Tag: Accident

  • ಭಟ್ಕಳ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ವೃದ್ಧೆಗೆ ಗಂಭೀರ ಗಾಯ

    ಭಟ್ಕಳ, ಮೇ 28, 2025: ಕಾಯ್ಕಿಣಿ ಪಂಚಾಯತ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ಧೆಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.

    ಗಾಯಗೊಂಡವರು ಮುರ್ಡೇಶ್ವರದ ಕಾಯ್ಕಿಣಿಯ ಬಸ್ತಿ ಮಾಳುಗದ್ದೆಯ ನಿವಾಸಿ ರಾಜೀವಿ ಜನಾರ್ಧನ ನಾಯ್ಕ (75). ಇವರ ತಲೆಯ ಹಿಂಭಾಗ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಮುರ್ಡೇಶ್ವರದಿಂದ ಭಟ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಬಸ್ ವೃದ್ಧೆಗೆ ಡಿಕ್ಕಿ ಹೊಡೆದಿದೆ. ಬಸ್‌ನ ಚಾಲಕ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹನುಮಂತ ಕೆಂಚಪ್ಪ ಕಡಪಟ್ಟಿ (39) ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವೃದ್ಧೆಯ ಪುತ್ರ ರಜನೀಕಾಂತ, ಮುರ್ಡೇಶ್ವರದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಟೆಂಡರ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.

  • ಉಡುಪಿ: ಕಾರು ಅಫಘಾತ ಫೋಟೊಗ್ರಾಫರ್ ಸಾವು

    ಉಡುಪಿ, ಮೇ 28, 2025: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಮಗುಚಿ ಬಿದ್ದ ಘಟನೆಯಲ್ಲಿ ಫೋಟೋಗ್ರಾಫರ್ ಸೂರ್ಯ ನಾರಾಯಣ (48) ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.

    ಸೂರ್ಯ ನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೋಗ್ರಾಫಿಗಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

    ಸೂರ್ಯ ನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಸ್ವಂತ ಫೋಟೋಗ್ರಾಫಿ ಸ್ಟೂಡಿಯೋ ಆರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಅವರನ್ನು ‘ವರ್ ಸೂರ್ಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.

  • ಮಡಿಕೇರಿ: ಕಾರು ಲಾರಿ ಡಿಕ್ಕಿ; ಒಬ್ಬರಿಗೆ ಗಾಯ

    ಮಡಿಕೇರಿ, ಮೇ 24, 2025: ಇಂದು ಮುಂಜಾನೆ ಮಡಿಕೇರಿಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರಿಗೆ ತೀವ್ರ ಹಾನಿಯಾಗಿದ್ದು, ವಾಹನದ ಬಲಭಾಗ ಸಂಪೂರ್ಣ ಜಖಂಗೊಂಡಿದೆ. ಒಬ್ಬರಿಗೆ ಗಾಯವಾಗಿದೆ, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ಥಳೀಯರು ಸಹಾಯ ಮಾಡುತ್ತಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವೇನೆಂದು ತನಿಖೆ ಆರಂಭವಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಲಿದೆ.

  • ಕೊಲ್ಲೂರು: ಕಾರು-ಮಿನಿ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ, ಒಬ್ಬ ಸಾವು, ಇಬ್ಬರಿಗೆ ಗಾಯ

