Tag: Crash

  • ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ- ಪೈಲೆಟ್, ಮಗು ಸೇರಿ 7 ಮಂದಿ ಮೃತ್ಯು

    ಕೇದಾರನಾಥ, ಜೂ. 15: ಕೇದಾರನಾಥಕ್ಕೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಗೌರಿಕುಂಡ್ ಪ್ರದೇಶದ ಬಳಿ ಪತನಗೊಂಡಿದ್ದು, ಪೈಲೆಟ್, ಮಗು ಸೇರಿ ಹೆಲಿಕಾಪ್ಟರ್‌ನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ.

    ಹವಾಮಾನ ವೈಪರೀತ್ಯದಿಂದಾಗಿ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಘಟನೆಯ ಬೆನ್ನಲ್ಲೇ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಕೆಟ್ಟ ಹವಾಮಾನದಿಂದಾಗಿ, ರಕ್ಷಣಾ ಕಾರ್ಯವು ತೊಂದರೆಗಳನ್ನು ಎದುರಿಸುತ್ತಿದೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ.

    ಹೆಲಿಕಾಪ್ಟರ್‌ನಲ್ಲಿ ಪೈಲಟ್ ಸೇರಿದಂತೆ 7 ಜನರಿದ್ದರು ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಆರ್ಯನ್ ಏವಿಯೇಷನ್‌ನದು ಎಂದು ಹೇಳಲಾಗುತ್ತಿದೆ. ಈ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಡೆಹ್ರಾಡೂನ್‌ನಿಂದ ಕೇದಾರನಾಥಕ್ಕೆ ಹೋಗುತ್ತಿದ್ದಾಗ ತ್ರಿಜುಗಿನಾರಾಯಣ ಮತ್ತು ಗೌರಿಕುಂಡ್ ನಡುವೆ ಸಂಪರ್ಕ ಕಡಿತಗೊಂಡಿದೆ.

    ಮೃತಪಟ್ಟವರಲ್ಲಿ 23 ತಿಂಗಳ ಮಗು ಕೂಡ ಇತ್ತು ಎಂದು ತಿಳಿದುಬಂದಿದೆ. ಬೆಳಿಗ್ಗೆ 5.30 ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಟ್ಟ ಹವಾಮಾನವೇ ಹೆಲಿಕಾಪ್ಟರ್ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

    ಹೆಲಿಕಾಪ್ಟರ್ ಪತನವಾಗಿರುವುದನ್ನು ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ದೃಢಪಡಿಸಿದ್ದಾರೆ. ಗೌರಿಕುಂಡ್ ಮೇಲೆ ಹುಲ್ಲು ಕಡಿಯುತ್ತಿದ್ದ ನೇಪಾಳಿ ಮೂಲದ ಮಹಿಳೆಯರು ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಮೃತರೆಲ್ಲರೂ ಮಹಾರಾಷ್ಟ್ರದ ಜೈಸ್ವಾಲ್ ಕುಟುಂಬಕ್ಕೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಅಹಮದಾಬಾದ್​: 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನ

    ಅಹಮದಾಬಾದ್, ಜೂನ್ 12: ಟೇಕ್ ಆಫ್ ಆದ ಕೂಡಲೆ ಏರ್ ಇಂಡಿಯಾ ವಿಮಾನ ಪತನವಾಗಿರುವ ದುರಂತ ಘಟನೆ ಗುಜರಾತಿನ ಅಹಮದಾಬಾದ್​​ನಲ್ಲಿ ನಡೆದಿದೆ. ಈ ವಿಮಾನ ನಿಲ್ದಾಣದ ಆವರಣದಿಂದ ದಟ್ಟ ಹೊಗೆ ಹೊರಬರುತ್ತಿರುವುದನ್ನು ನೋಡಬಹುದು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಹಲವಾರು ಸಾವುನೋವುಗಳ ಭೀತಿ ಎದುರಾಗಿದೆ. ಆದರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದರ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

    ಇಂದು ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನ ಮೇಘನಿ ನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿದೆ. ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ದಟ್ಟ ಹೊಗೆಯ ಮೋಡ ಆವರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಈ ವಿಮಾನ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿತ್ತು. ವಿಮಾನದೊಳಗಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ರಕ್ಷಣಾ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳು ನಡೆಯುತ್ತಿವೆ.

    Statement from DGCA (Directorate General of Civil Aviation) regarding the flight AI171.

    ಈ ವಿಮಾನವು ಅಹಮದಾಬಾದ್​ ವಿಮಾನ ನಿಲ್ದಾಣದ ಹತ್ತಿರದ ವಸತಿ ಪ್ರದೇಶದಲ್ಲಿ ಪತನಗೊಂಡಿತು. ಈ ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅದು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವಾಗಿತ್ತು. ರಕ್ಷಣಾ ತಂಡಗಳು ಸ್ಥಳದಲ್ಲಿ ಸ್ಥಳಾಂತರಿಸುವಿಕೆ ಮತ್ತು ಅಗ್ನಿಶಾಮಕ ಕಾರ್ಯಾಚರಣೆಗಳನ್ನು ಸಕ್ರಿಯವಾಗಿ ನಡೆಸುತ್ತಿವೆ. ಸಾವು-ನೋವುಗಳು ಅಥವಾ ಅಪಘಾತದ ಕಾರಣದ ಬಗ್ಗೆ ಇನ್ನೂ ಯಾವುದೇ ಅಧಿಕೃತ ವರದಿಗಳು ಬಿಡುಗಡೆಯಾಗಿಲ್ಲ.

  • ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ: ಕಹಿನೆನಪು

    ಮಂಗಳೂರು, ಮೇ 22, 2025: ಕೆಂಜಾರಿನಲ್ಲಿ 2010 ರ ಮೇ 22ರಂದು ಸಂಭವಿಸಿದ ವಿಮಾನ ದುರಂತಕ್ಕೆ ಗುರುವಾರ 15 ವರ್ಷ ತುಂಬಿದೆ. ದುರಂತದಲ್ಲಿ ಮೃತಪಟ್ಟವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಗುರುವಾರ ಕೂಳೂರಿನಲ್ಲಿ ತಣ್ಣೀರುಬಾವಿ ರಸ್ತೆ ಪಕ್ಕದಲ್ಲಿರುವ ಈ ದುರಂತದ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪ್ರಭಾರ‌ ಜಿಲ್ಲಾಧಿಕಾರಿ ಡಾ.ಕೆ.ಆನಂದ್ , ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ , ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಭಾಗವಹಿಸಿದ್ದರು.