Tag: murder

  • ಬಂಟ್ವಾಳ: ಅಬ್ದುಲ್ ರಹೀಮ್ ಹತ್ಯೆ: ಕುಟುಂಬಕ್ಕೆ ಭೇಟಿ ನೀಡಿದ ಎಸ್‌ಡಿಪಿಐ; ಸರ್ಕಾರಕ್ಕೆ ಮೂರು ಬೇಡಿಕೆ

    ಮಂಗಳೂರು, ಮೇ 30, 2025: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳತ್ತಮಜಲುವಿನಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಅಬ್ದುಲ್ ರಹೀಮ್ ಅವರ ಕುಟುಂಬಕ್ಕೆ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ರಾಜ್ಯ ಸರ್ಕಾರದಿಂದ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

    ಅಬ್ದುಲ್ ಮಜೀದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡು, ಈ ಹತ್ಯೆ ಪ್ರಕರಣದ ತನಿಖೆಗಾಗಿ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ, ಬಜಪೆ ಕಾರ್ಯಕ್ರಮದಲ್ಲಿ ಈ ಘಟನೆಗೆ ಪ್ರಚೋದನೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಬ್ದುಲ್ ರಹೀಮ್ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದಿದ್ದಾರೆ.

    ಇದೇ ಸಂದರ್ಭದಲ್ಲಿ, ಹಂತಕರ ತಂಡದಿಂದ ತಲ್ವಾರ್ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿಯನ್ನು ಭೇಟಿ ಮಾಡಿದ ಅಬ್ದುಲ್ ಮಜೀದ್ ಮತ್ತು SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜೆತೂರ್, ಅವರು, ಆತನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

  • ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆ, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ.. ನಾಳೆ ಬಂದ್ ಗೆ ಕರೆ ಸಾಧ್ಯತೆ?

    ಬಂಟ್ವಾಳ :ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆನಡೆದಿದ್ದು, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ನಾಳೆ ಮುಸ್ಲಿಂ ಸಂಘಟನೆ ಗಳು ಬಂದ್ ಗೆ ಕರೆ ನೀಡುವ ಸಾಧ್ಯತೆಇದೆ ಎನ್ನಲಾಗುತಿದೆ

    ಘಟನೆ ನಡೆದ ತಕ್ಷಣ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿಯ ಆರೋಗ್ಯ ವಿಚಾರಿಸಲು ಬಂದ ಮುಸ್ಲಿಂ ಮುಖಂಡರನ್ನು ಯುವಕರು ಅಡ್ಡ ಗಟ್ಟಿ ತರಾಟೆಗೆ ತೆಗೆದ ಪ್ರಸಂಗ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದು ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ ಮೊನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಜಿಲ್ಲಾ ಆಡಳಿತ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು ಸಮುದಾಯಕ್ಕೆ ನಿಮ್ಮ ನಾಯಕತ್ವದ ಅವಶ್ಯಕತೆ ಇಲ್ಲ ಎಂದು ಈ ಸಂದರ್ಭದಲ್ಲಿ ಗುಡುಗಿದರು.

  • ಮಂಗಳೂರಿನ ಕೊಳತ್ತಮಜಲುವಿನಲ್ಲಿ ಯುವಕನ ಕೊಲೆ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಖಂಡನೆ

    ಮಂಗಳೂರು, 27 ಮೇ 2025: ಬಂಟ್ವಾಳದ ಕೊಳತ್ತಮಜಲು ಸಮೀಪದಲ್ಲಿ ಯುವಕ ಅಬ್ದುಲ್ ರಹಿಮಾನ್‌ನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆಯ ಹಿನ್ನೆಲೆಯಲ್ಲಿ ಸಚಿವರು DG & IGP ಮತ್ತು ಕಾನೂನು ಸುವ್ಯವಸ್ಥೆ ADGP ಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

    ಜೊತೆಗೆ, ಮಂಗಳೂರು ಜಿಲ್ಲಾಧಿಕಾರಿ ಮತ್ತು ಎಸ್‌ಪಿಯವರೊಂದಿಗೆ ಚರ್ಚಿಸಿದ ಸಚಿವರು, ಮಂಗಳೂರಿನಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮಗಳನ್ನು ಜಾರಿಗೊಳಿಸುವಂತೆ ಆದೇಶಿಸಿದ್ದಾರೆ.

