಮೇಲೂ ಕೈಯಿಂದ ಹಲ್ಲೆ ಮಾಡಿದ್ದಾರೆ. ರಫೀಕ್‌, “ಇನ್ನು ಮುಂದೆ ನಮ್ಮ ವಿಷಯದ ಬಗ್ಗೆ ಮಾತನಾಡಿದರೆ ಈ ರಾಡ್‌ನಿಂದ ಕೊಂದುಹಾಕುತ್ತೇನೆ,” ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಘಟನೆಯ ಬಳಿಕ ಗಾಯಗೊಂಡ ಇರ್ಫಾನ್ ಮತ್ತು ಮಾಝ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2025ರಡಿಯಲ್ಲಿ ಕಲಂ 118(1), 115(2), 133, 352, 351(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಚೈತ್ರಾ ಕುಂದಾಪುರ ಮದುವೆ: ಬಿಗ್‌ಬಾಸ್ ತಾರೆಯ ಹಸೆಮಣೆ ಏರಲು ಸಜ್ಜು

    ಕುಂದಾಪುರ: ಬಿಗ್‌ಬಾಸ್ ಕನ್ನಡ 11ರ ವಿವಾದಾತ್ಮಕ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಮೇ 9, 2025ರಂದು ಮದುವೆಯಾಗಲು ಸಿದ್ಧರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮದರಂಗಿ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳಲ್ಲಿ ಚೈತ್ರಾ ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯ ಸಂಭ್ರಮದಲ್ಲಿ ತೊಡಗಿರುವ ಅವರ ವಿಡಿಯೋಗಳಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ, ವರನ ಗುರುತಿನ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ, ಇದು ಕುತೂಹಲವನ್ನು ಹೆಚ್ಚಿಸಿದೆ.

    ಚೈತ್ರಾ ಕುಂದಾಪುರ ಯಾರು?

    ಚೈತ್ರಾ ಕುಂದಾಪುರ ಉಡುಪಿಯ ಕುಂದಾಪುರದವರು. ಇವರು ಕನ್ನಡ ಮಾಧ್ಯಮದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಕನ್ನಡ 11ರಲ್ಲಿ ಭಾಗವಹಿಸಿ ತಮ್ಮ ಧೀರ ಮತ್ತು ಸ್ಪಷ್ಟವಾದ ಮಾತುಗಾರಿಕೆಯಿಂದ ಗಮನ ಸೆಳೆದರು. ಆದರೆ, ಅವರ ಪಯಣವು ವಿವಾದಗಳಿಂದ ಕೂಡಿತ್ತು. ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳ ಜೊತೆ ತೀವ್ರ ವಾಗ್ವಾದಗಳು, ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳು ಮತ್ತು ಹೊರಗಿನ ಮಾಹಿತಿಯನ್ನು ಒಳಗೆ ತಂದಿದ್ದಕ್ಕಾಗಿ ಆತಿಥೇಯ ಕಿಚ್ಚ ಸುದೀಪ್‌ರಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಫಿನಾಲೆಗೆ ಎರಡು ವಾರಗಳ ಮೊದಲು ಚೈತ್ರಾ ಶತಕೋಡಿ ಹೊರಬಿದ್ದರು.

    ಇದಕ್ಕೂ ಮೊದಲು, ಚೈತ್ರಾ 2023ರಲ್ಲಿ 5 ಕೋಟಿ ರೂಪಾಯಿಗಳ ವಂಚನೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಉದ್ಯಮಿಯೊಬ್ಬರಿಗೆ ಬಿಜೆಪಿ ಚುನಾವಣಾ ಟಿಕೆಟ್ ಒದಗಿಸುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪ ಎದುರಿಸಿದ್ದರು. ಈ ಪ್ರಕರಣದಲ್ಲಿ ಇವರ ಜೊತೆಗೆ ಇತರ ಏಳು ಜನರ ವಿರುದ್ಧವೂ ದೂರು ದಾಖಲಾಗಿತ್ತು.

    ಮದುವೆಯ ವಿವರ

    ಮದುವೆಯ ಸ್ಥಳ ಮತ್ತು ವರನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರಾ ಅವರ ಮದರಂಗಿ ಶಾಸ್ತ್ರದ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ವರನ ಗುರುತಿನ ಬಗ್ಗೆ ಊಹಾಪೋಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದುವೆಯ ಸಂಭ್ರಮವನ್ನು ಸದ್ದಿಲ್ಲದೆ ಆಚರಿಸಲು ಚೈತ್ರಾ ಯೋಜಿಸಿರುವಂತೆ ಕಾಣುತ್ತದೆ.