    ಕೊಲ್ಲೂರು, ಮೇ 21, 2025: ಕುಂದಾಪುರ ತಾಲೂಕಿನ ಇಡೂರು ಕುಂಜಾಡಿ ಗ್ರಾಮದ ಜನ್ನಲ್‌ ಎಂಬಲ್ಲಿ ದಿನಾಂಕ 19/05/2025 ರಂದು ಮಧ್ಯಾಹ್ನ 3:45 ಗಂಟೆಗೆ ಘೋರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ KA-20-N-2119ನೇ ಅಲ್ಟೋ ಕಾರನ್ನು ಚಲಾಯಿಸಿಕೊಂಡು ಬಂದ ಜೋಸ್‌ ಪಿಟಿ ಎಂಬುವವರು, ಜಡ್ಕಲ್‌ ಕಡೆಯಿಂದ ಚಿತ್ತೂರು ಕಡೆಗೆ KA-51-AE-7503ನೇ ಮಿನಿ ಗೂಡ್ಸ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಶಬರೀಶ (29), ಚಿತ್ತೂರು ಗ್ರಾಮ, ಕುಂದಾಪುರ ಇವರಿಗೆ ಎದುರುಗಡೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

    ಈ ಡಿಕ್ಕಿಯ ಪರಿಣಾಮ ಶಬರೀಶ ಅವರ ತಲೆಗೆ ರಕ್ತಗಾಯವಾಗಿದ್ದು, ಕಾರಿನ ಚಾಲಕ ಜೋಸ್‌ ಪಿಟಿ ಹಾಗೂ ಕಾರಿನಲ್ಲಿದ್ದ ಮಹಿಳೆಗೂ ರಕ್ತಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಶಬರೀಶ ಅವರಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಆದರೆ, ಕಾರಿನ ಚಾಲಕ ಜೋಸ್‌ ಪಿಟಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಈ ಘಟನೆಯ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2025ರಂತೆ ಕಲಂ 281, 125(b), 106 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಬ್ರಹ್ಮಾವರ: ಅಂಬುಲೆನ್ಸ್ ಹಿಟ್ ಆಂಡ್ ರನ್ ಘಟನೆ; ವೃದ್ಧರಿಗೆ ಗಾಯ

    ಬ್ರಹ್ಮಾವರ: ದಿನಾಂಕ 18 ಮೇ 2025 ರಂದು ಬೆಳಿಗ್ಗೆ 6:50 ಗಂಟೆ ಸುಮಾರಿಗೆ, ಬ್ರಹ್ಮಾವರದ ಚಿತ್ರಪಾಡಿ ಗ್ರಾಮದ ನಿವಾಸಿ ಕಿಶನ್ (35) ತಮ್ಮ ತಂದೆಗೆ ಸಂಬಂಧಿಸಿದ ಹಿಟ್ ಆಂಡ್ ರನ್ ಘಟನೆಯನ್ನು ವರದಿ ಮಾಡಿದ್ದಾರೆ. ಕಿಶನ್ ತಮ್ಮ ಮನೆಯ ಹೊರಗಡೆ ನಿಂತಿದ್ದಾಗ, ಅವರ ತಂದೆ ಹಾಲು ತರಲು ಡೈರಿಗೆ ಹೋಗಿದ್ದರು. ಚಿತ್ರಪಾಡಿ ಗ್ರಾಮದ ಬೆಲ್ಲದ ಗಣಪತಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಬಳಿ ನಿಂತಿದ್ದಾಗ, ಕುಂದಾಪುರದಿಂದ ಉಡುಪಿಗೆ ಹೋಗುತ್ತಿದ್ದ ಅಂಬುಲೆನ್ಸ್ ವಾಹನವು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯಾಗಿ ರಸ್ತೆಯ ಎಡಬದಿಗೆ ಬಂದು ಕಿಶನ್‌ರ ತಂದೆಗೆ ಡಿಕ್ಕಿ ಹೊಡೆದು, ನಿಲ್ಲಿಸದೇ ಪರಾರಿಯಾಗಿದೆ.

    ಕಿಶನ್ ಕೂಡಲೇ ಘಟನಾ ಸ್ಥಳಕ್ಕೆ ಓಡಿ ಬಂದು ನೋಡಿದಾಗ, ತಂದೆಗೆ ತಲೆಗೆ ತೀವ್ರ ರಕ್ತಗಾಯ ಹಾಗೂ ಕೈ-ಕಾಲುಗಳಿಗೆ ಗಾಯಗಳಾಗಿದ್ದವು. ಸ್ಥಳದಲ್ಲಿದ್ದ ಸ್ನೇಹಿತ ಕಿಶೋರ್‌ನಿಂದ ವಿಚಾರಿಸಿದಾಗ, ವಾಹನವು KA-25-D-2633 ನಂಬರ್‌ನ ಟವೇರಾ ಕಂಪನಿಯ ಅಂಬುಲೆನ್ಸ್ ಎಂದು ತಿಳಿದುಬಂದಿತು. ಗಾಯಗೊಂಡವರನ್ನು ತಕ್ಷಣ ಮತ್ತೊಂದು ಅಂಬುಲೆನ್ಸ್‌ನಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2025ರಡಿ, ಕಲಂ 281, 125(b) BNS ಮತ್ತು 134(a) & (b) IMV ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    • ಪ್ರಾತಿನಿಧ್ಯ ಚಿತ್ರ
  • ಉಡುಪಿ: ನಂದಿಕೂರು ದೇವಸ್ಥಾನದ ಕೆರೆಯಲ್ಲಿ ಮುಳುಗಿ 4 ವರ್ಷದ ಬಾಲಕ ಸಾವು


    ಕಾಪು, ಮೇ 12, 2025: ಮೇ 11, ಭಾನುವಾರ ನಡೆದ ಮದುವೆ ಸಮಾರಂಭದಲ್ಲಿ ನಂದಿಕೂರಿನ ದೇವಸ್ಥಾನದ ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ

    ಮೃತ ಬಾಲಕ ಕಾಪು ತಾಲೂಕಿನ ಕುರ್ಕಾಲುವಿನ ಸತ್ಯನಾರಾಯಣ ಮತ್ತು ಸೌಮ್ಯ ದಂಪತಿಯ ಪುತ್ರ ವಾಸುದೇವ (4). ಕುಟುಂಬವು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮದುವೆ ಸಮಾರಂಭಕ್ಕೆ ತೆರಳಿತ್ತು. ಸೌಮ್ಯ ತಮ್ಮ ಒಂದು ವರ್ಷದ ಕಿರಿಯ ಮಗುವಿಗೆ ಊಟ ಹಾಕುವಾಗ ವಾಸುದೇವ ಸಹ ಅವರ ಪಕ್ಕದಲ್ಲೇ ಇದ್ದ. ಆದರೆ, ಸೌಮ್ಯ ಕೈ ತೊಳೆಯಲು ಹೋಗಿ ವಾಪಸ್ ಬಂದಾಗ ವಾಸುದೇವ ಕಾಣೆಯಾಗಿದ್ದಾನೆ ಎಂದು ತಿಳಿದು ಕುಟುಂಬಸ್ಥರು ಆತಂಕದಿಂದ ಹುಡುಕಾಟ ಆರಂಭಿಸಿದರು. ನಂತರ ಬಾಲಕನ ದೇಹ ದೇವಸ್ಥಾನದ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿತು. ಕೂಡಲೇ ಮಗುವನ್ನು ಕೆರೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಾಲಕನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.

    ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶ್ರೀಲಂಕಾದಲ್ಲಿ ಪ್ರಯಾಣಿಕ ಬಸ್ ದುರಂತ: 21 ಜನ ಸಾವು, 35 ಜನ ಗಾಯ

    ಕೊಲಂಬೊ, ಶ್ರೀಲಂಕಾ (ಎಪಿ) – ಶ್ರೀಲಂಕಾದ ಚಹಾ ಬೆಳೆಯುವ ಬೆಟ್ಟ ಪ್ರದೇಶದಲ್ಲಿ ಭಾನುವಾರ ಪ್ರಯಾಣಿಕರ ಬಸ್ ಬಂಡೆಯಿಂದ ಜಾರಿ 21 ಜನರು ಸಾವನ್ನಪ್ಪಿ, 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

    ಶ್ರೀಲಂಕಾದ ಮಧ್ಯ ಭಾಗದ ಪರ್ವತ ಪ್ರದೇಶದಲ್ಲಿ ರಾಜಧಾನಿ ಕೊಲಂಬೊದಿಂದ ಸುಮಾರು 140 ಕಿಲೋಮೀಟರ್ (86 ಮೈಲುಗಳು) ದೂರದಲ್ಲಿರುವ ಕೋಟ್ಮಲೆ ಪಟ್ಟಣದ ಬಳಿ ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ವಕ್ತಾರ ಬುದ್ಧಿಕ ಮನತುಂಗ ಅವರು 21 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 35 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

    ಕಾರ್ಮಿಕರು ಮತ್ತು ಇತರರು ಗಾಯಗೊಂಡ ಜನರನ್ನು ಅವಶೇಷಗಳಿಂದ ತೆಗೆದುಹಾಕಲು ಸಹಾಯ ಮಾಡುತ್ತಿರುವಾಗ ಬಸ್ ಪ್ರಪಾತದ ಕೆಳಭಾಗದಲ್ಲಿ ಬಿದ್ದಿರುವುದನ್ನು ಸ್ಥಳೀಯ ದೂರದರ್ಶನವು ತೋರಿಸಿದೆ.

    ಅಪಘಾತದ ಸಮಯದಲ್ಲಿ, ಸುಮಾರು 50 ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

    ಚಾಲಕನ ಅಜಾಗರೂಕತೆ ಅಥವಾ ಬಸ್‌ನ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಮನತುಂಗ ಹೇಳಿದರು.

    ಈ ಬಸ್ ಅನ್ನು ಸರ್ಕಾರಿ ಬಸ್ ಕಂಪನಿಯು ನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಶ್ರೀಲಂಕಾದಲ್ಲಿ, ವಿಶೇಷವಾಗಿ ಪರ್ವತ ಪ್ರದೇಶಗಳಲ್ಲಿ ಮಾರಕ ಬಸ್ ಅಪಘಾತಗಳು ಸಾಮಾನ್ಯವಾಗಿದೆ, ಆಗಾಗ್ಗೆ ಅಜಾಗರೂಕ ಚಾಲನೆ ಮತ್ತು ಕಳಪೆ ನಿರ್ವಹಣೆ ಮತ್ತು ಕಿರಿದಾದ ರಸ್ತೆಗಳಿಂದಾಗಿ.

  • ಹುಬ್ಬಳ್ಳಿ: ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟ್ಟಿದ್ದ ಒಂದೇ ಕುಟುಂಬ 5 ಜನರ ದಾರುಣ ಸಾವು…!

    ಹುಬ್ಬಳ್ಳಿ: ನಿಶ್ಚಿತಾರ್ಥ ಹಾಗೂ ಮನೆ ಗೃಹ ಪ್ರವೇಶ ಮುಗಿಸಿಕೊಂಡು ಬಾಗಲಕೋಟೆಯ ಕುಳಗೇರ ಕ್ರಾಸ್‌ಗೆ ಹೊರಟ್ಟಿದ್ದ ಸಾಗರ ತಾಲ್ಲೂಕಿನ ಮೂರಕೈ ಗ್ರಾಮದ ಕುಟುಂಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯು ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ನಡೆದಿದೆ.‌

    ಹುಬ್ಬಳ್ಳಿ ಕಡೆಯಿಂದ ಬಾಗಲಕೋಟೆ ಕಡೆ ಹೊರಟ್ಟಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಮೂವರು ಮಹಿಳೆ ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸಾಗರ ತಾಲ್ಲೂಕಿನ ಮೂರಕೈ ಗ್ರಾಮದ ವಿಠಲ್ ಶೆಟ್ಟಿ(55) ಶಶಿಕಲಾ ಶೆಟ್ಟಿ( 44), ಸಂದೀಪ್ ಶೆಟ್ಟಿ ( 26) ಶ್ವೇತಾ ಶೆಟ್ಟಿ (29), ಅಂಜಲಿ ಶೆಟ್ಟಿ (26) ಎಂದು ಗುರುತಿಸಲಾಗಿದೆ.

