ಮಂಗಳೂರು: ಗುಂಪು ಹತ್ಯೆ ಪ್ರಕರಣ; ಗುರುತು ಪತ್ತೆ, ಮೃತ ದೇಹ ಹಸ್ತಾಂತರ

ಮಂಗಳೂರು, ಏ.30: ನಗರದ ಹೊರವಲಯ ಕುಡುಪು ಸಮೀಪ ಏ.27ರಂದು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ವ್ಯಕ್ತಿಯ ಗುರುತುಪತ್ತೆಯಾಗಿದ್ದು, ಕೇರಳದ ವಯನಾಡಿನಿಂದ ಆಗಮಿಸಿದ ಆತನ ಮನೆಮಂದಿ ಮೃತದೇಹವನ್ನು ಇಂದು ಬೆಳಗ್ಗಿನ ಜಾವ ಕೊಂಡೊಯ್ದಿದ್ದಾರೆ.  

ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಕುಂಞಾಯಿ ಎಂಬವರ ಪುತ್ರ ಅಶ್ರಫ್ ಕೊಲೆಯಾದ ವ್ಯಕ್ತಿ.

ಈ ಬಗ್ಗೆ ಮಾಹಿತಿ ಪಡೆದಿದ್ದ ಅಶ್ರಫ್ ಕುಟುಂಬಸ್ಥರು ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಅಶ್ರಫ್ ಅವರ ಸಹೋದರ ಸೇರಿದಂತೆ ಆಗಮಿಸಿದ್ದ ಮೂವರು ವೆನ್ಲಾಕ್ ಶವಾಗಾರದಲ್ಲಿರಿಸಿದ್ದ ಮೃತದೇಹ ಅಶ್ರಫ್ ಅವರದ್ದೆಂದು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಬಳಿಕ ಮೃತದೇಹವನ್ನು ಬಂದರ್ ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಮಯ್ಯಿತ್ ನಮಾಝ್ ನಿರ್ವಹಿಸಿದ ಬಳಿಕ ಮುಂಜಾನೆ 4:30ರ ಸುಮಾರಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ವಯನಾಡಿಗೆ ಕೊಂಡೊಯ್ಯಲಾಯಿತು.

ಈ ಸಂದರ್ಭ ಮಾಜಿ ಮೇಯರ್ ಕೆ.ಅಶ್ರಫ್, ಸುಹೈಲ್ ಕಂದಕ್, ಕೆ.ಕೆ.ಶಾಹುಲ್ ಹಮೀದ್, ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ಜಲೀಲ್ ಕೃಷ್ಣಾಪುರ, ರಿಯಾಝ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು. ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ತಂದೆ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದ ಅಶ್ರಫ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ನಂತರ ಮಾನಸಿಕ ಸಮಸ್ಯೆಗೆ ಒಳಗಾಗಿದ್ದರೆನ್ನಲಾಗಿದೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅಶ್ರಫ್ ಮನೆ ಬಿಟ್ಟು ಇದೇ ರೀತಿ ಆಗಾಗ್ಗೆ ಹೋಗುತ್ತಿದ್ದರು ಎಂದು ಮನೆ ಮಂದಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *