Tag: Udupi

  • ಕುಂದಾಪುರ : ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ವತಿಯಿಂದ ವಿದ್ಯಾರ್ಥಿ ವೇತನ ಮಾಹಿತಿ ಕಾರ್ಯಾಗಾರ

    ಕುಂದಾಪುರ: ನಮ್ಮ ನಾಡ ಒಕ್ಕೂಟ ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಪ್ರೌಢಶಾಲಾ, ಕಾಲೇಜು ಹಾಗು ಉನ್ನತ ವ್ಯಾಸಂಗ ಮಾಡುತ್ತಿರುವ ಆಯ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಮಾದಕ ದ್ರವ್ಯ ಸೇವೆನೆಯಿಂದ ಆಗುವ ಅನಾಹುತದ ಬಗ್ಗೆ ಮತ್ತು ಮಾನಸಿಕ ಒತ್ತಡದ ಮಾಹಿತಿ ಕಾರ್ಯಾಗಾರ ಮಂಗಳವಾರ ಎನ್.ಎನ್.ಓ ಕಮ್ಯುನಿಟಿ ಸೆಂಟರ್ ಮಿನಿ ಸಭಾಭವನ ಕುಂದಾಪುರ ನಡೆಯಿತು.

    ಇತ್ತೀಚಿಗಷ್ಟೇ ಕರಾಟೆ ಸ್ಪರ್ಧೆಯಲ್ಲಿ 9 ವರ್ಷದೊಳಗಿನ +35 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಹಾಗು ಕಂಚಿನ ಪದಕ ಪಡೆದ ಅಮೈರಾ ಅವರಿಗೆ ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ವತಿಯಿಂದ ಗುರುತಿಸಿ, ಗೌರವಿಸಿ ಸನ್ಮಾನಿಸಲಾಯಿತು.

    ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

    ಮಾತಾ ಆಸ್ಪತ್ರೆಯ ಆಡಳಿತಮಂಡಳಿ ನಿರ್ದೇಶಕರಾದ ಡಾ ಪ್ರಕಾಶ್ ತೋಳಾರ್, ನಮ್ಮ ನಾಡ ಒಕ್ಕೂಟ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ನಮ್ಮ ನಾಡ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಎನ್.ಎನ್.ಓ ಕುಂದಾಪುರ ಘಟಕಾಧ್ಯಕ್ಷ ಎಸ್. ದಸ್ತಗಿರ್ ಸಾಹೇಬ್ ಕಂಡ್ಲೂರು, ಕಾರ್ಯಕ್ರಮದ ಸಂಯೋಜಕರಾದ ಅಬುಮೊಹಮ್ಮದ್ ಕುಂದಾಪುರ, ಮನ್ಸೂರ್ ಇಬ್ರಾಹಿಂ, ಕಮ್ಯೂನಿಟಿ ಸೆಂಟರ್ ನ ಉಪಾಧ್ಯಕ್ಷ ರಾದ ಜಮಾಲ್ ಗುಲ್ವಾಡಿ, ಕೋಶಾಧಿಕಾರಿ ಎಸ್ ಅನ್ವರ್ ಕಂಡ್ಲೂರ್, ನಮ್ಮ ನಾಡ ಒಕ್ಕೂಟ ಕೋಶಾಧಿಕಾರಿ ಪೀರ್ ಸಾಹೇಬ್, ಟಿ ಎಸ್ ಅನ್ಸಾರ್ ಉಡುಪಿ, ಮೊಹಮ್ಮದ್, ಗುಲ್ವಾಡಿ, ಅಬ್ದುಲ್ ಖಾದರ್ ಮೂಡ್ ಗೋಪಾಡಿ, ನಿಹಾರ್ ಅಹ್ಮದ್, ಜಾವದ್ ಅಕ್ಬರ್ ಹಂಗಾರಕಟ್ಟೆ ಉಪಸ್ಥಿತರಿದ್ದರು.