    ಸಾಗರದ ಮೂರಕೈ ಗ್ರಾಮದ ವಿಠಲ್ ಶೆಟ್ಟಿ ಕುಳಗೇರಿ ಕ್ರಾಸ್‌ನಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಶ್ವೇತಾ ಅನ್ನೋ ಯುವತಿ ಎಂಗೇಜಮೆಂಟ್ ಸಾಗರದಲ್ಲಿ ಮಾಡಿಕೊಂಡಿದ್ದರು. ಎಂಗೇಜಮೆಂಟ್ ಮುಗಿಸಿಕೊಂಡು ಮರಳಿ ಕುಳಗೇರಿ ಇಂದು ಬೆಳಿಗ್ಗೆ ಸಾಗರದಿಂದ ಹೊರಟಿದ್ದರು. ಆದರೆ, ಹುಬ್ಬಳ್ಳಿಯ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ. ಇನ್ನು ಕಾರಿನಲ್ಲಿದ್ದ ಅಂಜಲಿ ಎಂಬ ಯುವತಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು ಎನ್ನಲಾಗಿದೆ.

    ಈ ಕುರಿತಂತೆ ಅವರ ಸಂಬಂಧಿ ಮಾತನಾಡಿ ಸತೀಶ್ ಶೆಟ್ಟಿ ಪ್ರತಿಕ್ರಿಯಿಸಿ, ಮೃತರು ಸಾಗರ ಬಳಿಯ ಸಾಗರ ಬಳಿಯ ಮೂರಕೈ ಗ್ರಾಮದವರು. ಕುಳಗೇರಿ ಕ್ರಾಸ್ ನಲ್ಲಿ ಹೊಟೆಲ್ ಹೊಂದಿದ್ದಾರೆ. ನಾನು ಅವರ ಸಂಬಂಧಿಯಾಗಿದ್ದು, ಈಗ ಹುಬ್ಬಳ್ಳಿಯಲ್ಲಿ ವಾಸವಿದ್ದೇನೆ. ಮಗಳ ನಿಶ್ಚಿತಾರ್ಥ ಹಾಗೂ ಮನೆ ಗೃಹ ಪ್ರವೇಶಕ್ಕೆ ಸಾಗರಕ್ಕೆ ತೆರಳಿದ್ದರು‌. ನಿಶ್ಚಿತಾರ್ಥ ಮುಗಿಸಿಕೊಂಡು ಮರಳಿ ಹೋಗುವಾಗ ಈ ಅವಘಡ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

    ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಮಾತನಾಡಿ, ಹುಬ್ಬಳ್ಳಿ ಮತ್ತು ಮನವಗುಂದ ಮಧ್ಯೆ ಕಾರು‌ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು ಸಾಗರದಿಂದ ಕುಳಗೇರಿ ಕ್ರಾಸ್ ಕಡೆಗೆ ಹೊರಟ್ಟಿದ್ದರು. ಘಟನೆಗೆ ಕಾರಣ ಏನು ಎಂಬ ಬಗ್ಗೆ ಈಗಲೇ ಹೇಳಲು ಬರುವದಿಲ್ಲ. ತನಿಖೆಯ ನಂತರ ಅಪಘಾತಕ್ಕೆ ಕಾರಣ ತಿಳಿಯಲಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಅಪಘಾತ: ಇನ್ನು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತ ಹೆಚ್ಚಳವಾಗುತ್ತಿದೆ. ಹೊರ ವಲಯ ಹಾಗೂ ಹೆದ್ದಾರಿ ಭಾಗದಲ್ಲಿ ಒಂದಿಲ್ಲೊಂದು ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಭಾಗದಲ್ಲಿ ಅಪಘಾತಗಳನ್ನು ತಪ್ಪಿಸಬೇಕು ಹಾಗೂ ಅಪಘಾತಗಳನ್ನು ತಡೆಯುವುದಕ್ಕೆ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹವು ಹೆಚ್ಚಾಗಿದೆ.

