Category: Udupi

  • Udupi: ಪರಸ್ಪರ ಹಲ್ಲೆ; ವಶಕ್ಕೆ

    ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರ ಠಾಣೆಯ ಪೊಲೀಸ್‌ ಎಚ್‌ಸಿ ಸುರೇಶ್‌ ಕರ್ತವ್ಯದಲ್ಲಿದ್ದ ವೇಳೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಾಹನದ ಪಾರ್ಕಿಂಗ್‌ ಸ್ಥಳದಲ್ಲಿ ಆರೋಪಿಗಳಾದ ಹನುಮಪ್ಪ ಬೆಂಡ್ಯಪ್ಪ ಮಗಡಾರ್‌ (46), ನಾಗರಾಜ ಭೀಮಪ್ಪ ದೊಡ್ಡಮನಿ (27) ಮತ್ತು ನಾಗಪ್ಪ ಹನುಮಂತ ಸಿದ್ದಲಿಂಗಪ್ಪನವರ್‌ (30) ತಮ್ಮೊಳಗೆ ಜಗಳವಾಡುತ್ತ ಅವಾಚ್ಯ ಶಬ್ದಗಳಿಂದ ಬೈದು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ವೇಳೆ ಅವರಿಗೆ ಎಚ್ಚರಿಕೆ ನೀಡಿದರೂ ಸುಮ್ಮನಿರಲಿಲ್ಲ. ಪರಸ್ಪರ ಬೈದಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟುಮಾಡಿದ್ದರು ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Nejar Murders: ಗಗನಸಖಿಗೆ ಪ್ರವೀಣ್‌ ಚೌಗಲೆ ಪರಿಚಯ ಹೇಗಾಯ್ತು?; 16 ವರ್ಷ ಮಂಗಳೂರಿನಲ್ಲೇ ಇದ್ದ ಹಂತಕ!

    ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಆರೋಪಿ ಪ್ರವೀಣ್‌ ಚೌಗಲೆ ಕುರಿತ ಮತ್ತಷ್ಟು ಸ್ಫೋಟಕ ಸಂಗತಿಗಳು ಬಯಲಾಗಿದೆ. ಸಿಸಿಟಿವಿ ಕೊಟ್ಟ ಸುಳಿವಿನಿಂದ ಉಡುಪಿ ಪೊಲೀಸರು ಆರೋಪಿಯನ್ನ ಬಂಧಿಸಿ ಕೈಗೆ ಕೋಳ ತೊಡಿಸಿದ್ದಾರೆ. ಇದೀಗ ಖಾಕಿ ಪಡೆಯ ವಿಚಾರಣೆಯಲ್ಲಿ ಈತನ ಕೇರ್‌ ಆಫ್‌ ಅಡ್ರೆಸ್‌ ಮಂಗಳೂರಾಗಿತ್ತು ಅನ್ನೋ ಅಂಶ ಗೊತ್ತಾಗಿದೆ.

    ಉಡುಪಿಯ ಅಯ್ನಾಯ್‌ ಹಾಗೂ ಆರೋಪಿ ಪ್ರವೀಣ್ ಏರ್ ಇಂಡಿಯಾ ವಿಮಾನದಲ್ಲಿ ಸಹೋದ್ಯೋಗಿಗಳಾಗಿದ್ದರು. ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಯ್‌ಗೂ ಕ್ಯಾಬಿನ್ ಕ್ರ್ಯೂ ಆಗಿದ್ದ ಪ್ರವೀಣ್‌ಗೂ ಪರಿಚಯವಿತ್ತು. ಒಂದೇ ಸಂಸ್ಥೆಯಲ್ಲಿ ಅಯ್ನಾಝ್ ಹಾಗೂ ಪ್ರವೀಣ್‌ ಜೊತೆಯಾಗಿ ಕೆಲಸ ಮಾಡುತ್ತಿದ್ದು ಇದೀಗ ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ.

    ವಿಮಾನದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಝ್‌ಗೆ ವಿಮಾನದಲ್ಲಿ ಸುರಕ್ಷತಾ ನಿಯಮ ಹೇಳಿಕೊಡ್ತಿದ್ದವನೇ ಕಂಟಕವಾಗಿದ್ದಾನೆ. ಏರ್ ಇಂಡಿಯಾದ ಉದ್ಯೋಗಿಯಾಗಿದ್ದ ಆರೋಪಿ ಪ್ರವೀಣ್, ವಿಮಾನದಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಗೂ ಇನ್ನಿತರ ಸುರಕ್ಷತೆ ನಿಯಮ ಹೇಳಿಕೊಡುತ್ತಿದ್ದ. ಕೊನೆಗೆ ಅಯ್ನಾಝ್ ಮೇಲಿದ್ದ ಮೋಹ ದ್ವೇಷಕ್ಕೆ ತಿರುಗಿ ಪ್ರವೀಣ್ ಹತ್ಯೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ.

    ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು ಆರೋಪಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಕನ್ನಡದಲ್ಲೇ ಆರೋಪಿ ಪ್ರವೀಣ್ ಚೌಗುಲೆ ಉತ್ತರಿಸಿದ್ದಾರೆ. ಇದರ ವಿವರ ಇಲ್ಲಿದೆ ನೋಡಿ.

    ನ್ಯಾಯಾಧೀಶರು- ನಿಮ್ಮನ್ನು ಯಾವಾಗ ಅರೆಸ್ಟ್ ಮಾಡಿದ್ರು?
    ಆರೋಪಿ- ಮಂಗಳವಾರ ಸಂಜೆ 6 ಗಂಟೆಗೆ ಸರ್
    ನ್ಯಾಯಾಧೀಶರು- ನಿಮ್ಮ ಊರು ಯಾವುದು
    ಆರೋಪಿ- ಮಹಾರಾಷ್ಟ್ರ, ಸಾಂಗ್ಲಿಯಲ್ಲಿ
    ನ್ಯಾಯಾಧೀಶರು- ನೀವು ಕೊಟ್ಟ ಅಡ್ರೆಸ್‌ನಲ್ಲಿ ಮಂಗಳೂರು ಇದ್ಯಲ್ಲಾ?
    ಆರೋಪಿ- ಮಂಗಳೂರಲ್ಲಿ ಕಳೆದ 16 ವರ್ಷದಿಂದ ಇದ್ದೇನೆ. ಬಿಜೈ ಸಮೀಪ ಫ್ಲ್ಯಾಟ್‌ನಲ್ಲಿದ್ದೇನೆ

    ನ್ಯಾಯಾಧೀಶರ ಪ್ರಶ್ನೆಗೆ ಹೀಗೆ ಉತ್ತರಿಸಿರುವ ಆರೋಪಿ ಪ್ರವೀಣ್‌, ತಾನು ಮಹಾರಾಷ್ಟ್ರದ ಸಾಂಗ್ಲಿಯವನಾದ್ರೂ 16 ವರ್ಷದಿಂದ ಮಂಗಳೂರಲ್ಲೇ ನೆಲೆಸಿರುವುದಾಗಿ ಹೇಳಿದ್ದಾನೆ.