    ಕುಂದಾಪುರ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹುಸೈನ್ ಹೈಕಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಮ್ಮ ನಾಡ ಒಕ್ಕೂಟ ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಸದಸ್ಯ ಪಳ್ಳಿ ಉಸ್ಮಾನ್ ಗುಲ್ವಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

  • ಕುಂದಾಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

    ಕುಂದಾಪುರ, ಜೂ.30: ಸರಕಾರದ ಪಂಚಗ್ಯಾರಂಟಿ ಯೋಜನೆಯಲ್ಲಿ ಕುಂದಾಪುರ ತಾಲೂಕಿಗೆ ಮೇ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ರೂ.20,17,94,000, ಗೃಹಜ್ಯೋತಿ-4,22,05,681, ಅನ್ನಭಾಗ್ಯ-2,39,40,000, ಶಕ್ತಿಯೋಜನೆ-2,72,13,212, ಒಟ್ಟು ರೂ.29,51,52,893 ಲಭಿಸಿದೆ. ಈ ತನಕ ಒಟ್ಟು ರೂ. 373,51,12,371 ಕುಂದಾಪುರ ತಾಲೂಕಿಗೆ ಬಂದಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

    ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪಂಚಗ್ಯಾರಂಟಿ ಯೋಜನೆ ಕುಂದಾಪುರ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ತಾಲೂಕು ಮಟ್ಟದಲ್ಲಿ ಶಿಬಿರ ನಡೆಸಲು ಸರಕಾರದಿಂದ ಸೂಚನೆ ನೀಡಲಾಗಿದೆ. ಪಂಚಗ್ಯಾರಂಟಿ ಯೋಜನೆಯ ಫಲಾನುಭವಿಗಳ ಶಿಬಿರ, ಸಂವಾದ ಸಾಧಕ ಬಾಧಕಗಳ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಜು 4ರಂದು ಯೋಜನೆಯ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅವರು ಜಿಲ್ಲೆಗೆ ಆಗಮಿಸಲಿದ್ದು ಒಂದು ತಾಲೂಕಿನ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಸರಕಾರಿ ಬಸ್ ಸಮಸ್ಯೆ:

    ಅಮಾಸೆಬೈಲು ಜಡ್ಡಿನಗದ್ದೆ ಕೆಳಾಸುಂಕ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ನಿಗದಿತ ಸಮಯಕ್ಕೆ ಸರಿಯಾಗಿ ಸಂಚಾರ ಮಾಡಬೇಕು. ಎರಡು ಬಸ್‍ಗಳು ಸಂಚಾರ ಮಾಡಲೆಬೇಕು. ಸಮಯದ ಬದಲಾವಣೆ ಮಾಡುತ್ತಾ ಇದ್ದರೆ ನಿತ್ಯ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಸಮಿತಿ ಸದಸ್ಯ ವಸುಂಧರ ಹೆಗ್ಡೆ ಹೇಳಿದರು.

    ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಉತ್ತರಿಸಿ ಈಗಾಗಲೇ ಜಡ್ಡಿನಗದ್ದೆ ಕೆಳಾಸುಂಕ ಬಸ್ ಸಂಚಾರ ಆರಂಬಿಸಿದೆ. ಬಡಾಕೆರೆ, ಕೊಲ್ಲೂರು-ಬೈಂದೂರು ಬಸ್ ಗಳಿಗೆ ಪರವಾನಿಗೆ ಆಗಿದೆ. ಇನ್ನೂ ಸಮಯ ನಿಗದಿಯಾಗಿಲ್ಲ ಎಂದರು.
    ಇತ್ತೀಚೆಗೆ ಸಾರಿಗೆ ಸಚಿವರು ಕೋಟೇಶ್ವರಕ್ಕೆ ಬಂದಾಗ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ಕೊಲ್ಲೂರು-ವಂಡ್ಸೆ-ಅಂಪಾರು-ಶಂಕರನಾರಾಯಣ ಮಾರ್ಗದಲ್ಲಿ ಬಸ್ ಸೌಲಭ್ಯದ ಬಗ್ಗೆ ಮನವಿ ಮಾಡಿದ್ದರು. ಆಗ ಸಚಿವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಅದು ಏನಾಯಿತು? ಎಂದು ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು.