  • ಬಂಟ್ವಾಳ: ಇಬ್ಬರು ಯುವಕರ ಮೇಲೆ ತಲ್ವಾರ್ ದಾಳಿ: ಓರ್ವ ಮೃತ್ಯು

    ಬಂಟ್ವಾಳ 27 ಮೇ 2025: ಇರಕೊಡಿಯೆಲ್ಲಿಯ ಕೋಲ್ತಮಜಲು ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ರಹೀಮ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

    ಮರಳು ಅನ್ಲೋಡ್ ಮಾಡುತ್ತಿರುವಾಗ ಈ ದಾಳಿ ನಡೆದಿದೆ. ರಹೀಮ್ ಜೊತೆಗಿದ್ದ ಯುವಕ ಇಮ್ತಿಯಾಜ್ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.

    ರಹೀಮ್ ಪಿಕಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೋಲ್ತಮಜಲು ಮಸೀದಿಯ ಕಾರ್ಯದರ್ಶಿ ಎಂದು ಹೇಳಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • ಮಂಗಳೂರು: ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು, ವಕ್ತಾರರ ವಿರುದ್ಧ ಪ್ರಕರಣ ದಾಖಲು

    ಮಂಗಳೂರು, ಮೇ 26, 2025: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ಸದಸ್ಯರು ನಡೆಸಿದ ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು ಮತ್ತು ವಕ್ತಾರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಬಜಪೆಯ ಶಾರದಾ ಮಂಟಪದ ಬಳಿ ನಡೆದ ಈ ಪ್ರತಿಭಟನೆಗೆ ಪೊಲೀಸರ ಅನುಮತಿ ಇರಲಿಲ್ಲ. ಸುಮಾರು 3,000 ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಬಜಪೆ ಬಸ್ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಕಾನೂನುಬಾಹಿರವಾಗಿ ಜಮಾಯಿಸಿ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ತಡೆದರು ಹಾಗೂ ರಾಜ್ಯ ಹೆದ್ದಾರಿ ಸಂಖ್ಯೆ 67 ರ ಭಾಗವನ್ನು ಆಕ್ರಮಿಸಿದರು. ಇದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು.

    ಪ್ರತಿಭಟನೆಯ ವೇಳೆ, ಒಬ್ಬ ವಕ್ತಾರರು ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಸಾಮುದಾಯಿಕ ಉದ್ವಿಗ್ನತೆಯನ್ನು ಉಂಟುಮಾಡಬಹುದಾದ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಆಧಾರದ ಮೇಲೆ, ಬಜಪೆ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 90/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 189(2), 191(2), 285, 192, 351(2), 351(3), ಮತ್ತು 190, ಜೊತೆಗೆ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಸೆಕ್ಷನ್ 107 ಮತ್ತು 109 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

  • ಕುಶಾಲನಗರ ಸಂಪತ್ ಕೊಲೆ ಕೇಸ್‌ – ಸ್ನೇಹಿತನಿಗೆ ಚಟ್ಟ ಕಟ್ಟಿದ್ದ ಮೂವರು ಅರೆಸ್ಟ್‌

    ಮಡಿಕೇರಿ: ಇದೇ ಮೇ 10ರಂದು ನಾಪತ್ತೆಯಾಗಿದ್ದ ಕೊಡಗಿನ (Kodagu) ಸೋಮವಾರಪೇಟೆಯ ನಿವಾಸಿ ಸಂಪತ್‌ ನಾಯರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

    ಸೋಮವಾರಪೇಟೆ ತಾಲ್ಲೂಕಿನ ಹಾನಗಲ್‌ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ಕೊಲೆಯಾದ ಸಂಪತ್‌ ಸ್ನೇಹಿತರೇ ಎಂಬುದು ಗಮನಾರ್ಹ. 

    ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಆರೋಪಿ ಸಂಗೀತಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಮೇ 9ರಂದು ಸಂಪತ್‌ ನಾಯರ್‌ನನ್ನ ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು. ಸಾಲದ ಹಣ ವಾಪಸ್‌ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಳು. ಸಂಪತ್‌ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್‌ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನ ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು (ಇಂದು) ಆರೋಪಿ ಸಂಗೀತಾಳನ್ನ ಸೋಮವಾರ ಪೇಟೆಯಲ್ಲಿ ಬಂಧಿಸಲಾಯಿತು.

  • ಮಂಗಳೂರು: ಮೀನು ವ್ಯಾಪಾರಿ ಕೊಲೆ ಯತ್ನ; ಲೋಕೇಶ್​​ ಕೋಡಿಕೆರೆ ಬಂಧನ..!

    ಮಂಗಳೂರು: ರೌಡಿಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದ ದಿನ ರಾತ್ರಿ ರೌಡಿಶೀಟರ್ ಕೋಡಿಕೆರೆ ಲೋಕೇಶ್ ಹಾಗೂ ಗ್ಯಾಂಗ್ ಪ್ರತೀಕಾರಕ್ಕೆ ಯತ್ನಿಸಿತ್ತು. ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿತ್ತು. ಇನ್ನೋವಾ ಕಾರಿನಲ್ಲಿ ಬಂದು ದಾಳಿ ಮಾಡಿತ್ತು. ಇದೀಗ ಕಾವೂರು ಪೊಲೀಸರು ಲೋಕೇಶ್ನನ್ನು ಬಂಧಿಸಿದ್ದಾರೆ.

    ಉಳ್ಳಾಲ ನಿವಾಸಿ ಲುಕ್ಮಾನ್ ಹಲ್ಲೆಗೊಳಗಾಗಿದ್ದ ಮೀನು ವ್ಯಾಪಾರಿ. ಮೀನುಗಾರ ಮಹಿಳೆ ಬೊಬ್ಬೆ ಹಾಕಿದ ಹಿನ್ನೆಲೆಯಿಂದಾಗಿ ಮೀನು ವ್ಯಾಪಾರಿ ಬಚಾವ್ ಆಗಿದ್ದ. ಇನ್ನೋವಾ ಕಾರಿನಲ್ಲಿ ಬಂದು ಲೋಕೇಶ್ ಗ್ಯಾಂಗ್ ಆತನ ಮೇಲೆ ಅಟ್ಯಾಕ್ ಮಾಡಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

    ಸುಹಾಸ್ ಶೆಟ್ಟಿ ಕೊಲೆ ನಂತರ ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆಯಾಗಿ 7 ಮಂದಿಯನ್ನು ಬಂಧಿಸಲಾಗಿತ್ತು.

  • ಭಟ್ಕಳ: ನಿದ್ರೆ ಮಾತ್ರೆ ಕೊಟ್ಟು ಗಂಡನಿಗೆ ಚಟ್ಟ ಕಟ್ಟಿದ ಹೆಂಡ್ತಿಗೆ ಜೀವಾವಧಿ ಶಿಕ್ಷೆ

    ಭಟ್ಕಳ: ಗಂಡ 2ನೇ ಮದುವೆಯಾದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

    ಭಟ್ಕಳದ ರೇಷ್ಮಾ ಖಾನಮ್ ಶಿಕ್ಷೆಗೊಳಗಾದ ಅಪರಾಧಿ ಭಟ್ಕಳ ಮೌಲಾನಾ ಆಜಾದ್ ರಸ್ತೆಯ ಅಬ್ದುಲ್ ನಾಸಿರ್ ಕೊಲೆಯಾದ ಪತಿ. 2017ರ ಫೆ.17 ರಂದು ಘಟನೆ ನಡೆದಿತ್ತು. ಪತಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿದ ಪತ್ನಿ ನಂತರ ವೇಲ್‌ನಿಂದ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಮಲಗಿದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದಳು.