    ಚೈತ್ರಾ ಕುಂದಾಪುರ ಅವರ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ, ಆದರೆ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ವಿವಾದಗಳು ಇನ್ನೂ ಚರ್ಚೆಯ ಕೇಂದ್ರಬಿಂದುವಾಗಿವೆ.

  • ದೇಶದ ಸೈನಿಕರ ಶೌರ್ಯ, ಪರಾಕ್ರಮಕ್ಕೆ ಅಭಿನಂದನೆ – ಪರ್ಯಾಯ ಪುತ್ತಿಗೆ ಶ್ರೀ

    ಉಡುಪಿ: ಭಾರತದ ಸೈನಿಕರ ಶೌರ್ಯ ಪರಾಕ್ರಮ ಮತ್ತು ಸಾತ್ವಿಕ ನಿಷ್ಠೆಯನ್ನು ಮೆಚ್ಚುತ್ತೇವೆ. ಅವರ ಈ ಸಾಧನೆಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.

    ಸೈನಿಕರ ಒಂದು ಉದ್ದೇಶ, ಕಾರ್ಯ ಸಫಲವಾಗಿದ್ದು ಅದಕ್ಕಾಗಿ ಶ್ರೀಕೃಷ್ಣಮುಖ್ಯಪ್ರಾಣರಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ. ಎಲ್ಲವೂ ಶಾಂತಿಯುತವಾಗಿ ನಡೆಯಲಿ. ದೇಶ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

    ಹಲವು ದೇವಸ್ಥಾನಗಳಲ್ಲಿ ಪೂಜೆ

    ಉಗ್ರರ ಅಡಗುತಾಣದ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ಜಿಲ್ಲಾದ್ಯಂತ ಸಂಭ್ರಮಾಚರಣೆ ನಡೆದಿದೆ.

    ದೇವಸ್ಥಾನಗಳಲ್ಲಿ ವಿಶೇಷ ಪೂಜೆಯ ಜತೆಗೆ ಮನೆ ಮನೆಗಳಲ್ಲೂ ಪೂಜೆ, ಪ್ರಾರ್ಥನೆ, ಸಿಹಿ ವಿತರಣೆ, ಸಂಘ ಸಂಸ್ಥೆಗಳಿಂದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ಹೀಗೆ ಭಾರತೀಯ ಸೇನೆಯ ಸಾಹಸಕ್ಕೆ ಇಡೀ ಜಿಲ್ಲೆ ಸಂಭ್ರಮಿಸಿದೆ. ದೇಶ ಸುರಕ್ಷಿತವಾಗಿರಲಿ, ಯೋಧರಿಗೆ ಒಳಿತಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಕೃಷ್ಣಮಠದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಭಾರತೀಯ ಸೈನಿಕರ ಶೌರ್ಯ, ಪರಾಕ್ರಮ ಹಾಗೂ ತಾತ್ವಿಕ ನಿಷ್ಠೆಯನ್ನು ಮೆಚ್ಚಿಕೊಂಡಿದ್ದೇವೆ. ಭಾರತೀಯ ಸೇನೆಯ ಸಾಧನೆ ಅಭಿನಂದನಾರ್ಹ. ಸೈನಿಕರ ಉದ್ದೇಶ ಸಫಲವಾಗಿ ಎಲ್ಲವೂ ಶಾಂತಿಯುವಾಗಿ ನಡೆದು, ಎಲ್ಲರಿಗೂ ಶುಭವಾಗಲಿ ಮತ್ತು ದೇಶ ರಕ್ಷಣೆಯಾಗಲಿ ಎಂಬಂತೆ ಶ್ರೀ ಕೃಷ್ಣ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

    ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ದೇಶದ ಹೆಮ್ಮೆ ಹಾಗೂ ಗೌರವ ಹೆಚ್ಚಿಸಿ ರುವ ಭಾರತೀಯ ಸೇನೆಯ ಸೈನಿಕರ ಶ್ರೇಯಸ್ಸಿಗಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ತುಪ್ಪದ ದೀಪ ಬೆಳಗಿಸಲಾಯಿತು.