    ಈ ಬಗ್ಗೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಮೀಕ್ಷೆ, ಸಮಯ ನಿಗಧಿಯಾದ ತಕ್ಷಣ ಪರವಾನಿಗೆ ಲಭಿಸುತ್ತದೆ. ಕೊಲ್ಲೂರಿಗೆ ಬಸ್ ಬೇಡಿಕೆಯೂ ಇದೆ ಎಂದರು. ಈಗಾಗಲೆ ಚಾಲಕರ ನೇಮಕಾತಿಯಲ್ಲಿ ಕುಂದಾಪುರಕ್ಕೆ 60 ಜನರನ್ನು ನೀಡಿದ್ದಾರೆ. ತರಬೇತಿ ಬಳಿಕ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೆ ಎಂದರು.
    ಕುಂದಾಪುರದ ಶಾಸ್ತ್ರೀ ಸರ್ಕಲ್ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆಗೆ ಅವಕಾಶ ಬೇಕು ಸದಸ್ಯೆ ಆಶಾ ಕರ್ವೇಲ್ಲೋ ತಿಳಿಸಿದರು. ಉತ್ತರಿಸಿದ ಕುಂದಾಪುರ ಘಟಕದ ಅಧಿಕಾರಿ ಈಗಾಗಲೇ ಆರ್.ಎನ್.ಶೆಟ್ಟಿ ಹಾಲ್ ಹತ್ತಿರ ನಿಲುಗಡೆ ಮಾಡಲಾಗುತ್ತದೆ ಎಂದರು.

    ಇದಕ್ಕೆ ಪ್ರತಿಸ್ಪಂದಿಸಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಇಲ್ಲಿ ತಾತ್ಕಾಲಿಕ ನಿಲಗಡೆ ಮಾಡಲು ಸಭೆ ನಿರ್ಣಯ ಮಾಡಿ, ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡೋಣ. ಸಂಚಾರ ಸಮಸ್ಯೆಯಾಗುತ್ತದೆ. ಏನಾದರೂ ಪರಿಹಾರ ಕಂಡುಕೊಳ್ಳೋಣ ಎಂದರು.
    ಸದಸ್ಯ ಗಣೇಶ್ ಮಾತನಾಡಿ ಕೆಎಸ್‍ಆರ್‍ಟಿಸಿ ಬಸ್ ಆರಂಭಿಸುವಾಗ ಶಾಲಾ ಕಾಲೇಜು ವೇಳೆಗೆ ಸರಿಯಾಗಿ ಆರಂಭಿಸಿ ಎಂದರು.

    ಮೆಸ್ಕಾಂ ಕಂಬಕ್ಕೆ ಡಿಶ್ ಕೇಬಲ್: ನಿಬಂಧನೆ ನಿರ್ಲಕ್ಷ್ಯ:

    ಮೆಸ್ಕಾಂಗೆ ಸಂಬಂಧಿಸಿ ಸಾಕಷ್ಟು ಚರ್ಚೆ ನಡೆಯಿತು. ಮೆಸ್ಕಾಂ ಕಂಬಗಳಿಗೆ ಡಿಶ್ ಕೇಬಲ್ ಅಳವಡಿಸಿದ್ದಲ್ಲಿ ಅದಕ್ಕೆ ಇಲಾಖಾ ನಿಯಮಾನುಸಾರ ಸೂಕ್ತ ಶುಲ್ಕವನ್ನು ಪಡೆಯಲಾಗುತ್ತದೆ. 2025-26ನೇ ಸಾಲಿನಲ್ಲಿ ಒಟ್ಟು 3421 ಕಂಬಳಗಳ ಮೂಲಕ ಡಿಶ್ ಕೇಬಲ್ ಅಳವಡಿಸಿದ್ದು ಕಂಬಗಳ ಬಾಬ್ತು ರೂ.4,03,648 ಬೇಡಿಕೆ ಮಾಡಲಾಗಿದೆ ಎಂದು ಮೇಸ್ಕಾಂ ಅಧಿಕಾರಿಗಳು ತಿಳಿಸಿದರು.

    ಕೇಬಲ್ ಅಳವಡಿಕೆ ನಿಯಮಗಳನ್ನು ಪಾಲನೆ ಮಾಡುವುದು ಕಡಿಮೆಯಾಗಿದೆ. ಇತ್ತೀಚೆಗೆ ಜನ್ನಾಡಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಕೇಬಲ್ ವಯರ್‍ಗಳು ಜೋತಾಡುತ್ತಿರುವುದು ಅಪಾಯವನ್ನುಂಟು ಮಾಡುತ್ತವೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸದಸ್ಯರು ಹೇಳಿದರು. ವಸುಂಧರ ಹೆಗ್ಡೆ ಮಾತನಾಡಿ ವಿದ್ಯುತ್ ವ್ಯತಯ ಸಮಸ್ಯೆ, ಗಾಳಿ ಮಳೆಯಿಂದ ವಿದ್ಯುತ್ ಕಡಿತವಾಗುವಂತಹದ್ದು, ವೋಲ್ಟೇಜ್ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಅವಕಾಶವಿದೆ ಎಂದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಮೇಸ್ಕಾಂಗೆ ನೀಡುವುದು, ಹಾಗೂ ಸ್ಥಳ ಕಾದಿರುಸುವ ಸಲುವಾಗಿ ಪಂಚಾಯತ್ ಗೆ ಮನವಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.

    ಹೆಚ್ಚುವರಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಆಗ್ರಹ:

    ಗಂಗೊಳ್ಳಿ ಅತೀ ಹೆಚ್ಚು ಜನವಸತಿ ಇರುವ ಪ್ರದೇಶ. ಲೈನ್ ಮ್ಯಾನ್‍ಗಳ ಸೇವೆ ಸರಿಯಾಗಿ ಸಿಗುತ್ತಿಲ್ಲ. ರಾತ್ರಿ ವೇಳೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ತುಂಬಾ ಅಗತ್ಯವಿದೆ. ತುರ್ತಾಗಿ ಗಂಗೊಳ್ಳಿಗೆ ಲೈನ್ ಮ್ಯಾನ್ ವ್ಯವಸ್ಥೆ ಮಾಡಿ ಎಂದು ಸದಸ್ಯ ಜಹೀರ್ ಆಹಮ್ಮದ್ ಗಂಗೊಳ್ಳಿ ಹೇಳಿದರು.

    ಇದಕ್ಕೆ ಉತ್ತರಿಸಿದ ಅಧಿಕಾರಿಗಳು ವಿಶೇಷ ಮಾನ್ಸೂನ್ ಪಡೆಗಳನ್ವಯ ಗಂಗೊಳ್ಳಿ ಭಾಗಕ್ಕೆ 2 ಲೈನ್ ಮ್ಯಾನ್ ಗಳನ್ನು ನೀಡಲಾಗಿದೆ. ಹಾಗೂ ಕಂಪೆನಿಯ ವತಿಯಿಂದಲೂ ಕೂಡ, ಈಗಾಗಲೇ ಹೊಸದಾಗಿ ಖಾಯಂ ಲೈನ್ ಮ್ಯಾನ್ ಗಳನ್ನು ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

    ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು 529 ಕೊರಗ ಕುಟುಂಬಗಳಲ್ಲಿ 70 ಕೊರಗ ಕುಟುಂಬಗಳನ್ನು ಈ ಯೋಜನೆಗೆ ನೋಂದಾಯಿಸಲು ಬಾಕಿ ಇದ್ದು 4 ಕುಟುಂಬಗಳನ್ನು ನೋಂದಾಯಿಸಿಕೊಳ್ಳಲಾಗಿದೆ. ಒಂದು ಕುಟುಂಬ ಯಜಮಾನಿಯ ಬೆರಳಚ್ಚು ದಾಖಲಾಗದೆ ಆಧಾರ್‍ಗೆ ಮೊಬೈಲ್ ಸಂಖ್ಯೆ ನಮೊದಿಸಲು ಆಗುತ್ತಿಲ್ಲ ಎಂದು ಶಿಶು ಅಭಿವೃದ್ದಿ ಯೋಜನೆಯ ಅಧಿಕಾರಿ ತಿಳಿಸಿದರು. ಈ ಬಗ್ಗೆ ಆ ಫಲಾನುಭವಿಯನ್ನು ಯೋಜನೆಗೆ ನೊಂದಾಯಿಸಲು ಕ್ರಮ ವಹಿಸುವುದಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಸದಸ್ಯರಾದ ವಸುಂಧರ ಹೆಗ್ಡೆ, ಚಂದ್ರ ಕಾಂಚನ್, ಅಭಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಗಣೇಶ್, ಕೆ.ಪ್ರದೀಪ್ ಕುಮಾರ್ ಶೆಟ್ಟಿ, ಅರುಣ, ಹರ್ಷ ಶೆಟ್ಟಿ ಸವಿತಾ ಪೂಜಾರಿ, ಮಂಜು ಕೊಠಾರಿ, ಜಹೀರ್ ಅಹಮದ್ ಉಪಸ್ಥಿತರಿದ್ದರು.

    ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರಕಾಶ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

  • ಕುಂಜಾಲು ದನದ ಕಳೇಬರವನ್ನು ರಸ್ತೆಯಲ್ಲಿ ಎಸೆದ ಪ್ರಕರಣ: ಕೂಲಂಕಷ ತನಿಖೆಗೆ ಎಸ್ ಡಿ ಪಿ ಐ ಆಗ್ರಹ

    ಉಡುಪಿ: ಜಿಲ್ಲೆಯ ಕುಂಜಾಲು ಎಂಬ ಪ್ರದೇಶದಲ್ಲಿ ದನದ ಕಳೇಬರಗಳನ್ನು ರಸ್ತೆಯಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. 

    ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ಕುಂಜಾಲು ಪರಿಸರದ ಜನರ ಮನಸ್ಸಿನಲ್ಲಿ ಕೋಮು ವಿಷವನ್ನು ಬಿತ್ತಿ ಆ ಮೂಲಕ ತಮ್ಮ ರಾಜಕೀಯ ಬಳೆ ಬೇಯಿಸಲು ಈ ರೀತಿಯ ಕೃತ್ಯಗಳನ್ನು ಮಾಡಿರುವ ಶಂಕೆಯಿದೆ. ಇದಕ್ಕಿಂತ ಮುಂಚೆಯೂ ಸಹ ಈ ಪರಿಸರದಲ್ಲಿ ಇಂತಹದೇ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿದ್ದರು. 

    ಅಲ್ಲದೆ ದನದ ವಿಷಯದಲ್ಲಿ ರಾಜಕೀಯವನ್ನು ಮಾಡಿ ಪಕ್ಷವೊಂದು ಜಿಲ್ಲೆಯಲ್ಲಿ ತನ್ನ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಿತ್ತು. ಆದ್ದರಿಂದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಷ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ಇದರ ಹಿಂದೆ ಇರುವ ಷಡ್ಯಂತರವನ್ನು ಬಯಲಿಗೆಲೆಯಬೇಕು ಎಂದು ಎಚ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ

  • ಉಡುಪಿ: ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಅಹ್ವಾನ

    ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಫಿಲಿಯೇಟೆಡ್ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ ನೊಂದಾಯಿಸಲಾದ ಮಂಡಳಿಗಳು, ಸೊಸೈಟಿಗಳು ಹಾಗೂ ಟ್ರಸ್ಟ್ಗಳಿಂದ ಅರ್ಜಿ ಅಹ್ವಾನಿಸಿದೆ.

    ಆಸಕ್ತ ಸಂಸ್ಥೆಗಳು ಬಿ.ಎಸ್ಸಿ. (ಹಾನರ್ಸ್) ಕೃಷಿ, ಬಿ.ಟೆಕ್ ಕೃಷಿ ಇಂಜಿನಿಯರಿಂಗ್, ಬಿ.ಟೆಕ್. ಕೃಷಿ ಬಯೋಟೆಕ್ನಾಲಜಿ, ಬಿ.ಟೆಕ್. ಫುಡ್ ಟೆಕ್ನಾಲಜಿ, ಬಿ.ಎಸ್ಸಿ. (ಹಾನರ್ಸ್) ಅರಣ್ಯ, ಬಿ.ಎಸ್ಸಿ. (ಹಾನರ್ಸ್) ಕಮ್ಯೂನಿಟಿ ವಿಜ್ಞಾನ, ಬಿ.ಎಸ್ಸಿ. (ಹಾನರ್ಸ್) ಫುಡ್ ನ್ಯೂಟ್ರೀಶನ್ ಮತ್ತು ಡೈಯಟಿಕ್ಸ್, ಬಿ.ಎಸ್ಸಿ. (ಹಾನರ್ಸ್) ತೋಟಗಾರಿಕೆ ಮತ್ತು ಬಿ.ಎಸ್ಸಿ. (ಹಾನರ್ಸ್) ರೇಷ್ಮೆ ಕೃಷಿ ಪದವಿ ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ.

    ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಫಿಲಿಯೇಶನ್‌ಗಾಗಿ ಕನಿಷ್ಟ ಮಾನದಂಡಗಳನ್ನು, ಹೆಚ್ಚಿನ ವಿವರ, ನಿಬಂಧನೆಗಳು ಮತ್ತು ಅರ್ಜಿಗಾಗಿ ವೆಬ್‌ಸೈಟ್ www.uahs.edu.in ಅನ್ನು ಸಂಪರ್ಕಿಸಬಹುದಾಗಿದೆ. ಅಫಿಲಿಯೇಶನ್‌ಗಾಗಿ ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನ. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಈ ಸಾಲಿಗೆ ಪರಿಗಣಿಸಲಾಗುವುದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ. 

  • ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ; 10 ಮಂದಿಯ ಬಂಧನ

    ಕುಂದಾಪುರ: ಸಿದ್ದಾಪುರ ಗ್ರಾಮದ ಮಂಜುನಾಥ್ ಕಾಂಪ್ಲೆಕ್ಸ್ ಕಟ್ಟಡದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಂಘಟಿತರಾಗಿ ಹಣವನ್ನು ಪಣವಾಗಿರಿಸಿ ಅಂದರ್ ಬಾಹರ್ ಜೂಜಾಟ ಆಟ ಆಡುತ್ತಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

    ಬಂಧಿತ ಆರೋಪಿಗಳನ್ನು ಬಂಧಿತರನ್ನು ಸುಬ್ರಹ್ಮಣ್ಯ, ಅಶ್ರಫ್, ಸುನೀಲ್, ಧೀರಜ್, ಶಂಕರ, ಸುಧೀರ್ ಕುಮಾರ್, ಮಧುಕರ, ಮನೋಹರ, ಗಣೇಶ್, ರಾಮ್ ಎಂದು ಗುರುತಿಸಲಾಗಿದೆ.

    ಬಂಧಿತರಿಂದ 8,810 ರೂ ನಗದು, 10 ಮೊಬೈಲ್ ಫೋನ್, ಜೂಜಾಟ ಆಡಲು ಬಂದಿದ್ದ 3 ಮೋಟಾರು ಸೈಕಲ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಟ್ಕಳದಲ್ಲಿ ಭಾರೀ ಮಳೆ: ಶಿಕ್ಷಣ ಸಂಸ್ಥೆಗಳಿಗೆ ರಜೆ; ರೆಡ್ ಅಲರ್ಟ್ ಜಾರಿ

    ಭಟ್ಕಳ: ಇಂದು ಬೆಳಿಗ್ಗೆಯಿಂದ ಭಟ್ಕಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮುಂಗಾರಿನ ತೀವ್ರ ಮಳೆಯಿಂದಾಗಿ ಹಲವು ಕಡಿಮೆ ಎತ್ತರದ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳು ನದಿಗಳಂತೆ ಕಾಣುತ್ತಿವೆ. ಹವಾಮಾನ ಇಲಾಖೆಯು ಜೂನ್ 14ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾರೀ ಮಳೆಯಾಗುವ ಸಾಧ್ಯತೆಯನ್ನು ಮುನ್ಸೂಚನೆ ಮಾಡಿದೆ.

    ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಚ್ಚರಿಕೆಯ ಕ್ರಮವಾಗಿ ಭಟ್ಕಳ ತಾಲೂಕಿನ ಎಲ್ಲಾ ಶಾಲೆಗಳಿಗೆ ಶುಕ್ರವಾರ, ಜೂನ್ 13ರಂದು ರಜೆ ಘೋಷಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಳೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸೂಚನೆ ನೀಡಲಾಗಿದೆ.

    ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹವಾದ ಕಾರಣ ಸಂಚಾರ ವ್ಯವಸ್ಥೆ ತೀವ್ರವಾಗಿ ಕುಂಠಿತವಾಗಿದೆ. ವಿಶೇಷವಾಗಿ ಶಂಸುದ್ದೀನ್ ಸರ್ಕಲ್ ಮತ್ತು ರಂಗೀನ್ ಕಟ್ಟೆಯ ಸಮೀಪದ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಶಂಸುದ್ದೀನ್ ಸರ್ಕಲ್‌ನಲ್ಲಿ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ರಂಗೀನ್ ಕಟ್ಟೆಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದು, ನಾಗರಿಕರು ಕಾಲ್ನಡಿಗೆಯಲ್ಲಿ ಸಂಚರಿಸುವಂತಾಗಿದೆ.

    ಸ್ಥಳೀಯ ಆಡಳಿತ ಮತ್ತು ಪುರಸಭೆಯ ತಂಡಗಳು ನೀರಿನ ಒಡಕಿಗಾಗಿ ಶ್ರಮಿಸುತ್ತಿವೆಯಾದರೂ, ನಿರಂತರ ಮಳೆಯಿಂದಾಗಿ ಅವರ ಕಾರ್ಯದಲ್ಲಿ ಅಡೆತಡೆ ಉಂಟಾಗುತ್ತಿದೆ. ಹಳೆಯ ಒಳಚರಂಡಿ ವ್ಯವಸ್ಥೆ ಮತ್ತು ಒಡಕು ವ್ಯವಸ್ಥೆಯ ವೈಫಲ್ಯದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಹವಾಮಾನ ತಜ್ಞರ ಪ್ರಕಾರ, ಪಶ್ಚಿಮ ಕರಾವಳಿಯಲ್ಲಿ ಮುಂಗಾರಿನ ತೀವ್ರತೆ ಈಗ ಉತ್ತುಂಗದಲ್ಲಿದ್ದು, ಭಟ್ಕಳ, ಹೊನ್ನಾವರ, ಕಾರವಾರ ಸೇರಿದಂತೆ ಕರಾವಳಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.