    ಕೊಲೆ ಮಾಡಲು ಬಳಸಿ ವೇಲನ್ನು ವಾಷಿಂಗ್ ಮಷಿನ್‌ಗೆ ಹಾಕಿ ತೊಳೆದು, ಸಾಕ್ಷ್ಯವನ್ನು ನಾಶಪಡಿಸಿದ್ದಳು. ಆದರೆ, ಆಕೆಯ ವರ್ತನೆಯಿಂದ ಅನುಮಾನಗೊಂಡಿದ್ದ ಮೃತರ ಸಹೋದರನ ಪುತ್ರ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ರೇಷ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಕಲೆ ಹಾಕಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಶ ಡಿ.ಎಸ್ ವಿಜಯಕುಮಾರ್ ಅವರು, ಅಪರಾಧ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ 6 ಸಾವಿರ ರೂ. ದಂಡ ತುಂಬುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

  • ಸುಹಾಸ್ ಶೆಟ್ಟಿ ಕೇಸ್‌ಗೆ ರೋಚಕ ಟ್ವಿಸ್ಟ್.. ಭಾಗಿಯಾದ 8 ಮಂದಿ ಯಾರು? ಸ್ಫೋಟಕ ಮಾಹಿತಿ ಬಯಲು

    ಮಂಗಳೂರು: ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್‌ನಲ್ಲಿ ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಮಂಗಳೂರು ಪೊಲೀಸರು ಸುಹಾಸ್ ಶೆಟ್ಟಿ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದು, ಆರೋಪಿಗಳ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 6 ಜನ ಸೇರಿ ಸುಹಾಸ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಆರೋಪಿ ಸಫ್ವಾನ್.

    2023ರಲ್ಲಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿರುತ್ತೆ. ಪ್ರಶಾಂತ್, ಧನರಾಜ್, ಸುಹಾಸ್ ಶೆಟ್ಟಿ ಸ್ನೇಹಿತರಿಂದ ಸಫ್ವಾನ್‌ಗೆ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್‌ ಅನ್ನು ಕೊಲೆ ಮಾಡಲು ತೀರ್ಮಾನ
    ಮಾಡಿದ್ದಾರೆ.

    ಆರೋಪಿ ಸಫ್ವಾನ್, ಫಾಝಿಲ್‌ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡಿದ್ದಾರೆ. ಸುಹಾಸ್ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಆದಿಲ್ ಸಫ್ವಾನ್ ತಂಡಕ್ಕೆ ನೀಡಿದ್ದಾರೆ. ನಿಯಾಜ್‌ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್‌ ಅನ್ನು ಸಂಪರ್ಕ ಮಾಡಿದ್ದಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಕಳೆದ ಮೇ 1ರಂದು ಚಲನವಲನಗಳನ್ನು ಗಮನಿಸಿ ಸುಹಾಸ್ ಶೆಟ್ಟಿಯನ್ನ ಕೊಲೆ ಮಾಡಿದ್ದಾರೆ.

    8 ಮಂದಿ ಆರೋಪಿಗಳು ಯಾರು?

    ಸುಹಾಸ್ ಶೆಟ್ಟಿ ಕೇಸ್‌ನಲ್ಲಿ ಮೊದಲ ಆರೋಪಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮಹಮದ್ ರಿಜ್ವಾನ್ ಹಾಗೂ ಆದಿಲ್.