  • ಬೆಳಗಾವಿ ಅಪಘಾತ: SUV-Car ಡಿಕ್ಕಿ, ಮೂವರು ಸಾವು, ಮಾಜಿ ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ, ಮೇ 5: ಬೈಲಹೊಂಗಲ್ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಸೋಮವಾರ ನಡೆದ SUV ಮತ್ತು ಕಾರಿನ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ಒಂದು ವರ್ಷದ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆರೋಪಿಯಾದ ಕಾರು ಚಾಲಕನನ್ನು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರ ಎಂದು ಗುರುತಿಸಲಾಗಿದೆ.

    ಪೊಲೀಸರ ಪ್ರಕಾರ, ಕಾರು ಹಿರೇಬಾಗೇವಾಡಿಯತ್ತ ಸಾಗುತ್ತಿದ್ದರೆ, SUV ಬೈಲಹೊಂಗಲ್ ಕಡೆಗೆ ಚಲಿಸುತ್ತಿತ್ತು. ಚಿಕ್ಕಬಾಗೇವಾಡಿ ಬಳಿ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ತೀವ್ರತೆಯಿಂದ ಒಂದು ಕಾರು ರಸ್ತೆಯ ಪಕ್ಕದ ಕೃಷಿ ಭೂಮಿಗೆ ಜಾರಿ ಸಂಪೂರ್ಣ ಜಖಂಗೊಂಡಿದೆ. SUVಯ ಮುಂಭಾಗವೂ ಹಾನಿಗೊಳಗಾಗಿದೆ.

    SUV ಮುಂದಿರುವ ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸುವಾಗ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

    ಮೃತರನ್ನು ಹಿರೇಬಾಗೇವಾಡಿ ಗ್ರಾಮದ ನಿವಾಸಿಗಳಾದ ಅನೀಸ್ ಸಯ್ಯದ್ (23), ಅವರ ಪತ್ನಿ ಐಮಾನ್ (21) ಮತ್ತು ಮಗ ಐಮದ್ (1) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಐಷಾ ಅನ್ವರ್ ಸಯ್ಯದ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಆರೋಪಿಯಾದ ಕಾರು ಚಾಲಕನನ್ನು ಸವದತ್ತಿಯ ನಿವಾಸಿ ಸುರೇಶಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರರಾಗಿದ್ದಾರೆ.

    ಬೈಲಹೊಂಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅಪರಿಚಿತ ವಾಹನ ಡಿಕ್ಕಿ; ವ್ಯಕ್ತಿ ಸ್ಥಳದಲ್ಲಿಯೇ ಸಾವು

    ನಂಜನಗೂಡು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಸುವಿನಹಳ್ಳಿ ಗ್ರಾಮದ ಗಜೇಂದ್ರ ಕುಮಾರ್ (35) ಮೃತ ದುರ್ದೈವಿ. ರಾತ್ರಿಯ ಸಮಯದಲ್ಲಿ ಅಪರಿಚಿತ ವಾಹನ ಚಾಲಕ ಕೂಗಲೂರು ಗ್ರಾಮದ ಸಿದ್ದಯ್ಯನಹುಂಡಿ ಗ್ರಾಮದ ಗೇಟ್ ಕಡೆಯಿಂದ ಕಸುವಿನಹಳ್ಳಿ ಗ್ರಾಮದ ಕಡೆಗೆ ಅತಿ ವೇಗವಾಗಿ ಬಂದು ಬೈಕ್ ನಲ್ಲಿ ಹೋಗುತ್ತಿದ್ದ ಗಜೇಂದ್ರ ಕುಮಾರ್ ಗೆ ಡಿಕ್ಕಿ ಹೊಡೆದಿದ್ದಾನೆ.

    ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.