    ಸೂಚನೆ: ರೆಡ್ ಅಲರ್ಟ್‌ನ ಹಿನ್ನೆಲೆಯಲ್ಲಿ ಸ್ಥಿರವಾಗಿ ಉಳಿಯಲು ಮತ್ತು ಅನಗತ್ಯವಾಗಿ ಹೊರಗೆ ಹೋಗದಂತೆ ಸ್ಥಳೀಯ ಜನತೆಗೆ ಮನವಿ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಕಂಟ್ರೋಲ್ ರೂಂ ಅಥವಾ ಅಗ್ನಿಶಾಮಕ ದಳದೊಂದಿಗೆ ಸಂಪರ್ಕಿಸಲು ಸೂಚಿಸಲಾಗಿದೆ.

  • ಬ್ರಹ್ಮಾವರ: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ; ಇಬ್ಬರು ವಶಕ್ಕೆ, ಪ್ರಕರಣ ದಾಖಲು

    ಬ್ರಹ್ಮಾವರ, ಜೂನ್ 07, 2025: ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುದರ್ಶನ್ ದೊಡಮನಿ ರವರು ದಿನಾಂಕ 06-06-2025 ರಂದು ರಾತ್ರಿ 8:30 ಗಂಟೆಗೆ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ, ನೀಲಾವರ ಗ್ರಾಮದ ಎಳ್ಳಂಪಳ್ಳಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಕ್ರಮವಾಗಿ ಮದ್ಯಪಾನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

    ಮಾಹಿತಿಯ ಆಧಾರದ ಮೇಲೆ, ರಾತ್ರಿ 8:50 ಗಂಟೆಗೆ ಸದರಿ ಸ್ಥಳಕ್ಕೆ ದಾಳಿ ನಡೆಸಿದಾಗ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ರಾತ್ರಿ ಸಮಯವಾದ್ದರಿಂದ ಪಂಚರು ಲಭ್ಯವಿರದಿದ್ದು, ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದ್ದ ಕಾರಣ, ತಕ್ಷಣವೇ ದಾಳಿ ನಡೆಸಿ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆಯಲ್ಲಿ ಅವರು ಮದ್ಯ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪೊಲೀಸರು ಆರೋಪಿಗಳಿಂದ DSP Black ಕಂಪನಿಯ 180 ML ಡಿಲಕ್ಸ್ ವಿಸ್ಕಿ ಖಾಲಿ ಪ್ಲಾಸ್ಟಿಕ್ ಬಾಟಲಿ-01, DSP Black ಕಂಪನಿಯ 90 ML ಡಿಲಕ್ಸ್ ವಿಸ್ಕಿ ತುಂಬಿದ ಟೆಟ್ರಾ ಪ್ಯಾಕ್-02, ಮದ್ಯ ಸೇವನೆಗೆ ಬಳಸಿದ ಪ್ಲಾಸ್ಟಿಕ್ ಗ್ಲಾಸ್-02, ಆಕ್ವಾ ಫಾರ್ಚೂನ್ ಎಂಬ 1 ಲೀಟರ್ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ-01, ಆಕ್ವಾ ಫಾರ್ಚೂನ್ ಎಂಬ ½ ಲೀಟರ್ ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿ-01, ಮತ್ತು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನ್ನು ವಶಪಡಿಸಿಕೊಂಡಿದ್ದಾರೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಎಕ್ಸೈಸ್ ಕಾಯಿದೆಯ ಕಲಂ 15 A ರ ಅಡಿಯಲ್ಲಿ ಅಪರಾಧ ಕ್ರಮಾಂಕ 126/2025 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಉಡುಪಿ: ಆನ್‌ಲೈನ್ ವಂಚನೆ – 4.92 ಲಕ್ಷ ರೂ. ಕಳೆದುಕೊಂಡ ಮಹಿಳೆ, ಪ್ರಕರಣ ದಾಖಲು