    1. ಅಬ್ದುಲ್ ಸಫ್ವಾನ್– 29 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು ಕೆಲಸ : ಡ್ರೈವರ್
    2. ನಿಯಾಜ್ – 25 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
    3. ಮೊಹಮ್ಮದ್ ಮುಸ್ಸಾಮಿರ್ – 32 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
    4. ಕಲಂದರ್ ಶಾಫಿ – 29 ವರ್ಷ ತಂದೆ : ಮಹಮ್ಮದ್ ವಾಸ : ಕುರ್ಸು ಗುಡ್ಡೆ,  ಬಾಳ ಗ್ರಾಮ, ಮಂಗಳೂರು ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
    5. ಆದಿಲ್ ಮೆಹರೂಪ್ – 27 ವರ್ಷ ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
    6. ನಾಗರಾಜ್ – 20 ವರ್ಷ ವಾಸ:  ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
    7. ಮೊಹಮದ್ ರಿಜ್ವಾನ್ – 28 ವರ್ಷ ವಾಸ:  ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
    8. ರಂಜಿತ್  ವಾಸ:  ರುದ್ರ ಪಾದ, ಕಳಸ, ಚಿಕ್ಕಮಂಗಳೂರು ಕೆಲಸ: ಡ್ರೈವಿಂಗ್
  • ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ – ಶೀಘ್ರ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಆರ್ ಹಿತೇಂದ್ರ ಭರವಸೆ

    ಮಂಗಳೂರು, ಮೇ 2: ಮೇ 1 ರಂದು ಬಜ್ಪೆಯಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಅವರ ಭೀಕರ ಹತ್ಯೆಯ ನಂತರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಅವರು ತನಿಖೆ ಮತ್ತು ಕಾನೂನು ಜಾರಿ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಮಂಗಳೂರಿಗೆ ಆಗಮಿಸಿದರು.

    ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಎಡಿಜಿಪಿ ಹಿತೇಂದ್ರ, “ಆರೋಪಿಗಳ ಬಗ್ಗೆ ನಮಗೆ ಸುಳಿವು ಸಿಕ್ಕಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಹೇಳಿದರು. ಘಟನೆಗೆ ಪ್ರತಿಕ್ರಿಯೆಯಾಗಿ ಅಳವಡಿಸಲಾದ ಭದ್ರತಾ ಕ್ರಮಗಳನ್ನು ಅವರು ಮತ್ತಷ್ಟು ವಿವರಿಸಿದರು: “ಬಂದೋಬಸ್ತ್‌ಗೆ ಸಂಬಂಧಿಸಿದಂತೆ, 22 ಕೆಎಸ್‌ಆರ್‌ಪಿ ತುಕಡಿಗಳು, 1,000 ಪೊಲೀಸ್ ಅಧಿಕಾರಿಗಳು ಮತ್ತು ಐದು ಎಸ್‌ಪಿ ಶ್ರೇಣಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.”

    ಸಾರ್ವಜನಿಕರು ವದಂತಿಗಳನ್ನು ನಂಬಬೇಡಿ ಎಂದು ಹಿತೇಂದ್ರ ಒತ್ತಾಯಿಸಿದರು ಮತ್ತು ಪೊಲೀಸರು ಅಗತ್ಯ ಮಾಹಿತಿಯನ್ನು ಒದಗಿಸುತ್ತಾರೆ ಎಂದು ಭರವಸೆ ನೀಡಿದರು.

    ಮೂರು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿ ಶೀಟರ್ ಶೆಟ್ಟಿ, ಸಹಚರರೊಂದಿಗೆ ಪ್ರಯಾಣಿಸುತ್ತಿದ್ದಾಗ ಕಿನ್ನಿಪದವು ಕ್ರಾಸ್ ಬಳಿ 5–6 ಜನರ ಗುಂಪೊಂದು ಹಲ್ಲೆ ನಡೆಸಿತ್ತು. ಸರಕು ಸಾಗಣೆ ವಾಹನ ಮತ್ತು ಕಾರನ್ನು ಬಳಸಿ ಶೆಟ್ಟಿ ಅವರ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ನಂತರ ಅವರ ಮೇಲೆ ಮಾರಕಾಸ್ತ್ರಗಳು ಮತ್ತು ಇತರ ಆಯುಧಗಳಿಂದ ಹಲ್ಲೆ ನಡೆಸಿ ಗಂಭೀರ ಗಾಯಗಳನ್ನುಂಟುಮಾಡಿದರು. ಸುಹಾಸ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೆ ಸಾವಾನಪ್ಪಿದಾನೆ.