    ಉಡುಪಿ, ಜೂನ್ 06, 2025: ಉಡುಪಿಯ 26 ವರ್ಷದ ಮಹಿಳೆಯೊಬ್ಬರು ಟೆಲಿಗ್ರಾಂ ಆಪ್‌ನಲ್ಲಿ ಅಪರಿಚಿತ ವ್ಯಕ್ತಿಗಳಿಂದ ವಂಚನೆಗೊಳಗಾದ ಘಟನೆ ವರದಿಯಾಗಿದೆ. ದಿನಾಂಕ 01/06/2025 ರಂದು, ಅಪರಿಚಿತರು ಪಿರ್ಯಾದಿದಾರರನ್ನು ‘K&K GROUP’ ಎಂಬ ಗ್ರೂಪ್‌ಗೆ ಸೇರ್ಪಡೆ ಮಾಡಿ, ಕೆಲವು ಟಾಸ್ಕ್‌ಗಳನ್ನು ನೀಡಿ, ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿದ್ದಾರೆ.

    ಅದರಂತೆ, ಪಿರ್ಯಾದಿದಾರರು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ 01/06/2025 ರಿಂದ 04/06/2025 ರವರೆಗೆ ಹಂತಹಂತವಾಗಿ ಒಟ್ಟು 4,92,477 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಗಳು ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಭರವಸೆ ನೀಡಿದ ಲಾಭಾಂಶವನ್ನಾಗಲೀ ಮರಳಿಸದೇ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2025ರಡಿ ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿದೆ.

  • ಹೆಬ್ರಿಯಲ್ಲಿ ಗಂಡಸು ಕಾಣೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ಹೆಬ್ರಿ: ಗಿಲ್ಲಾಳಿ ಗ್ರಾಮದ ವಸಂತಿ (40) ಎಂಬುವವರು ತಮ್ಮ ಗಂಡ ಪ್ರಭಾಕರ (46) ಕಾಣೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಭಾಕರ ಕೂಲಿ ಕೆಲಸ ಮಾಡುತ್ತಿದ್ದು, ಮಧ್ಯಪಾನದ ಚಟ ಹೊಂದಿದ್ದರು. ಇವರು ಈ ಹಿಂದೆ 5-6 ಬಾರಿ ಕೆಲಸಕ್ಕೆಂದು ಮನೆಯಿಂದ ಹೊರಟು 2-3 ತಿಂಗಳು ಬಿಟ್ಟು ಮರಳಿದ್ದರು.

    ಆದರೆ, 2023ರ ಡಿಸೆಂಬರ್‌ನಲ್ಲಿ ಮನೆಯಿಂದ ಹೊರಟ ಪ್ರಭಾಕರ ಈವರೆಗೆ ವಾಪಸ್ ಬಂದಿಲ್ಲ. ಸಂಬಂಧಿಕರು ಮತ್ತು ಗ್ರಾಮದ ಸುತ್ತಮುತ್ತಲಿನ ವಿಚಾರಣೆಯಲ್ಲೂ ಯಾವುದೇ ಪತ್ತೆಯಾಗಿಲ್ಲ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025ರಂತೆ ಕಾಣೆಯಾದ ವ್ಯಕ್ತಿಯ ಪ್ರಕರಣ ದಾಖಲಾಗಿದೆ.

  • ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

    ಬೆಂಗಳೂರು, ಜೂನ್ 05, 2025: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

    ಘಟನೆ ಕುರಿತು ಇಂದು ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿತ್ತು. ಈ ಬಗ್ಗೆ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.

    ಎಜಿ ಶಶಿಕಿರಣ್ ಶೆಟ್ಟಿ ಪೀಠಕ್ಕೆ ವಿವರಣೆ ನೀಡಲಿದ್ದು, ವಕೀಲರಾದ ಹೇಮಂತ್ ರಾಜ್, ಜಿ.ಆರ್.ಮೋಹನ್ ಮಾಹಿತಿ ನೀಡಲಿದ್ದಾರೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು. ಭದ್ರತಾ ಲೋಪವಾಗಿದೆ ಎಂದು ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

    ಜನರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಭದ್ರತಾ ಲೋಪದ ಬಗ್ಗೆ ಸರ್ಕಾರದ ವರದಿ ಕೇಳಿದ್ದೇವೆ. ವಿಚಾರಣೆ 2:30ಕ್ಕೆ ನಿಗದಿಯಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.